ಗೋಕಾಕ:ಸರಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದೊರಕಿದಾಗ ಮಾತ್ರ ಅಭಿವೃದ್ಧಿ ಸಾಧ್ಯ : ಶಾಸಕ ಬಾಲಚಂದ್ರ
ಸರಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದೊರಕಿದಾಗ ಮಾತ್ರ ಅಭಿವೃದ್ಧಿ ಸಾಧ್ಯ : ಶಾಸಕ ಬಾಲಚಂದ್ರ
ಗೋಕಾಕ ಜು 15: ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯೋಜನೆಗಳ ದುರ್ಬಳಕೆ ನಡೆಯದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕೆಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಯ ಎನ್ಎಸ್ಎಫ್ ಅತಿಥಿ ಗೃಹದ ಆವರಣದಲ್ಲಿ ಶನಿವಾರ ಸಂಜೆ ಡಾ.ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಅರಭಾವಿ ಮತಕ್ಷೇತ್ರದ 58 ಫಲಾನುಭವಿಗಳಿಗೆ 14.50 ಲಕ್ಷ ರೂ.ಗಳ ಸಾಲ ಹಾಗೂ ಸಹಾಯಧನ ಚೆಕ್ಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರ ಎಲ್ಲ ಸಮುದಾಯಗಳಿಗೆ ಆರ್ಥಿಕ ಬಲವರ್ಧನೆ ಮಾಡಿಕೊಳ್ಳಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಇಂತಹ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದೊರಕಿದಾಗ ಮಾತ್ರ ಯೋಜನೆಗಳು ಸಾರ್ಥಕವಾಗುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪದಿಂದ ಕಡುಬಡವರಿಗೆ ಸರ್ಕಾರದ ಸೌಲಭ್ಯಗಳು ಮರಚೀಕೆಯಾಗಿವೆ. ಅಧಿಕಾರಿಗಳು ಜಾಗೃತರಾಗಿ ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಸೂಚನೆ ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಹಿಳಾ ಸಮೃದ್ಧಿ ಯೋಜನೆಯ 33 ಫಲಾನುಭವಿಗಳಿಗೆ 8.25 ಲಕ್ಷ ರೂ, ಮೈಕ್ರೋ ಕ್ರೇಡಿಟ್-1 ಯೋಜನೆಯ 18 ಫಲಾನುಭವಿಗಳಿಗೆ 4.50 ಲಕ್ಷ ರೂ ಹಾಗೂ ವಿಕಲಚೇತನರ ಆರ್ಥಿಕ ನೆರವಿಗಾಗಿ 7 ಫಲಾನುಭವಿಗಳಿಗೆ 1.75 ಲಕ್ಷ ರೂ.ಗಳ ಸಾಲ ಹಾಗೂ ಸಹಾಯಧನದ ಚೆಕ್ಗಳನ್ನು ವಿತರಿಸಿದರು.
ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಎಪಿಎಂಸಿ ನಿರ್ದೇಶಕ ಕೆಂಚಪ್ಪ ಸಕ್ರೆಪ್ಪಗೋಳ, ಮುತ್ತೆಪ್ಪ ಕುಳ್ಳೂರ, ರಮೇಶ ಸಣ್ಣಕ್ಕಿ, ಜಯಪ್ಪ ಪಾಟೀಲ, ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ , ಕ್ಷೇತ್ರಾಭಿವೃದ್ಧಿ ಅಧಿಕಾರಿ ನಾಯ್ಕರ, ಮುಂತಾದವರು ಉಪಸ್ಥಿತರಿದ್ದರು.