ಗೋಕಾಕ:ಕೊರೋನಾ 3ನೇ ಅಲೆ ಹಾಗೂ ಪ್ರವಾಹ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಟೀಂ ಆಗಿ ಕಾರ್ಯನಿರ್ವಹಿಸಿ : ಶಾಸಕ ಬಾಲಚಂದ್ರ
ಕೊರೋನಾ 3ನೇ ಅಲೆ ಹಾಗೂ ಪ್ರವಾಹ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಟೀಂ ಆಗಿ ಕಾರ್ಯನಿರ್ವಹಿಸಿ : ಶಾಸಕ ಬಾಲಚಂದ್ರ
ನಮ್ಮ ಬೆಳಗಾವಿ ಇ – ವಾರ್ತೆ,ಗೋಕಾಕ ಜು 16 :
ಸಂಭವನೀಯ ಕೊರೋನಾ 3ನೇ ಅಲೆ ಹಾಗೂ ಪ್ರವಾಹ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಟೀಂ ಆಗಿ ಕಾರ್ಯನಿರ್ವಹಿಬೇಕೆಂದು ಕೆಎಂಎಫ್ ಅಧ್ಯಕ್ಷ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು
ಶುಕ್ರವಾರದಂದು ನಗರದ ತಾಲೂಕಾ ಪಂಚಾಯಿತಿ ಸಭಾಂಗಣದಲ್ಲಿ ಕರೆದ ಗೋಕಾಕ ಹಾಗೂ ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು .
ಜುಲೈ ಕೊನೆಯ ವಾರದಿಂದ ಅಗಸ್ಟ ಕೊನೆಯವರೆಗೆ ಪ್ರವಾಹ ಎದುರಾಗುವ ಸಾಧ್ಯತೆ ಇದ್ದು, ಪ್ರವಾಹದಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಜಾಗೃತಿ ವಹಿಸಿ ಕಾರ್ಯನಿರ್ವಹಿಸಬೇಕು. ಈಗಿನಿಂದಲೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಮುಳುಗಡೆ ಪ್ರದೇಶದ ಯಾವೆಲ್ಲಾ ಕ್ರಮಗಳನ್ನು ತಗೆದುಕೊಳ್ಳಬೇಕು ಎಂಬ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಸಭೆಗಳನ್ನು ಮಾಡಿ ಯಾವುದೇ ಅವಗಡ ಸಂಭವಿಸದಂತೆ ಮುತುವರ್ಜಿ ವಹಿಸಬೇಕು.
ಮಹಾರಾಷ್ಟ್ರ , ಕೇರಳ ಹಾಗೂ ತಮಿಳುನಾಡುಗಳಲ್ಲಿ ಸಂಭವನೀಯ ಕೊರೋನಾ ಮೂರನೇ ಅಲೆ ಹರಡುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಗೋಕಾಕ ಹಾಗೂ ಮೂಡಲಗಿ ತಾಲೂಕಿನಾದ್ಯಂಥ ಸಂಭವನೀಯ ಕೊರೋನಾ ಮೂರನೇ ಅಲೆಯನ್ನು ತಡೆಯಲು ಅಧಿಕಾರಿಗಳು ಶ್ರಮವಹಿಸಿ ಕಾರ್ಯಮಾಡಬೇಕು. ಈಗಾಗಲೇ ಗೋಕಾಕ ನಗರದಲ್ಲಿ 1 ಆಕ್ಸಿಜನ್ ಪ್ಲಾಂಟ ಮಂಜೂರಾಗಿದ್ದು, ಇಷ್ಟರಲ್ಲೇ ಇನ್ನೊಂದು ಆಕ್ಸಿಜನ್ ಪ್ಲಾಂಟ್ ಮಂಜೂರಾಗಲಿದೆ. ಇದರಿಂದ ಏಕಕಾಲಕ್ಕೆ ಸುಮಾರು 200 ರೋಗಿಗಳನ್ನು ಚಿಕಿತ್ಸೆ ನೀಡಬಹುದು. ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಶಾಸಕರ ನಿಧಿಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಿಗೆ ಆಂಬುಲೆನ್ಸ್ ಗಳನ್ನು ನೀಡಲಾಗಿದ್ದು , ಅವುಗಳಿಗೆ ಆಕ್ಸಿಜನ್ ಅಳವಡಿಸುವ ಕಾರ್ಯ ನಡೆದಿದ್ದು, ಶೀಘ್ರದಲ್ಲೇ ಅವುಗಳು ರೋಗಿಗಳ ಸೇವೆಗೆ ಲಭ್ಯವಾಗಲಿವೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಂಭವನೀಯ ಮೂರನೇ ಅಲೆಯನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ತಮ್ಮ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕೊರೋನಾ ಬಗ್ಗೆ ತಗೆದುಕೊಳ್ಳ ಬಹುದಾದ ಜಾಗೃತಿಗಳ ಬಗ್ಗೆ ಅರಿವು ಮೂಡಿಸಿ ಕೊರೋನಾ ಹರಡದಂತೆ ನಿಗಾ ವಹಿಸಬೇಕು. ಒಂದು ವೇಳೆ ಕೊರೋನಾ ಮೂರನೇ ಅಲೆ ಎದುರಾದರೆ ಅದನ್ನು ಸಮರ್ಥವಾಗಿ ನಿಭಾಯಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರಗಳಾದ ಪ್ರಕಾಶ ಹೊಳೆಪ್ಪಗೋಳ, ಡಿ.ಜಿ.ಮಹಾಂತ, ತಾಲೂಕಾ ಆರೋಗ್ಯಾಧಿಕಾರಿ ಡಾ. ಮುತ್ತಣ್ಣ ಕೋಪ್ಪದ, ಹಿರಿಯ ವೈದ್ಯ ಡಾ. ಆರ್.ಎಸ್.ಬೆನಚಿನಮರಡಿ, ಬಿಇಓ ಅಜೀತ ಮನ್ನೀಕೇರಿ ಸಿಪಿಐ ಮುರನಾಳ, ಪಿಎಸ್ಐಗಳಾದ ಬಾಲಶೆಖರ ಬಂದಿ, ನಾಗರಾಜ್ ಕಿಲಾರೆ, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.