ಬೆಳಗಾವಿ:ಅನುಕಂಪ, ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣ : ಸಂಸದ ಅಂಗಡಿ
ಅನುಕಂಪ, ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣ : ಸಂಸದ ಅಂಗಡಿ
ಬೆಳಗಾವಿ ನ 6 : ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ ಅವರ ಅನುಕಂಪ ಹಾಗೂ ಬಳ್ಳಾರಿಯಲ್ಲಿ ಮೈತ್ರಿ ಪಕ್ಷಗಳ ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ಬೆಳಗಾವಿ ಸಂಸದ ಸುರೇಶ ಅಂಗಡಿ ಅಭಿಪ್ರಾಯ ಪಟ್ಟಿದ್ದಾರೆ
ಉಪಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಅಂಗಡಿ, ಜಮಖಂಡಿಯಲ್ಲಿ ಅನುಕಂಪದ ಅಲೆಯಿಂದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಗೆಲುವು ದಾಖಲಿಸಿದ್ದಾರೆ. ಬಳ್ಳಾರಿಯಲ್ಲಿ ಶ್ರೀರಾಮುಲು ಕೂಡ ಜನಪ್ರಿಯ ನಾಯಕರಾಗಿದ್ದಾರೆ. ಆದರೆ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯೇ ಶ್ರೀರಾಮುಲು ಸಹೋದರಿ ಜೆ. ಶಾಂತಾ ಅವರ ಸೋಲಿಗೆ ಮುಖ್ಯ ಕಾರಣ ಎಂದರು.
ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹೈಜಾಕ್ ಮಾಡಲಾಗಿದ್ದು, ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅನುಮಾನ ಮೂಡತೊಡಗಿವೆ ಎಂದು ತಿಳಿಸಿದರು. ನಾವು ಬಲಾಢ್ಯರು ಎಂದು ತೋರಿಸಲು ಸಿಎಂ ಹೆಚ್ಡಿಕೆ ಮುಂದಾಗಿದ್ದಾರೆ. ಸದ್ದಾಂ ಹುಸೇನ್ ಸಹ ಬಲಾಢ್ಯ ಇದ್ದ. ಆದರೆ ಮುಂದೆ ಅವನ ಕಥೆ ಏನಾಯಿತು ಎಂಬುವುದು ಇಡೀ ಜಗತ್ತಿಗೆ ಗೊತ್ತಿದೆ. ರಾಜಕಾರಣದಲ್ಲಿ ಹೈಜಾಕ್ ವ್ಯವಸ್ಥೆ ನಿಲ್ಲಬೇಕು ಎಂದು ಅಭಿಪ್ರಾಯಪಟ್ಟರು.