ಮೂಡಲಗಿ:ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಜಿಆರ್ಬಿಸಿ ಕುಲಗೋಡ ವಿತರಣಾ ಕಾಲುವೆ ಅವಲೋಕನೆ
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಜಿಆರ್ಬಿಸಿ ಕುಲಗೋಡ ವಿತರಣಾ ಕಾಲುವೆ ಅವಲೋಕನೆ.
ಮೂಡಲಗಿ ಜ 17 : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜಿಆರ್ಬಿಸಿ ಕುಲಗೋಡ ವಿತರಣಾ ಕಾಲುವೆ ವ್ಯಾಪ್ತಿಯ ಹಳ್ಳಿಗಳಿಗೆ ಬುಧವಾರ ಸಂಜೆ ಭೇಟಿ ನೀಡಿ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿದರು.
ಘಟಪ್ರಭಾ ಬಲದಂಡೆ ಕಾಲುವೆಯ ಮೂಲಕ ಕುಲಗೋಡ ವಿತರಣಾ ಕಾಲುವೆ ವ್ಯಾಪ್ತಿಯ ರೈತರಿಗೆ ನೀರು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಹಲವು ವರ್ಷಗಳಿಂದ ರೈತರು ನೀರಿಗಾಗಿ ಹರಸಾಹಸ ಪಡಬೇಕಾದ ಸಂದಿಗ್ಧ ಪರಿಸ್ಥಿತಿ ಉದ್ಭವವಾಗಿತ್ತು. ಹೇಗಾದರೂ ಮಾಡಿ ಕುಲಗೋಡ ಟೇಲ್ ರೈತರಿಗೆ ನೀರು ತಲುಪಿಸುವ ಉದ್ಧೇಶದಿಂದ ಪ್ರಾಮಾಣಿಕ ಪ್ರಯತ್ನ ನಡೆಸಿ ಈ ಭಾಗದ ರೈತ ಸಮೂಹಕ್ಕೆ ನೀರು ತಲುಪಿಸಿದ್ದೇನೆ. ರೈತರು ಜಿಆರ್ಬಿಸಿಯಿಂದ ಬಿಡಲಾಗಿರುವ ಕಾಲುವೆ ನೀರಿನಿಂದ ಸಂತಸದಲ್ಲಿದ್ದಾರೆಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಪ್ರಯತ್ನದಿಂದ ಜನೇವರಿ 2 ರಿಂದ 20 ದಿನಗಳವರೆಗೆ ಹಿಡಕಲ್ ಜಲಾಶಯದಿಂದ ದಿನನಿತ್ಯ ಜಿಎಲ್ಬಿಸಿ ಕಾಲುವೆಗೆ 2400 ಕ್ಯೂಸೆಕ್ಸ್, ಜಿಆರ್ಬಿಸಿ ಕಾಲುವೆಗೆ 2000 ಕ್ಯೂಸೆಕ್ಸ್ ಹಾಗೂ ಸಿಬಿಸಿ ಕಾಲುವೆಗೆ 500 ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಫೆಬ್ರುವರಿ 10 ರಿಂದ ಮಾರ್ಚ 2 ರವರೆಗೆ ರೈತರ ಹಿತದೃಷ್ಟಿಯಿಂದ ನೀರನ್ನು ಬಿಡುಗಡೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿರುವ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ನಂತರ ಜಲಾಶಯದಲ್ಲಿ ಉಳಿಯಲಿರುವ 14 ಟಿಎಂಸಿ ನೀರನ್ನು ಎಪ್ರೀಲ್-ಮೇ ತಿಂಗಳಲ್ಲಿ ಬೇಸಿಗೆ ಕಾಲ ಇರುವದರಿಂದ ಕುಡಿಯುವ ನೀರಿನ ತೊಂದರೆ ನಿವಾರಿಸಲು ಕ್ರಮ ಕೈಗೊಳ್ಳುವಂತೆ ಸಚಿವರಲ್ಲಿ ವಿನಂತಿಸಿಕೊಳ್ಳುವುದಾಗಿ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಪಸಿ, ಹೊನಕುಪ್ಪಿ ಲಕ್ಷ್ಮೇಶ್ವರ ಗ್ರಾಮಗಳು ಹಾಗೂ ಬೆಟಗೇರಿ-2 ವಿತರಣಾ ಕಾಲುವೆಗೆ ಭೇಟಿ ನೀಡಿದರು.
ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ, ತಾಪಂ ಸದಸ್ಯ ರಮೇಶ ಗಡಗಿ, ಎಪಿಎಂಸಿ ನಿರ್ದೇಶಕ ರೇವಣ್ಣಾ ಕನಕಿಕೋಡಿ, ಬಸಪ್ಪ ಕಪರಟ್ಟಿ, ಬಸವರಾಜ ಗಂಗರಡ್ಡಿ, ಶೇಖರ ಸಿದ್ದಾಪೂರ, ರಾಯಪ್ಪ ತಿರಕನ್ನವರ, ಮುತ್ತೆಪ್ಪ ಮನ್ನಾಪೂರ, ವಸಂತ ಗಲಗಲಿ, ನಿಂಗಪ್ಪ ಕುರಬೇಟ ಹಾಗೂ ರೈತರು ಉಪಸ್ಥಿತರಿದ್ದರು.