ಗೋಕಾಕ:ಸಮ್ಮೇಳನದ ಸಂಘಟಕರ ಎಡವಟ್ಟು : ಸಮ್ಮೇಳನ ಬಹಿಷ್ಕರಿಸಿ ವೇದಿಕೆಯಿಂದ ನಿರ್ಗಮಿಸಿದ ಸಾಹಿತಿ ಪ್ರೊ. ಜ್ಯೋತಿ ಹೊಸೂರ
ಸಮ್ಮೇಳನದ ಸಂಘಟಕರ ಎಡವಟ್ಟು : ಸಮ್ಮೇಳನ ಬಹಿಷ್ಕರಿಸಿ ವೇದಿಕೆಯಿಂದ ನಿರ್ಗಮಿಸಿದ ಸಾಹಿತಿ ಪ್ರೊ. ಜ್ಯೋತಿ ಹೊಸೂರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 28 :
ಕನ್ನಡ ನಾಡು, ನುಡಿ ಮತ್ತು ಭಾಷೆಗೆ ಪ್ರಾಧಾನ್ಯತೆ ನೀಡಬೇಕು ಎಂಬುದು ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಇಲ್ಲಿ ನಡೆಯುತ್ತಿರುವ ಬೆಳಗಾವಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವ್ಯತಿರಿಕ್ತವಾಗಿ ನಡೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಜಾನಪದ ತಜ್ಞರು, ಹಿರಿಯ ಸಾಹಿತಿಗಳು ಹಾಗೂ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಪ್ರಾ. ಜ್ಯೋತಿ ಹೊಸೂರು ಅವರು ವೇದಿಕೆಯಿಂದ ನಿರ್ಗಮಿಸಿದ ಪ್ರಸಂಗ ನಡೆಯಿತು.
ಕನ್ನಡ ಭಾಷೆಯ ಏಳ್ಗೆಗಾಗಿ ಇಂತಹ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿಗೆ, ಆದರೆ ಆಯೋಜನೆಯ ಧ್ಯೇಯಗಳನ್ನು ಗಾಳಿಗೆ ತೂರಿ ಪರಿಷತ್ ಹಾಗೂ ಸಂಘಟಕರು ತಮ್ಮ ಮನಸೋ ಇಚ್ಛೆ ಸಮಾರಂಭವನ್ನು ನಡೆಸುತ್ತಿರುವುದು ನನಗೆ ಬೇಸರ ತಂದಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯಿಕ ವಿಚಾರಗಳನ್ನು ಹೊರತು ಪಡಿಸಿ ತಮ್ಮದೇ ಆದ ಶೈಲಿಯಲ್ಲಿ ಸಮ್ಮೇಳನ ಆಶೋತ್ತರಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುವ ಬೆಳವಣಿಗೆಗಳು ಈ ವೇದಿಕೆಯಲ್ಲಿ ನಡೆಯುತ್ತಿದ್ದು ಅದನ್ನು ನಾನು ತೀವ್ರವಾಗಿ ಖಂಡಿಸಿ, ಬಹಿಷ್ಕರಿಸಿ ನಿರ್ಗಮಿಸುತ್ತಿರುವುದಾಗಿ ಅತ್ಯಂತ ವಿಷಾಧದ ಮಾತುಗಳನ್ನಾಡಿದರು.
ಪ್ರೊ. ಜ್ಯೋತಿ ಹೊಸೂರ ಅವರು ವೇದಿಕೆಯಿಂದ ನಿರ್ಗಮಿಸುತ್ತಿದ್ದುದನ್ನು ಗಮನಿಸಿದ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು ಧಾವಿಸಿ ಅವರನ್ನು ತಡೆಯಲು ನಡೆಸಿದ ಯತ್ನ ಫಲ ನೀಡಲಿಲ್ಲ.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಪ್ರಾ. ಜ್ಯೋತಿ ಹೊಸೂರು ಅವರು ತಮಗೆ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರ ತರುವಾಯ ಮಾತನಾಡಲು ಅವಕಾಶ ನೀಡದೇ ಇರುವ ಸಂಘಟಕರ ನಿಲುವನ್ನು ಖಂಡಿಸಿ ವೇದಿಕೆಯಿಂದ ಹೊರ ನಡೆದು ಮಾಧ್ಯಮ ಪ್ರತಿನಿಧಿಗಳ ಎದುರು ತಮ್ಮ ಆಕ್ರೋಶವನ್ನು ಹೊರಹಾಕಿದರು.