ಬೆಳಗಾವಿ:ಮೂಡಲಗಿ ತಾಲೂಕ ತಡೆಯುದು ಅನಿವಾರ್ಯವಾಗಿತ್ತು : ಸಚಿವ ರಮೆಶ ಸರ್ಮಥನೆ
ಮೂಡಲಗಿ ತಾಲೂಕ ತಡೆಯುದು ಅನಿವಾರ್ಯವಾಗಿತ್ತು : ಸಚಿವ ರಮೆಶ ಸರ್ಮಥನೆ
ಬೆಳಗಾವಿ ಸೆ 17 : ಮೂಡಲಗಿ ತಾಲೂಕು ಆಗದಂತೆ ತಡೆಯುವಲ್ಲಿ ನನ್ನ ಪಾತ್ರ ಇದೆ. ನಾನು ಪ್ರತಿನಿಧಿಸುವ ಗೋಕಾಕ ಕ್ಷೇತ್ರದ ಜನಗಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಹೀಗೆ ಮಾಡುವುದು ಅನಿವಾರ್ಯವಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ರವಿವಾರ ಮಾತನಾಡಿದ ಸಚಿವರು ಮೂಡಲಗಿ ತಾಲೂಕು ರಚನೆಯಾಗಿದ್ದರೆ ಗೋಕಾಕ ಫಾಲ್ಸ್ ಪ್ರದೇಶ ಬಿಟ್ಟು ನನ್ನ ಕ್ಷೇತ್ರದ ಎಲ್ಲ ಹಳ್ಳಿಗಳೂ ಆ ತಾಲೂಕಿಗೆ ಸೇರುತ್ತಿದ್ದವು. ಗೋಕಾಕ ವ್ಯಾಪ್ತಿಯನ್ನೊಳಗೊಂಡ ನನ್ನ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿತ್ತು. ಇದೆಲ್ಲ ಗೊತ್ತಿದ್ದು ನನ್ನ ಜನರಿಗೆ ಅನ್ಯಾಯ ಮಾಡಲು ಆಗುವುದಿಲ್ಲ. ಇಷ್ಟೂ ಮಾಡದಿದ್ದರೆ ಗೋಕಾಕ ಕ್ಷೇತ್ರದ ಪ್ರತಿನಿಧಿಯಾಗಿ ಇದ್ದು ಏನು ಪ್ರಯೋಜನ? ಎಂದು ಹೇಳಿದರು.
ಮೂಡಲಗಿ ತಾಲ್ಲೂಕು ಘೋಷಣೆ ಆಗದಂತೆ ಸರ್ಕಾರದ ಮಟ್ಟದಲ್ಲಿ ಪ್ರಭಾವ ಬಳಸಿದೆ. ಕ್ಷೇತ್ರದ ಜನರಿಗೆ ಅನ್ಯಾಯವಾಗುವುದನ್ನು ತಪ್ಪಿಸಲು ಹೀಗೆ ಮಾಡಿದ್ದೇನೆ ಎಂದು ಸಚಿವ ರಮೇಶ ಜಾರಕಿಹೊಳಿ ಸಮರ್ಥಿಸಿಕೊಂಡರು.
ಅರಭಾವಿ ವಿಧಾನಸಭಾ ಕ್ಷೇತ್ರದ ಹಳ್ಳಿಗಳನ್ನು ಸೇರಿಸಿ ಮೂಡಲಗಿ ತಾಲೂಕು ಮಾಡುವುದಾದರೆ ನನ್ನ ವಿರೋಧ ಇಲ್ಲ. ತಾಲೂಕು ಘೋಷಣೆಗೆ ಕ್ರಮ ಕೈಗೊಳ್ಳುತ್ತೇನೆ. ಬೇಕಿದ್ದರೆ ನನ್ನ ಕ್ಷೇತ್ರದ ಒಂದೆರಡು ಹಳ್ಳಿಗಳನ್ನೂ ಸೇರಿಸಿಕೊಳ್ಳಲಿ. ಆದರೆ, ಗೋಕಾಕದ ಅಸ್ತಿತ್ವಕ್ಕೆ ಧಕ್ಕೆಯಾಗುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸಚಿವ ರಮೇಶ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅನ್ನು ಎರಡು ಭಾಗ ಮಾಡಿ, ಚಿಕ್ಕೋಡಿ ಘಟಕ ರಚಿಸಬೇಕು ಎನ್ನುವ ವಿಚಾರ ಹೊಸದಲ್ಲ. ಹತ್ತು ವರ್ಷದಿಂದಲೂ ಈ ಬೇಡಿಕೆ ಚಾಲ್ತಿಯಲ್ಲಿದೆ. ಪ್ರಕಾಶ ಹುಕ್ಕೇರಿ ಅವರೇ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು ಎಂದು ಸಚಿವರು ತಿಳಿಸಿದರು.
ಪಕ್ಷದ ವಿಚಾರ ಬಂದಾಗ ಜಾರಕಿಹೊಳಿ ಸಹೋದರರೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಸಚಿವ ರಮೇಶ ಉತ್ತರಿಸಿದರು.