ಮೂಡಲಗಿ:ಗಾಂಧೀಜಿ ಮತ್ತು ಲಾಲ್ ಬಹದ್ಧೂರ ಶಾಸ್ತ್ರೀಯವರುಗಳು ದೇಶ ಕಂಡ ಧೀಮಂತ ನಾಯಕರಾಗಿದ್ದರು
ಗಾಂಧೀಜಿ ಮತ್ತು ಲಾಲ್ ಬಹದ್ಧೂರ ಶಾಸ್ತ್ರೀಯವರುಗಳು ದೇಶ ಕಂಡ ಧೀಮಂತ ನಾಯಕರಾಗಿದ್ದರು
ಮೂಡಲಗಿ ಅ 2: ಗಾಂಧೀಜಿ ಮತ್ತು ಲಾಲ್ ಬಹದ್ಧೂರ ಶಾಸ್ತ್ರೀಯವರುಗಳು ದೇಶ ಕಂಡ ಧೀಮಂತ ನಾಯಕರಾಗಿದ್ದರು . ಸತ್ಯ, ಪ್ರೀತಿ, ಅಹಿಂಸೆಯ ಪ್ರತಿಪಾದಕ ಮಹಾತ್ಮಾ ಗಾಂಧೀಜಿ. ಸತ್ಯ ನಿಷ್ಠರಾದ ಗಾಂಧೀಜಿ ಸತ್ಯ ಪಥದಿಂದ ವಿಚಲಿತರಾಗಿರಲಿಲ್ಲ. ಗುರಿಯನ್ನು ಸಾಧಿಸುವ ಮಾರ್ಗವು ಶುಚಿಯಾಗಿರಬೇಕು ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು ಎಂದು ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ. ಶಂಕರ ನಿಂಗನೂರ ಹೇಳಿದರು.
ಅವರು ಕಲ್ಲೋಳಿಯ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್ ಹಾಗೂ ಗಾಂಧೀ ಸ್ಮಾರಕ ನಿಧಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಮಹಾತ್ಮ ಗಾಂಧೀಜಿ-ಲಾಲ್ ಬಹದ್ಧೂರ ಶಾಸ್ತ್ರೀ” ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶಾಸ್ತ್ರೀಜಿ ಅವರು ಪ್ರಾಮಾಣಿಕ ರಾಜಕಾರಿಯಾಗಿದ್ದರು. ಅವರು ಪ್ರಧಾನಮಂತ್ರಿ ಆಗಿದ್ದಾಗ ‘ಜೈಜವಾನ್ ಜೈಕಿಸಾನ್’ ಘೋಷಣೆಯ ಮೂಲಕ ಭಾರತವನ್ನು ರಕ್ಷಣಾತ್ಮಕವಾಗಿ ಹಾಗೂ ಆರ್ಥಿಕವಾಗಿ ಬಲಾಢ್ಯಗೋಳಿಸುವ ಕ್ರಮಗಳನ್ನು ಕೈಗೊಂಡಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರ್ಥಶಾಸ್ತ್ರದ ಹಿರಿಯ ಅಧ್ಯಾಪಕರಾದ ಪ್ರೊ. ಎಂ.ಬಿ.ಕುಲಮೂರ ಮಾತನಾಡಿ, ಮಹಾತ್ಮ ಗಾಂಧಿ ಹಾಗೂ ಶಾಸ್ತ್ರೀಜಿ ಅಂತಹ ಮಹಾತ್ಮರ ಜೀವನದ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರುಗಳಾದ ವಿಲಾಸ ತೆಳಗಡೆ, ಆರ್.ಎಸ್. ಪಂಡಿತ, ಎ.ಟಿ. ನಾಯಕ, ಗ್ರಂಥಪಾಲಕ ಬಿ.ಬಿ.ವಾಲಿ, ಸಹಾಯಕ ಗ್ರಂಥಪಾಲಕ ಆರ್.ಎ. ಮೇತ್ರಿ, ಕಛೇರಿ ಸಹಾಯಕರಾದ ಬಿ.ಎಂ. ಶೀಗಿಹಳ್ಳಿ, ಎನ್.ಎಸ್.ಪಾಟೀಲ, ಮಂಜುನಾಥ ಗೋರಗುದ್ಧಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರೊ. ಕೆ.ಎಸ್.ಪರವ್ವಗೋಳ ನಿರೂಪಿಸಿದರು. ಕು. ಸುರೇಖಾ ಗಿಡ್ಡವ್ವಗೋಳ ಸ್ವಾಗತಿಸಿದರು. ಕು. ಯಂಕುಬಾಯಿ ಪಾಟೀಲ ವಂದಿಸಿದರು.