ಮೂಡಲಗಿ:ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ನೀಡುವ ಅಪೂರ್ವ ಶಕ್ತಿಯು ಯೋಗದಲ್ಲಿದೆ : ಮುರುಳಿಧರ ತಳ್ಳಿಕೇರಿ
ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ನೀಡುವ ಅಪೂರ್ವ ಶಕ್ತಿಯು ಯೋಗದಲ್ಲಿದೆ : ಮುರುಳಿಧರ ತಳ್ಳಿಕೇರಿ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜೂ 21 :
ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ನೀಡುವ ಅಪೂರ್ವ ಶಕ್ತಿಯು ಯೋಗದಲ್ಲಿದೆ ಎಂದು ತಾಲೂಕ ದಂಡಧಿಕಾರಿ ಮುರುಳಿಧರ ತಳ್ಳಿಕೇರಿ ಹೇಳಿದರು.
ಅವರು ಸ್ಥಳೀಯ ಎಲ್. ವಾಯ್. ಅಡಿಹುಡಿ ಶಾಲಾ ಆವರಣದಲ್ಲಿ ಶ್ರೀ ಮಂಜುನಾಥ ಸೈನಿಕ ತರಭೇತಿ ಕೇಂದ್ರ, ಗಾರ್ಡನ್ ಅಭಿವೃದ್ದಿ ಸಂಸ್ಥೆ, ಬೆಳಗಾವಿ ನೆಹರು ಯುವ ಕೇಂದ್ರ, ಯುವ ಜೀವನ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಯೋಗ ದಿನಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ, ಯೋಗ ಕೇವಲ ಆಸನಾಭ್ಯಾಸವಲ್ಲ ಮನುಷ್ಯನಲ್ಲಿ ಅಡಗಿರುವ ದೈವತ್ವವನ್ನು ಜಾಗೃತಗೊಳಿಸಿ ನಮ್ಮ ಜೀವನದ ಗುರಿಯತ್ತ ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತದೆ. ಅದಕ್ಕಾಗಿ ನಾವು ಯೋಗಕ್ಕೆ ಶರಣಾಗಬೇಕು. ಇಂದಿನ ವೇಗದ ವ್ಯವಸ್ಥೆಯಲ್ಲಿ ಮನುಷ್ಯನ ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ಒತ್ತಡ ಬೀಳುತ್ತಿದ್ದು, ಅಂಥ ಒತ್ತಡದಿಂದ ಮುಕ್ತರಾಗಲು ನಿತ್ಯ ಯೋಗವನ್ನು ರೂಢಿಸಿಕೊಳ್ಳುವುದು ಅವಶ್ಯವಿದೆ. ಯುವಶಕ್ತಿಯೂ ದೇಶದ ಆಸ್ತಿಯಾಗಿದ್ದು ಯುವಕರು ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮೂಡಲಗಿ ವೃತ್ತ ನೀರಿಕ್ಷಕ ವೆಂಕಟೇಶ ಮುರನಾಳ ಮಾತನಾಡಿ, ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆ ಯೋಗ. “ಯೋಗೋ ರಕ್ಷತಿ ರಕ್ಷಿತಃ” ಎಂಬ ಉಕ್ತಿಯಂತೆ ಮಾನವ ಸಂಕುಲವನ್ನು ರಕ್ಷಿಸುವಲ್ಲಿ ಯೋಗವು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಯೋಗವನ್ನು ಕೇವಲ ಒಂದು ದಿನದ ಕಾರ್ಯಕ್ರಮಕ್ಕಾಗಿ ಅಯೋಜಿಸದೇ ಪ್ರತಿನಿತ್ಯವೂ ಮಾಡುವ ರೂಡಿಯನ್ನು ಬೆಳೆಸಿಕೊಳ್ಳಬೇಕು. ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯ ರಕ್ಷಣೆ ಹಾಗೂ ರೋಗಗಳನ್ನು ನಿಯಂತ್ರಿಸಬಹುದು ಎಂದರು.
ನ್ಯಾಯವಾದಿ ಎಲ್.ವಾಯ್ ಅಡಿಹುಡಿ ಮಾತನಾಡಿ, ಯೋಗವನ್ನು ಪುಸ್ತಕದಿಂದ ಓದಿ ಕಲಿಯದೆ ಗುರುವಿನ ಮೂಲಕ ಕಲಿತು ಅಭ್ಯಾಸ ಮಾಡಿದರೆ ಆರೋಗ್ಯವಂತರಾಗಿ ಸದೃಡ ಬದುಕು ಪಡೆಯಲು ಸಾಧ್ಯವಿದೆ. ಬಾಲ್ಯದಿಂದಲೇ ಯೋಗಭ್ಯಾಸವನ್ನು ರೂಢಿಸಿಕೊಂಡರೆ ಮುಪ್ಪಿನಲ್ಲೂ ಯುವಕರಂತೆ ಬಾಳಬಹುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಯುವ ಒಕ್ಕೂಟಗಳ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ, ರೋಗ ಬಂದ ಮೇಲೆ ಯೋಗ ಮಾಡುವ ಬದಲು ರೋಗ ಬರದಂತೆ ಇಂದಿನಿಂದಲೇ ಯೋಗ ಮಾಡಿ ಆರೋಗ್ಯವಂತರಾಗಿ ಎಂದು ಕರೆ ನೀಡಿದರು.
ಯೋಗ ಶಿಕ್ಷಕ ಎಸ್.ಎಲ್ ಜೋಡಟ್ಟಿ ನೇತೃತ್ವದಲ್ಲಿ ಯೋಗ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಹಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹನುಮಂತ ತಾಳಿಕೋಟೆ, ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್, ಕಾರ್ಯದರ್ಶಿ ಸುಭಾಸ್ ಗೊಡ್ಯಾಗೋಳ, ಯುವ ಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಈರಪ್ಪ ಢವಳೇಶ್ವರ, ತಾಲೂಕು ಪ್ರೆಸ್ ಅಸೋಸಿಯೇಷನ್ ಉಪಾಧ್ಯಕ್ಷ ಸಿ.ಎಮ್.ಚಂದ್ರಶೇಖರ, ಮಧು ಗೌಡ, ಮಂಜು ಕುಂಬಾರ, ಮತ್ತಿತರರು ಭಾಗವಹಿಸಿದ್ದರು.