ಗೋಕಾಕ:ಬೆಟಗೇರಿ ಬಸ್ ನಿಲ್ದಾಣದಲ್ಲಿರುವ ನಾಗಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಸಂಪನ್ನ
ಬೆಟಗೇರಿ ಬಸ್ ನಿಲ್ದಾಣದಲ್ಲಿರುವ ನಾಗಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಸಂಪನ್ನ
ಬೆಟಗೇರಿ ಅ ಸೆ 3 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸ್ ನಿಲ್ದಾಣದಲ್ಲಿರುವ ನಾಗಲಿಂಗೇಶ್ವರ ದೇವರ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಸೋಮವಾರ ಸೆ.2 ಮತ್ತು 3 ರಂದು ನಾಗಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭನೆಯಿಂದ ನಡೆದವು.
ರವಿವಾರ ಸೆ.2ರಂದು ನಾಗಲಿಂಗೇಶ್ವರ ದೇವರ ಗದ್ದುಗೆಗೆ ರಾತ್ರಿ 9 ಗಂಟೆಗೆ ಮಹಾಪೂಜೆ, ನೈವೇಧ್ಯ ಸಮರ್ಪಣೆ ಕಾರ್ಯಕ್ರಮ ನಡೆದು, ರಾತ್ರಿ ಶಿವಜಾಗರಣೆ, ಶಿವಭಜನೆ ಕಾರ್ಯಕ್ರಮ ಭಕ್ತಿ ಭಾವದಿಂದ ಜರುಗಿತು. ಸೋಮವಾರ ಸೆ.3 ರಂದು ಬೆಳಗ್ಗೆ 6 ಗಂಟೆಗೆ ನಾಗಲಿಂಗೇಶ್ವರ ದೇವರ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಪುರಜನರಿಂದ ನೈವೇದ್ಯ ಅರ್ಪಿಸುವ, ಮತ್ತು ಪೂಜೆ, ಪುನಸ್ಕಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ಜರುಗಿದ ಬಳಿಕ ಮಹಾಮಂಗಲೋತ್ಸವ, ಮಹಾಪ್ರಸಾದ ನಡೆದು, ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಗ್ರಾಮದ ಸಂಗಯ್ಯ ಹಿರೇಮಠ, ಶಂಭು ಹಿರೇಮಠ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ನಾಗಲಿಂಗೇಶ್ವರ ದೇವರ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ ಹಾಗೂ ಮಂಗಲೋತ್ಸವ ಕಾರ್ಯಕ್ರಮ ನೆರವೇರಿಸಿದರು.
ಸ್ಥಳೀಯ ಬಸ್ ನಿಲ್ದಾಣದಲ್ಲಿರುವ ನಾಗಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಆಚರಣೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಬೆಟಗೇರಿ ಹಾಗೂ ಸುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯಲ್ಲಿ ಭಕ್ತರು, ಗ್ರಾಮಸ್ಥರು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.