ಗೋಕಾಕ:ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರತಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಿ: ಲಕ್ಷ್ಮಣ ಚಂದರಗಿ
ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರತಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಿ: ಲಕ್ಷ್ಮಣ ಚಂದರಗಿ
ಬೆಟಗೇರಿ ಜು 20 : ಗ್ರಾಮದ ಸಾರ್ವಜನಿಕರು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರತಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು. ಸ್ವಚ್ಛ ಮತ್ತು ಉತ್ತಮ ಪರಿಸರ ನಿರ್ಮಿಸಲು ಸಂಕಲ್ಪ ಮಾಡಬೇಕೆಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹೇಳಿದರು.
ಬೆಟಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ ವಾರ್ಡಗಳ ಜನರಲ್ಲಿ ಶುಕ್ರವಾರ ಜುಲೈ.20 ರಂದು ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿಕೊಂಡಿರುವ ಅವರು, ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾಗರಿಕರ ಸಹಕಾರ ಬಹಳ ಮುಖ್ಯವಾಗಿದೆ. ಊರಿನ ಸುತ್ತಲೂ ಹಲವಡೆ ಸ್ಥಳೀಯರು ಬಯಲು ಬಹಿರ್ದೆಸೆ ಮಾಡುವದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಆದ್ದರಿಂದ ಸ್ಥಳೀಯರು ತಮ್ಮ ಮನೆಗಳ ಅಕ್ಕ-ಪಕ್ಕ ಹಾಗೂ ಹಿಂದೆ-ಮುಂದೆ ಇರುವ ಖುಲ್ಲಾ ಜಾಗೆಯಲ್ಲಿ ಶೌಚಗೃಹ ನಿರ್ಮಿಸಿಕೊಳ್ಳಬೇಕೆಂದು ಗ್ರಾಮಸ್ಥರಲ್ಲಿ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ ಮನವಿ ಮಾಡಿಕೊಂಡಿದ್ದಾರೆ.
ಸ್ವಚ್ಛ ಭಾರತ ಮಿಷನ್ ಯೋಜನೆಯ ಅಡಿಯಲ್ಲಿ ಸರ್ಕಾರ ಶೌಚಾಲಯ ನಿರ್ಮಿಸಲು ಸಹಾಯ ಧನ ನೀಡುತ್ತಿದೆ. ಗ್ರಾಮದ ನಾಗರಿಕರು ಇದರ ಸದುಪಯೋಗ ಪಡೆದುಕೊಂಡು ಊರನ್ನು ಬಯಲು ಶೌಚಮುಕ್ತ ಗ್ರಾಮವನ್ನಾಗಿ ಪರಿವರ್ತಿಸುವಲ್ಲಿ ಪ್ರಯತ್ನಿಸಲು ಕರೆ ನೀಡಿದ್ದಾರೆ. ಊರಿನ ಸುತ್ತಲೂ ಕೆಲವಡೆ ಮಹಿಳೆಯರಿಗಾಗಿ ನಿರ್ಮಿಸಿರುವ ಸಾರ್ವಜನಿಕ ಶೌಚಗೃಹಗಳನ್ನು ಸ್ಥಳೀಯ ಮಹಿಳೆಯರು ಬಳಕೆ ಮಾಡಬೇಕು. ಗ್ರಾಮದ ಇನ್ನೂ ಕೆಲವು ಕಡೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ. ಆದರೆ ಜಾಗೆಯ ಸಮಸ್ಯೆ ಇದ್ದುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಮಹಿಳೆ ಮತ್ತು ಪುರುಷರಿಗೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಕೊಡಲು ಪ್ರಯತ್ನಿಸುತ್ತೇನೆಂದು ಗ್ರಾಪಂ ಅಧ್ಯಕ್ಷ ಚಂದರಗಿ ತಿಳಿಸಿದ್ದಾರೆ.