RNI NO. KARKAN/2006/27779|Friday, October 18, 2024
You are here: Home » breaking news » ಖಾನಾಪುರ:ಸರಕಾರದ ಅನುದಾನ ಸರಿಯಾಗಿ ಉಪಯೋಗ ಮಾಡಿ : ಶಾಸಕಿ ಡಾ.ಅಂಜಲಿ ನಿಂಬಾಳ್ಕರ

ಖಾನಾಪುರ:ಸರಕಾರದ ಅನುದಾನ ಸರಿಯಾಗಿ ಉಪಯೋಗ ಮಾಡಿ : ಶಾಸಕಿ ಡಾ.ಅಂಜಲಿ ನಿಂಬಾಳ್ಕರ 

ಸರಕಾರದ ಅನುದಾನ ಸರಿಯಾಗಿ ಉಪಯೋಗ ಮಾಡಿ : ಶಾಸಕಿ ಡಾ.ಅಂಜಲಿ ನಿಂಬಾಳ್ಕರ

ಖಾನಾಪುರ ಜ 5 : ಗ್ರಾಮ ಪಂಚಾಯತಿಗೆ ಸಾಕಷ್ಟು ಅನುದಾನ ಸರಕಾರದಿಂದ ಬರುತ್ತೆ, ಅದನ್ನು ಸರಿಯಾಗಿ ಉಪಯೋಗ ಮಾಡಿಕೊಂಡರೆ ಗ್ರಾಪಂ ಗೆ ಒಳ್ಳೆಯ ಮೂರ್ತಿಯಾಗಿ ತಯಾರಿಸಬಹುದೆಂದು ಶಾಸಕಿ ಹಾಗೂ ಸಂಸದೀಯ ಕಾರ್ಯದರ್ಶಿಯಾದ ಡಾ.ಅಂಜಲಿ ನಿಂಬಾಳ್ಕರ ಹೇಳಿದರು.

ತಾಲೂಕಿನ ನಂದಗಡ ಗ್ರಾಪಂ ಅಲ್ಲಿ ಶುಕ್ರವಾರದಂದು ಸಾಯಂಕಾಲ ಹಮ್ಮಿಕೊಂಡಂತಹ ರಾಜೀವ ಗಾಂಧಿ ಸೇವಾ ಕೇಂದ್ರದ ಜೋತೆಗೆ ವಿವಿಧ ಘಟಕಗಳ ಉದ್ಘಾಟನೆ ಮಾಡಿ ಮಾತನಾಡಿದರು.

