RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಾಮಾಜಿಕ ನ್ಯಾಯ ಒದಗಿಸಲು ಆಗ್ರಹಿಸಿ ಕಂದಾಯ ಇಲಾಖೆಯ ನೌಕರ ಮನವಿ

ಗೋಕಾಕ:ಸಾಮಾಜಿಕ ನ್ಯಾಯ ಒದಗಿಸಲು ಆಗ್ರಹಿಸಿ ಕಂದಾಯ ಇಲಾಖೆಯ ನೌಕರ ಮನವಿ 

ಸಾಮಾಜಿಕ ನ್ಯಾಯ ಒದಗಿಸಲು ಆಗ್ರಹಿಸಿ ಕಂದಾಯ ಇಲಾಖೆಯ ನೌಕರ ಮನವಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 7 :

 

ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ಮತ್ತು ಗ್ರಾಮಲೆಕ್ಕಿಗರ ಜೇಷ್ಟತಾ ಪಟ್ಟಿಯನ್ನು ಒಗ್ಗೂಡಿಸಲು ವೃಂದ ಮತ್ತು ನಿಯಮಗಳನ್ನು ತಿದ್ದುಪಡಿ ಮಾಡಲು ಹೊರಡಿಸಿರುವ ಕರಡು ಅಧಿಸೂಚನೆಯನ್ನು ತಡೆ ಹಿಡಿದು ಸಾಮಾಜಿಕ ನ್ಯಾಯವನ್ನು ಒದಗಿಸಬೇಕೆಂದು ಆಗ್ರಹಿಸಿ ಶನಿವಾರದಂದು ಇಲ್ಲಿಯ ಕಂದಾಯ ಇಲಾಖೆಯ ನೌಕರರು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರ ಮುಖಾಂತರ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
1990ನೇ ಸಾಲಿನಲ್ಲಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಅಪ್ರೆಂಟಿಸ್ ಮತ್ತು ದಿನಗೂಲಿ ಆಧಾರದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನ್ನು ಸಂಖ್ಯಾರಿಕ್ತ ಹುದ್ದೆಗಳನ್ನು ವಿವಿಧ ಇಲಾಖೆಗೆ ವಿಲಿನಗೊಳಿಸಿ ಆದೇಶಿಸಿದ ಸಂದರ್ಭದಲ್ಲಿ ಕಂದಾಯ ಇಲಾಖೆಗೆ ಸುಮಾರು 600 ರಿಂದ 800 ಜನ ಗ್ರಾಮಲೆಕ್ಕಿಗರಾಗಿ ಕರ್ತವ್ಯಕ್ಕೆ ಹಾಜರಾಗಿರುವುದರಿಂದ ಕರ್ನಾಟಕ ಆಡಳಿತ ನ್ಯಾಯಾಲಯ, ಕರ್ನಾಟಕ ಉಚ್ಚನ್ಯಾಯಾಲಯ ಮತ್ತು ಸುಪ್ರಿಂ ಕೋರ್ಟ್‍ವರೆಗೂ ಮೇಲ್ಮನವಿ, ದಾವೆಯನ್ನು ಸಲ್ಲಿಸಿ ದಿ ಜನೇವರಿ-1; 1990ರಿಂದಲೇ ಅನ್ವಯವಾಗುವಂತೆ ಹುದ್ದೆಗೆ ಖಾಯಂಗೊಳಿಸುವಂತೆ ಆದೇಶವನ್ನು ಪಡೆದು, ವೇತನ ವ್ಯತ್ಯಾಸದ ಭತ್ಯೆಯನ್ನು ಪಡೆದಿರುತ್ತಾರೆ. ಇದರಿಂದಲೂ ಸಹ ದ್ವಿ.ದ.ಸ ನೌಕರರಿಗೆ ಈ ಹಿಂದೆ ಅನ್ಯಾಯವಾಗಿರುತ್ತದೆ ಮತ್ತು ಗ್ರಾಮಲೆಕ್ಕಿಗರ ಹುದ್ದೆಗಳನ್ನು ಹೆಚ್ಚಿನದಾಗಿ ಸೃಜನೆ ಮಾಡಿದ್ದರಿಂದ ದ್ವಿತಿಯ ದರ್ಜೆ ನೌಕರರು ಪ್ರ.ದ.ಸ / ರಾಜಸ್ವ ನಿರೀಕ್ಷಕರ ಹುದ್ದೆಗೆ ಪದೋನ್ನತಿ ಹೊಂದಲು ಸರಿ ಸುಮಾರು 20 ರಿಂದ 25ವರ್ಷಗಳ ಸೇವೆಯನ್ನು ಸಲ್ಲಿಸಿ ಕಾಯಬೇಕಾಗಿರುತ್ತದೆ.
