ಗೋಕಾಕ:ಗಣೇಶ ಹಬ್ಬ ಮತ್ತು ಮೋಹರಂ ಹಬ್ಬವನ್ನು ಸರ್ವ ಧರ್ಮಿಯರು ಶಾಂತಿ, ಸ್ನೇಹ, ಸೌಹಾರ್ದತೆಯಿಂದ ಆಚರಿಸಬೇಕು
ಗಣೇಶ ಹಬ್ಬ ಮತ್ತು ಮೋಹರಂ ಹಬ್ಬವನ್ನು ಸರ್ವ ಧರ್ಮಿಯರು ಶಾಂತಿ, ಸ್ನೇಹ, ಸೌಹಾರ್ದತೆಯಿಂದ ಆಚರಿಸಬೇಕು
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಅ 29 :
ಸ್ನೇಹ, ಸೌಹಾರ್ದತೆಯ ಪ್ರತೀಕವಾಗಿರುವ ಗಣೇಶ ಹಬ್ಬ ಮತ್ತು ಮೋಹರಂ ಹಬ್ಬ ಒಂದೇ ತಿಂಗಳಲ್ಲಿ ಬಂದಿರುವದರಿಂದ ಗಣೇಶ ಹಬ್ಬ ಮತ್ತು ಮೋಹರಂ ಹಬ್ಬವನ್ನು ಸರ್ವ ಧರ್ಮಿಯರು ಶಾಂತಿ, ಸ್ನೇಹ, ಸೌಹಾರ್ದತೆಯಿಂದ ಆಚರಿಸಬೇಕು ಎಂದು ಗೋಕಾಕ ಡಿವೈಎಸ್ಪಿ ಡಿ.ಟಿ.ಪ್ರಭು ಅವರು ಹೇಳಿದರು.
ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ, ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಬುಧವಾರ ಆ.28 ರಂದು ನಡೆದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದರು.
ಮಹಾಮಳೆಗೆ ಗೋಕಾಕ-ಮೂಡಲಗಿ ತಾಲೂಕಿನ ಹಲವಾರು ಹಳ್ಳಿಗಳು ನೆರೆ ಪ್ರವಾಹಕ್ಕೆ ನಲುಗಿ ಹೋಗಿವೆ. ಗಣೇಶ ಹಬ್ಬವನ್ನು ಸ್ಥಳೀಯರು ದುಂದು ವೆಚ್ಚ ಮಾಡಿ ಆಚರಿಸುವ ಬದಲು ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಬೇಕು. ಗಣೇಶ ವಿಸರ್ಜನೆಯ ಸಮಯದಲ್ಲಿ ಡಾಲ್ಬಿ ಸೌಂಡ ಸಿಸ್ಟಮ್ ಬಳಸುವುದು ನಿಷೇದಿಸಲಾಗಿದೆ. ಸಾಮಾನ್ಯ ಧ್ವನಿವರ್ದಕ ಬಳಕೆಗೆ ಅವಕಾಶವಿದ್ದು, ಸಿಪಿಐ ಕಛೇರಿಯಿಂದ ಸಾಮಾನ್ಯ ಧ್ವನಿವರ್ದಕ ಬಳಕೆಗೆ ಅನುಮತಿ ಪಡೆಯಬೇಕು. ಅಶ್ಲೀಲ, ಕೋಮು ಗಲಭೆ ಪ್ರಚೋದಿಸುವ ಹಾಡು, ಸಂಭಾಷಣೆಗಳನ್ನು ಬಿತ್ತರಿಸಬಾರದು ಎಂದು ಡಿವೈಎಸ್ಪಿ ಡಿ.ಟಿ.ಪ್ರಭು ಸ್ಥಳೀಯರಿಗೆ ಸಲಹೆಗಳನ್ನು ತಿಳಿಸಿದರು.
ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ಹಾಗೂ ಕುಲಗೋಡ ಪೊಲೀಸ್ ಠಾಣೆಯ ಪಿಎಸ್ಐ ಎಚ್.ಕೆ.ನರಳೆ ಅವರು ಮಾತನಾಡಿ, ಗ್ರಾಮದಲ್ಲಿ ಶಾಂತಿ, ಸೌಹಾರ್ದತೆಯಿಂದ ಸ್ಥಳೀಯರು ಇರಬೇಕು. ಮುಂಬರುವ ಗಣೇಶ ಹಾಗೂ ಮೊಹರಂ ಹಬ್ಬವನ್ನು ಅಹಿತಕರ ಘಟನೆ ನಡೆಯದಂತೆ ಶಾಂತತೆಯಿಂದ ಆಚರಿಸಬೇಕು ಎಂದರು.
ಸ್ಥಳೀಯ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಶಿವು ಲೋಕನ್ನವರ, ರವಿ ಪರುಶೆಟ್ಟಿ, ದಸ್ತಗೀರ ಮುಲ್ತಾನಿ, ಗ್ರಾಪಂ ಅಧ್ಯಕ್ಷ ಜಾಕೀರ ಜಮಾದಾರ, ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ ಉದ್ದಪ್ಪನ್ನವರ, ಕುಲಗೋಡ ಪೊಲೀಸ್ ಠಾಣೆಯ ಎಎಸ್ಐ ಐ. ಎಮ್.ಬೇಪಾರಿ, ಕೌಜಲಗಿ ಗ್ರಾಮದ ಬೀಟ್ಪೇದೆ ಎಲ್.ಎಮ್.ನಾಯಕ, ವಿ.ಆರ್.ಗಲಬಿ, ಸೇರಿದಂತೆ ಸ್ಥಳೀಯ ಬೀಟ್ ಸದಸ್ಯರು, ಸ್ಥಳೀಯರು ಇದ್ದರು.