ಗೋಕಾಕ:ವಿಶ್ವಕ್ಕೆ ಯೋಗ ವಿದ್ಯೆಯನ್ನು ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಭವರಲಾಲಜೀ
ವಿಶ್ವಕ್ಕೆ ಯೋಗ ವಿದ್ಯೆಯನ್ನು ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಭವರಲಾಲಜೀ
ಗೋಕಾಕ ಜೂ 17 : ವಿಶ್ವಕ್ಕೆ ಯೋಗ ವಿದ್ಯೆಯನ್ನು ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ, ವಿಶ್ವ ಗುರು ಭಾರತವನ್ನು ಯೋಗಮಯ ಹಾಗೂ ಆರೋಗ್ಯಯುತವಾದ ರಾಷ್ಟ್ರವನ್ನಾಗಿ ನಿರ್ಮಿಸುವುದೇ ಪತಂಜಲಿ ಯೋಗಪೀಠ ಹೆಗ್ಗುರಿಯಾಗಿದೆ ಎಂದು ಪತಂಜಲಿ ಯೋಗಪೀಠ ಕರ್ನಾಟಕದ ರಾಜ್ಯ ಪ್ರಭಾರಿ ಭವರಲಾಲಜೀ ಹೇಳಿದರು.
ರವಿವಾರದಂದು ನಗರದ ಜ್ಞಾನ ಮಂದಿರ ಅಧ್ಯಾತ್ಮ ಕೇಂದ್ರದಲ್ಲಿ ಪತಂಜಲಿ ಯೋಗ ಸಮಿತಿ ಗೋಕಾಕ ಇವರು ಹಮ್ಮಿಕೊಂಡ ಯೋಗ ತರಬೇತಿ ಪಡೆದ ಯೋಗ ಶಿಕ್ಷಕರಿಗೆ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದ ಅವರು, ಭಾರತೀಯ ಯೋಗ ವಿದ್ಯೆಯನ್ನು ಇಡೀ ಪ್ರಪಂಚವೇ ಗೌರವಿಸುವ ಮೂಲಕ ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತಿರುವುದು ದೇಶಕ್ಕೆ ನೀಡಿದ ಕೊಡುಗೆಯಾಗಿದೆ ಎಂದು ತಿಳಿಸಿದರು.
ಯೋಗ ಗುರು ರಾಮದೇವ ಬಾಬಾ ಅವರು ಕಳೆದ 2 ದಶಕಗಳಿಂದ 20 ಕೋಟಿಗೂ ಅಧಿಕ ಜನತೆಗೆ ಯೋಗ ತರಬೇತಿಯನ್ನು ನೀಡಿ ಅವರನ್ನೆಲ್ಲ ಆರೋಗ್ಯವಂತರನ್ನಾಗಿಸುವಲ್ಲಿ ಶ್ರಮಿಸಿದ್ದು, ದೇಶದಲ್ಲಿ 5 ಸಾವಿರಕ್ಕೂ ಅಧಿಕ ಆಯುರ್ವೇದ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿ ಅವುಗಳ ಮೂಲಕ ಚಿಕಿತ್ಸೆಯನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಬರುವ ದಿನಗಳಲ್ಲಿ ಸಾಂಪ್ರದಾಯಿಕ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ 650 ಗುರುಕುಲಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದ್ದು ಅವುಗಳ ಮೂಲಕ ವಿಜ್ಞಾನ ತಂತ್ರಜ್ಞಾನದ ಶಿಕ್ಷಣವನ್ನು ನೀಡಲಾಗುವುದು. ಅಲ್ಲದೇ ನಿರುದ್ಯೋಗಿ ಉತ್ಸಾಹಿ ಯುವಕರನ್ನು ಗುರುತಿಸಿ, ಅವರಿಗೆ ಯೋಗ ಹಾಗೂ ಆಯುರ್ವೇದ ತರಬೇತಿಯನ್ನು ನೀಡಿ, ಸ್ವಾಸ್ಥ ಭಾರತ ನಿರ್ಮಾಣದ ಗುರಿಯನ್ನು ಹೊಂದಲಾಗಿದ್ದು ದೇಶದ ನಾಗರೀಕರು ಪತಂಜಲಿ ಯೋಗ ಪೀಠದೊಂದಿಗೆ ಕೈ ಜೋಡಿಸಬೇಕೆಂದು ವಿನಂತಿಸಿದರು.
ವೇದಿಕೆ ಮೇಲೆ ಕಿಸಾನ ರಾಜ್ಯ ಪ್ರಭಾರಿ ಸಂಜಯ ಕುಸ್ತಿಗಾರ, ಮಹಿಳಾ ರಾಜ್ಯ ಪ್ರಭಾರಿ ಆರತಿ ಕಾನಗೊ, ಮಂಡಳ ಪ್ರಭಾರಿ ಕಿರಣ ಮನ್ನೋಳಕರ, ಜಿಲ್ಲಾ ಪ್ರಭಾರಿ ಕವಿತಾ ಗಾಣಿಗೇರ, ನಿಜಲಿಂಗ ದಡ್ಡಿಮನಿ, ಡಾ|| ಸಿ.ಜಿ.ಗುಗವಾಡ, ವಿನೋದ ಜಾಧವ, ಪ್ರಮೋದ ಗುಲ್ಲ, ಶ್ರೀಕಾಂತ ಗೋಕಾಕ, ಬಸವರಾಜ ನಂದಿ, ಶ್ರೀಧರ ಪಿರಡಿ, ವಿರುಪಾಕ್ಷಿ ಕುಮಶಿ ಇದ್ದರು. ರಾಮಚಂದ್ರ ಕಾಕಡೆ ನಿರೂಪಿಸಿ, ವಂದಿಸಿದರು.