ಕಂದಾಯ ಇಲಾಖೆಯಲ್ಲಿನ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿಯ ಕುರಿತು ದ್ವಿತೀಯ ದರ್ಜೆ ಸಹಾಯಕರು ಮತ್ತು ಗ್ರಾಮಲೆಕ್ಕಿಗರ ಜೇಷ್ಟತಾ ಪಟ್ಟಿ ಒಗ್ಗೂಡಿಸಿ, ನಿಯಮಗಳನ್ನು ಪರಿಷ್ಕರಿಸುವ ಸಂಬಂಧವಾಗಿ ಜನೇವರಿ-21, 2020 ರಂದು ಸರ್ಕಾರದ ಆಡಳಿತ ಸುಧಾರಣೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು 3:1 ರ ಅನುಪಾತದಲ್ಲಿಯೇ ಮುಂದುವರೆಸಬಹುದು ಮತ್ತು ಈ ಬಗ್ಗೆ ಅಗತ್ಯವಿದ್ದಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಮಾಡುವ ಬಗ್ಗೆ ಪರಿಶೀಲಿಸಲು ಕಂದಾಯ ಇಲಾಖೆಯ ಅಭಿಪ್ರಾಯದೊಂದಿಗೆ ಮಂಡಿಸುವ ಬಗ್ಗೆ ನಿರ್ದೇಶನ ನೀಡಲಾಗಿದ್ದರೂ ಸಹ ಪುನ: ರಾಜ್ಯದ ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರ ಮತ್ತು ಗ್ರಾಮಲೆಕ್ಕಿಗರ ಜೇಷ್ಟತಾ ಪಟ್ಟಿಯನ್ನು ಒಗ್ಗೂಡಿಸಲು ವೃಂದ ಮತ್ತು ನಿಯಮಗಳನ್ನು ತಿದ್ದುಪಡಿಗೆ ಸಂಬಂಧಿಸಿದಂತೆ 2021 ಮಾ-15ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕೈಗೊಂಡ ಸಭಾ ನಡವಳಿಕೆಯಿಂದ ಮತ್ತು ಕಂದಾಯ ಇಲಾಖೆಯಿಂದ ಹೊರಡಿಸಲಾದ ಅಧಿಸೂಚನೆಯು ನೌಕರರಿಗೆ ಮರಣ ಶಾಸನವಾಗಿ ಪದೋನ್ನತಿಯಲ್ಲಿ ತುಂಬಲಾರದ ನಷ್ಟವುಂಟಾಗುವುದರಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ವರದಿಯನ್ನು, ದ್ವಿ.ದ.ಸ ನೌಕರರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯನ್ನು ಕಾನೂನು ರೀತ್ಯಾ ಕೂಲಂಕುಶವಾಗಿ ಪರಿಶೀಲಿಸಿ, ಸಿ ಮತ್ತು ಆರ್ ನಿಯಮ ತಿದ್ದುಪಡಿಯ ಕಡತವನ್ನು ಕೈ ಬಿಟ್ಟು ಕಂದಾಯ ಇಲಾಖೆಯ ದ್ವೀತಿಯ ದರ್ಜೆ ಸಹಾಯಕ ನೌಕರರನ್ನು ಹಿತವನ್ನು ಕಾಪಾಡಿ, ಎಸ್.ಸಿ./ಎಸ್.ಟಿ ಪಂಗಡದ ದ್ವಿ.ದ.ಸ ಮತ್ತು ಗ್ರಾಮಲೆಕ್ಕಿಗರಿಗೆ ಸಂವಿಧಾನದ ಮೂಲಕ ಸಿಗುವ ಮೀಸಲಾತಿ ಸೌಲಭ್ಯವನ್ನು ಒದಗಿಸಿ, ನೌಕರರ ಹಿತವನ್ನು ಕಾಪಾಡಬೇಕು.
ಈ ಬಗ್ಗೆ ಅಗತ್ಯವಿದ್ದಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಮಾಡುವ ಬಗ್ಗೆ ಪರಿಶೀಲಿಸಲು ಕಂದಾಯ ಇಲಾಖೆಯ ಅಭಿಪ್ರಾಯದೊಂದಿಗೆ ಮಂಡಿಸುವ ಬಗ್ಗೆ ನಿರ್ದೇಶನ ನೀಡಲಾಗಿರುತ್ತದೆ ಇವುಗಳನೆಲ್ಲಾ ಪರಿಗಣಿಸಿ ರಾಜ್ಯದ ಕಂದಾಯ ಇಲಾಖೆಯ ದ್ವಿ.ದ.ಸ. ಮತ್ತು ಗ್ರಾ.ಲೆ. ಸಿ ಮತ್ತು ಆರ್ ನಿಯಮ ತಿದ್ದುಪಡಿಗೆ ಲಿಖಿತ ಆಕ್ಷೇಪಣೆಯನ್ನು ಸಲ್ಲಿಸಲು ಕರ್ನಾಟಕ ರಾಜ್ಯ ಪತ್ರದ ಅಧಿಸೂಚನೆಯ ಪತ್ರದ ಸೂಚನೆಯಂತೆ ನಮ್ಮ ಮನವಿ/ಆಕ್ಷೇಪಣೆಯನ್ನು ಪರಿಗಣಿಸಿ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಪತ್ರದಲ್ಲಿ ಮನವಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ಎಂ.ವಾಯ್.ಮಾಸನ್ನವರ, ಪಿ.ಎಸ್.ಮಸ್ತಿ, ಎ.ಬಿ ಜಕಾತಿ, ಎ.ಎಸ್.ಕರನೂರೆ, ಶ್ರೀಮತಿ ಎಂ.ಆರ್.ಮೆಣಶಿ, ಶ್ರೀಮತಿ ವಿಜಯಲಕ್ಷ್ಮೀ ಬಣಗಾರ, ನವೀನ ಕೌಜಲಗಿ ಸೇರಿದಂತೆ ಅನೇಕರು ಇದ್ದರು.

Related posts: