ಖಾನಾಪುರ:ಭಾಷಾ ವಿರೋಧಿ ನಿಲುವು : ಖಾನಾಪುರ ಬಿಇಓ ಅಂಚಿ ಮೇಲೆ ತೂಗು ಕತ್ತಿ
ಭಾಷಾ ವಿರೋಧಿ ನಿಲುವು : ಖಾನಾಪುರ ಬಿಇಓ ಅಂಚಿ ಮೇಲೆ ತೂಗು ಕತ್ತಿ
ಖಾನಾಪೂರ ಜೂ 9: ತಾಲೂಕಿನ ಶಿರೋಲಿಯಲ್ಲಿ ಕನ್ನಡ ಮಾಧ್ಯಮ ಮಾಧ್ಯಮಿಕ ಶಾಲೆ ಆರಂಭಿಸಬೇಕೆಂಬ ಸರ್ಕಾರದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡ ಮತ್ತು ಸಮಾರಂಭಗಳ ಆಹ್ವಾನ ಪತ್ರಿಕೆಗಳನ್ನು ಕೇವಲ ಮರಾಠಿಯಲ್ಲಿ ಮುದ್ರಿಸಿ ರಾಜ್ಯದ ಭಾಷಾ ನೀತಿಗೆ ವಿರುದ್ಧವಾಗಿ ನಡೆದುಕೊಂಡ ಖಾನಾಪುರ ಬಿಇಒ ಶ್ರೀಕಾಂತ ಅಂಚಿ ಅವರ ವಿಚಾರಣೆ ಜೂನ್ 6ರಂದು ಖಾನಾಪೂರದಲ್ಲಿ ನಡೆಯಿತು.
ರಾಜ್ಯ ಸರಕಾರದ ಆದೇಶದ ಮೇರೆಗೆ ಶಿರಸಿ ಡಿಡಿಪಿಐ ಪ್ರಸನ್ನಕುಮಾರ್ ಅವರು ವಿಚಾರಣೆ ನಡೆಸಿದಾರೆ.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು. ಬಿಇಒ ಶ್ರೀಕಾಂತ ಅಂಚಿ ಅವರ ಹೇಳಿಕೆಯನ್ನೂ ಸಹ ವಿಚಾರಣಾಧಿಕಾರಿಗಳು ದಾಖಲಿಸಿಕೊಂಡಿದಾರೆ . ಚಂದರಗಿ ಅವರು ಹಾಜರುಪಡಿಸಿದ ದಾಖಲೆಗಳಿಗೆ ಅಂಚಿ ಅವರು ಸಮಂಜಸ ಉತ್ತರ ನೀಡಲಿಲ್ಲ.
ಈ ಪ್ರಕರಣದ ಬಗ್ಗೆ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಕ್ರಿಯಾ ಸಮಿತಿಯು ರಾಜ್ಯ ಶಿಕ್ಷಣ ಸಚಿವರು,ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡಿತ್ತು. ನಂತರ ಧಾರವಾಡದ ಶಿಕ್ಷಣ ಆಯುಕ್ತರು ವಿಚಾರಣೆ ನಡೆಸಿ ಸರಕಾರಕ್ಕೆ ವರದಿ ನೀಡಿದ್ದರು. ಬಿಇಒ ವಿರುದ್ಧ ಕ್ರಮಕ್ಕಾಗಿ ಶಿಫಾರಸು ಮಾಡಿದ್ದರು. ಆದರೂ ಸರಕಾರ ಮತ್ತೊಂದು ವಿಚಾರಣೆ ನಡೆಸಲು ಆದೇಶಿಸಿತ್ತು.