ಗ್ರಾಪಂ ಅಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಿಕೊಂಡು ಸರಕಾರದ ಅನುದಾನವನ್ನು ಸರಿಯಾದ ರೂಪದಲ್ಲಿ ಉಪಯೋಗಿಸಿಕೊಂಡರೆ ಜನಮೆಚ್ಚುಗೆಯ ಪಾತ್ರರಾಗಬಹುದು. ಜೋತೆಗೆ “ಸಾಂತ್ವನ” ಎಂಬ ಹೊಸ ಕಾರ್ಯಕ್ರಮವನ್ನು ಗ್ರಾಪಂ ಮಟ್ಟದಲ್ಲಿ ಆರಂಭಿಸಿ ಮರಣ ಹೊಂದಿದ ಕುಟುಂಬಕ್ಕೆ 2500/-ರೂಗಳನ್ನು ಗ್ರಾಪಂ ವತಿಯಿಂದ ನೀಡಿ ಸಾಂತ್ವನ ಹೇಳುವ ಕಾರ್ಯಕ್ರಮವನ್ನು ಮಾಡಿರುವುದಕ್ಕೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೆನೆ. ಇದರ ಜೋತೆಗೆ “ಸಾಂತ್ವನ” ಎಂಬ ಕಾರ್ಯಕ್ರಮ ತಾಲೂಕಿನ ಎಲ್ಲ ಗ್ರಾಪಂ ಗಳಲ್ಲಿ ಆದಷ್ಟು ಬೇಗ ಕಾರ್ಯರೂಪಕ್ಕೆ ತನ್ನಿ ಎಂದು ಕರೆ ನೀಡಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಪಿಡಿಓ ಕೆ,ಗಣೇಶ ಆಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಪ್ರಭು ಪಾರಿಶ್ವಾಡಕರ ವಹಿಸಿದ್ದರು. ಕಾರ್ಯಕ್ರಮವನ್ನು ಪ್ರಕಾಶ ಮಾದರ ಸ್ವಾಗತಿಸಿದರು. ಎಮ್.ಕೆ.ಭಜಂತ್ರಿ ನಿರೂಪಿಸಿ ಮತ್ತು ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಸುಪ್ರಿಯಾ ಕುಟ್ರೆ, ಜಿತೆಂದ್ರ ಮಾದರ, ತಾಪಂ ಅಮೀರಾಬಿ ತಹಶಿಲದಾರ, ಗ್ರಾಪಂ ಉಪಾಧ್ಯಕ್ಷೆ ವಿದ್ಯಾ ಮಾದರ ತಾಪಂ ಕಾರ್ಯನಿವಾಹಕ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ಗ್ರಾಮದ ಹಿರಿಯರಾದ ಸಿ.ಜಿ.ವಾಲಿ, ಮಾಜಿ ಗ್ರಾಪಂ ಅಧ್ಯಕ್ಷ ಮಲ್ಲಪ್ಪಾ ದೇಗಾಂವಕರ, ಪ್ರಮೋದ ಪಾಟೀಲ ಹಾಗೂ ಗ್ರಾಪಂ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸಾಲು ಸಾಲು ತಪ್ಪು ಮಾಡಿ ಎಡವಟ್ಟು ಮಾಡಿಕೊಂಡ ಪಿಡಿಓ ಗಣೇಶ.
1. ನಾಡಗೀತೆ ಹಾಡುವಾಗ ಹಾಡಿನ ಸಾಲನ್ನು ಮರೆತು ಕೆಲ ಸೆಕೆಂಡು ಸುಮ್ಮನಾದ ಶಾಲಾ ವಿದ್ಯಾರ್ಥಿನಿಯರು.
2. ಹಾಲಿ ಗ್ರಾಪಂ ಸದಸ್ಯರಿಗೆ ವೇದಿಕೆಯ ಕೆಳಗಡೆ ಕೂರಿಸಿ, ಮಾಜಿ ಗ್ರಾಪಂ ಸದಸ್ಯರಿಗೆ ವೇದಿಕೆ ಮೇಲೆ ಕೂರಿಸಿ ಅವಮಾನಿಸಿದ ಪ್ರಸಂಗ ನಡೆಯಿತು.
3. ಕಾರ್ಯಕ್ರಮದಲ್ಲಿ 75%ರಷ್ಟು ಭಾಗ ಹೊರಗಿನ ಜನತೆ ಮತ್ತು ತಾಲೂಕಿನ ಗ್ರಾಪಂ ಸಿಬ್ಬಂಧಿಯೇ ಎದ್ದು ಕಾಣುತ್ತಿದ್ದರು. ಕೇವಲ 25%ರಷ್ಟು ಭಾಗ
ಗ್ರಾಮದ ಜನತೆ ಭಾಗವಹಿಸಿದ್ದರು.
4. ವೇದಿಕೆಯ ಹಿಂಬದಿಯಲ್ಲಿ ಕಟ್ಟಿದ ಬ್ಯಾನರ್ ತಪ್ಪು ಮುದ್ರಿಸಿ, ಕನ್ನಡದ ಕಗ್ಗೊಲೆ ಮಾಡಿದ ಪ್ರಸಂಗ ಜರುಗಿತು.
