ಬೆಳಗಾವಿ:ರಾಜಕೀಯದಲ್ಲಿ ಕೆಲಸಕ್ಕಿಂತ ಬ್ರ್ಯಾಂಡಿಂಗ್ ಮುಖ್ಯ : ಶಾಸಕ ಸತೀಶ ಜಾರಕಿಹೊಳಿ
ರಾಜಕೀಯದಲ್ಲಿ ಕೆಲಸಕ್ಕಿಂತ ಬ್ರ್ಯಾಂಡಿಂಗ್ ಮುಖ್ಯ : ಶಾಸಕ ಸತೀಶ ಜಾರಕಿಹೊಳಿ
ಬೆಳಗಾವಿ ಸೆ 8 : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗಿಲ್ಲ . ಆದ್ದರಿಂದ ನನ್ನ ಗೆಲುವು ಐತಿಹಾಸಿಕವಾಗಿದ್ದು , ಇದನ್ನು ಬ್ರ್ಯಾಂಡ್ ಮಾಡಬೇಕಿದೆ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಕಾರ್ಯಕರ್ತರಿಗೆ ಸಲಹೆ ನೀಡಿದರು
ಬೆಳಗಾವಿಯಲ್ಲಿ ಇಂದು ನಡೆದ ಯಮಕಮನರಡಿ ಕ್ಷೇತ್ರದ ಕಾಂಗ್ರೆಸ್ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ನಾನು ಕ್ಷೇತ್ರಕ್ಕೆ ಹೋಗದೇ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿದ್ದೇನೆ. ಈ ರೀತಿಯ ಪ್ರಯೋಗ ದೇಶದಲ್ಲಿ ಎಲ್ಲಿಯೂ ಆಗಿಲ್ಲ. ಅತ್ಯಂತ ಕಡಿಮೆ ಖರ್ಚಿನಲ್ಲಿ ಗೆದ್ದಿದ್ದು, ನಾನು ಮಾಡಿದಷ್ಟು ಖರ್ಚ ಜಿಪಂ ಚುನಾವಣೆಯಲ್ಲಿ ಗೆಲ್ಲಲಿಕ್ಕೆ ಆಗಲ್ಲ. ಗೆಲುವಿನ ಅಂತರ ಕಡಿಮೆ ಆಯಿತು ಅನ್ನುವುದರಲ್ಲಿ ಅರ್ಥವಿಲ್ಲ. ಹೀಗೆ ಅನ್ನುವವರಿಗೆ ಕಾರ್ಯಕರ್ತರು ತಿರುಗೇಟು ನೀಡಬೇಕು. ರಾಜಕೀಯದಲ್ಲಿ ಕೆಲಸಕ್ಕಿಂತ ಬ್ರ್ಯಾಂಡಿಂಗ್ ಮುಖ್ಯ ಎಂದರು.
ಚುನಾವಣೆಯಲ್ಲಿ ಎರಡು ಸಲ ಪ್ರಧಾನಿ ನರೇಂದ್ರ ಮೋದಿ, ಒಂದು ಸಲ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬಂದು ಹೋಗಿದ್ದರೂ ನಾನು ಗೆದ್ದಿದ್ದೇನೆ. ಭೀಮಾ ಕೋರೆಗಾಂವ್ ವಿಜಯೋತ್ಸವ ಮಾದರಿಯಲ್ಲಿ ಪ್ರತಿ ವರ್ಷ ನಮ್ಮ ಗೆಲುವನ್ನು ಸಂಭ್ರಮಿಸಬೇಕು. ಪ್ರತಿ ಗ್ರಾಮದಲ್ಲಿ ಯಮಕಮನರಡಿ ಕ್ಷೇತ್ರದ ಗೆಲುವನ್ನು ಆಚರಣೆ ಮಾಡಬೇಕು.
ಪ್ರಧಾನಿ ಮೋದಿ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡಿ ಗೆಲುವು ದಾಖಲಿಸಿದ್ದಾರೆ. ಆದರೆ ನಾನು ಕ್ಷೇತ್ರಕ್ಕೆ ಹೋಗದೆ ಜಯ ಸಾಧಿಸಿದ್ದೇನೆ. ಇದು ಭಾರತದಲ್ಲಿ ಪ್ರಥಮ ಎಂದರು.