5. ಆಮಂತ್ರಣ ಪತ್ರಿಕೆಯನ್ನು ಕನ್ನಡ ಜೋತೆಗೆ, ಮರಾಠಿಯಲ್ಲಿ ಮುದ್ರಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರು.
ಪಿಡಿಓ ಕೆ.ಗಣೇಶ ನಿಂದ ಕನ್ನಡ ಕಗ್ಗೊಲೆ:
ರಾಜೀವ ಗಾಂಧಿ ಸೇವಾಕೇಂದ್ರದ ಉದ್ಘಾಟನೆ ಕಾರ್ಯಕ್ರಮದ ವೇದಿಕೆಗೆ ಕಟ್ಟುವ ಬ್ಯಾನರ್ ಅಲ್ಲಿ ಪಿ.ಡಿ.ಓ ಕೆ.ಗಣೇಶ ಕನ್ನಡ ಕಗ್ಗೊಲೆ ಮಾಡಿ ಕಾರ್ಯಕ್ರಮದಲ್ಲಿ ಬಾಗವಹಿಸಿದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರು. ಬ್ಯಾನರ ಅಲ್ಲಿ “ರಾಜೀವ” ಬರೆಯುವ ಸ್ಥಳದಲ್ಲಿ “ರಾಜವ” ಬರೆದು ಕನ್ನಡದ ಕಗ್ಗೊಲೆ ಮಾಡಿದ ಘಟನೆ ಜರುಗಿತು. ಕಳೆದ ಸುಮಾರು ವರ್ಷಗಳಿಂದ ತಾಲೂಕಿನಲ್ಲಿ ಬಹಳಷ್ಟು ಜನರು ಕನ್ನಡವನ್ನು ಉಳಿಸಿ, ಬೇಳೆಸುವ ಕಾರ್ಯದಲ್ಲಿ ಮಗ್ನರಾಗಿದ್ದರೆ. ಇತ್ತ ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಕೆಲವು ಅಧಿಕಾರಿಗಳ ಬೇಜವಾಬ್ದಾರಿನದಿಂದ ಕನ್ನಡ ಭಾಷಿಕರಿಗೆ ಅವಮಾನಿಸುವ ಪ್ರಸಂಗ ಜರುಗುತ್ತಿದೆ. ಕಾರ್ಯಕ್ರಮ ಮುಗಿದ ನಂತರ ತಾಪಂ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ ಎದುರೇ ಪಿಡಿಓ ಗಣೇಶ ರನ್ನು ಪತ್ರಕರ್ತರು ಕನ್ನಡದ ಕಗ್ಗೊಲೆ ಬಗ್ಗೆ ವಿಚಾರಿಸಿದಾಗ, ನನಗೆ ಮೊದಲಿಗೆ ಗೊತ್ತಿತ್ತು ಬ್ಯಾನರ್ ಅಲ್ಲಿ ತಪ್ಪು ಪ್ರಿಂಟ್ ಆಗಿದೆ ಅಂತಾ ಆದರೂ ಏನ ಮಾಡಲಿ ಅದನ್ನೆ ಉಪಯೋಗಿಸಿದೆ ಎಂದು ಬೇಜವಾಬ್ದಾರಿ ಉತ್ತರ ನೀಡಿ ಹೊರಟು ಹೋದರು.
ತಾಲೂಕಿನಲ್ಲಿ ಬಹಳ ದಿನಗಳಿಂದ ಕೆಲವು ಅಧಿಕಾರಿಗಳಿಂದ ಕನ್ನಡಕ್ಕೆ ಅವಮಾನಿಸುವ ಘಟನೆ ಜರುತ್ತಿದ್ದರು. ಇತ್ತ ಸಂಧಂಭಪಟ್ಟ ಮೇಲಾಧಿಕಾರಿಗಳು ಕಂಡು ಕಾಣದಂತೆ ಬೇಜವಾಬ್ದಾರಿ ಮಾಡುತ್ತಿದ್ದಾರೆ. ಈಗ ಮತ್ತೆ ಅದೇ ಪ್ರಸಂಗ ಎದುರಾಗಿದೆ ಶುಕ್ರವಾರದಂದು ದಿ.4-1-2019 ರಂದು ನಂದಗಡ ಗ್ರಾಪಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ “ರಾಜೀವ” ಬರೆಯುವ ಸ್ಥಳದಲ್ಲಿ “ರಾಜವ” ಬರೆದು ಕನ್ನಡದ ಕಗ್ಗೊಲೆ ಮಾಡಿ ನಂದಗಡ ಗ್ರಾಪಂ ಪಿಡಿಓ ಕೆ,ಗಣೇಶ ಕನ್ನಡ ಭಾಷೆಗೆ ಅವಮಾನಿಸುವ ಕೆಲಸ ಮಾಡಿದ್ದಾರೆ. ಕನ್ನಡ ವಿರೋಧಿ ನೀತಿ ಅನುಸರಿಸುವ ಪಿಡಿಓ ಅವಶ್ಯಕತೆ ನಮ್ಮ ತಾಲುಕಿಗೆ ಬೇಕಾಗಿಲ್ಲ ತಕ್ಷಣವೇ ಪಿಡಿಓ ಗಣೇಶರನ್ನು ಕೆಲಸದಿಂದ ಅಮಾನತ್ತು ಮಾಡಿ ಬೇರೆ ತಾಲೂಕಿಗೆ ವರ್ಗಾಯಿಸಬೇಕು. ಇಲ್ಲವಾದಲ್ಲೇ ಬರುವ ಸೋಮವಾರದಂದು ಖಾನಾಪುರ ತಾಲೂಕಾ ಕರವೇ ಘಟಕದಿಂದ ಪ್ರತಿಭಟನೆ ಹಮ್ಮಿಕೊಳ್ಳುತ್ತೆಂದರು.
ವಿಠ್ಠಲ ಹಿಂಡಲಕರ, ಕರವೇ ತಾಲೂಕಾ ಉಪಾಧ್ಯಕ್ಷ

Related posts: