RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ನಾಗದೇವನ ಶಕ್ತಿ ಅತ್ಯಧ್ಬುತ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ನಾಗದೇವನ ಶಕ್ತಿ ಅತ್ಯಧ್ಬುತ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ 

ನಾಗದೇವನ ಶಕ್ತಿ ಅತ್ಯಧ್ಬುತ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

 

ಗೋಕಾಕ : ಬೆಟಗೇರಿ-ಮಮದಾಪೂರ ಮುಖ್ಯ ರಸ್ತೆಯಿಂದ ನೂತನವಾಗಿ ನಿರ್ಮಿಸಿದ ನಾಗೇಶ್ವರ ದೇವಸ್ಥಾನದವರೆಗೆ 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ನಿರ್ಮಿಸಿಕೊಡುವುದಾಗಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದರು.
ತಾಲೂಕಿನ ಬೆಟಗೇರಿ ಗ್ರಾಮದ ನಾಗೇಶ್ವರ ನಗರದಲ್ಲಿ ಬುಧವಾರದಂದು ನಡೆದ ನೂತನವಾಗಿ ನಿರ್ಮಿಸಿದ ನಾಗೇಶ್ವರ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ, ಮಹಾದ್ವಾರದ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು.
ಎಲ್ಲ ದೇವರ ಶಕ್ತಿಗಳಿಗಿಂತ ನಾಗೇಶ್ವರನ ಶಕ್ತಿ ಅದ್ಬುತವಾಗಿದೆ. ಹಾವು ನಿಜವಾಗಿಯೂ ನಿರುಪದ್ರವಿ ಜೀವಿ. ಅದಕ್ಕೆ ಕಿವಿ ಕೇಳಿಸುವುದಿಲ್ಲ. ಕೇವಲ ಸಪ್ಪಳವನ್ನು ಮಾತ್ರ ಗೃಹಿಸಿ ತನ್ನ ಬೇಟೆಯನ್ನು ಕಂಡುಕೊಳ್ಳುತ್ತದೆ. ಅದು ತಾನಾಗಿಯೇ ಯಾರಿಗೂ ಕಚ್ಚುವುದಿಲ್ಲ. ಹಾವು ಎಂಬುದು ಹುಟ್ಟು ಸಾವು ಪುನರ್ಜನ್ಮದ ಸಂಕೇತವಾಗಿದೆ. ನಮ್ಮ ಪೂರ್ವಜರು ನಾಗದೇವತೆಯನ್ನು ಪರಿಸರ ಸಮತೋಲನ ವಿಷಯದಲ್ಲಿ ಅನ್ಯ ಜೀವಜಂತುಗಳ ಜೊತೆಗೆ ನಾಗ ದೇವನಿಗೂ ವಿಶೇಷ ಪ್ರಾಶಸ್ತ್ಯ ನೀಡುತ್ತಾರೆ. ಕೃಷಿ ಪ್ರಧಾನವಾದ ನಮ್ಮ ರಾಷ್ಟ್ರದಲ್ಲಿ ನಾಗದೇವತೆ ಕೃಷಿಯನ್ನು ನಾಶಮಾಡುವ ಇತರ ಜಂತುಗಳನ್ನು ನಿಯಂತ್ರಿಸಿ ಧಾನ್ಯವನ್ನು ರಕ್ಷಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಈ ಭಾಗಕ್ಕಿಂತ ಕುಕ್ಕೆ, ಧರ್ಮಸ್ಥಳ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಾಗ ದೇವತೆಯನ್ನು ಶೃದ್ಧೆ ಭಕ್ತಿ ಪೂರ್ವಕವಾಗಿ ಭಕ್ತರು ಪೂಜಿಸುತ್ತಾರೆಂದು ಹೇಳಿದರು.
ಭಾರತ ಪ್ರಪಂಚದಲ್ಲಿಯೇ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ಏಕಮೇವ ರಾಷ್ಟ್ರವಾಗಿದೆ. ಇಲ್ಲಿ ನೂರಾರು ಜಾತಿ-ಧರ್ಮಗಳಿದ್ದರೂ ಪರಸ್ಪರ ಸಹೋದರತ್ವ ಭಾವನೆಯಿಂದ ಯಾವುದೇ ಜಾತಿ-ಮತ ಪಂಥ ಎಂಬ ಬೇಧ-ಭಾವ ಮಾಡದೇ ಒಂದಾಗಿ ಬದುಕುತ್ತಿದ್ದಾರೆ. ಯಾವೊಂದು ರಾಷ್ಟ್ರದಲ್ಲಿ ಭಾರತದಲ್ಲಿರುವ ಧಾರ್ಮಿಕ ಮನೋಭಾವನೆ ಎಲ್ಲಿಯೂ ಇಲ್ಲವೆಂದು ದೇಶದ ಸಂಸ್ಕøತಿ ಮತ್ತು ಇತಿಹಾಸವನ್ನು ಬಿಚ್ಚಿಟ್ಟರು.
ಬೆಟಗೇರಿ ಗ್ರಾಮದ ಅಭಿವೃದ್ಧಿಗೆ ಕಳೆದ 15 ವರ್ಷಗಳಿಂದ ಸರ್ಕಾರದ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆಧ್ಯತೆ ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ವಿವಿಧ ಇಲಾಖೆಗಳ ಅಡಿಯಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ 48 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲಿಯೇ ಈ ಕಾಮಗಾರಿಗಳ ಟೆಂಡರ್ ಪ್ರಕ್ರಿಯೇ ಆರಂಭವಾಗಲಿದೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಪರಮ ಗುರಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಹಿಂದೆಂದೂ ಕಂಡರಿಯದ ಭೀಕರ ಪ್ರವಾಹದಿಂದ ಕ್ಷೇತ್ರದ 30 ಗ್ರಾಮಗಳು ಜಲಾವೃತಗೊಂಡಿದ್ದು, ಸಂತ್ರಸ್ಥರಿಗೆ ಸರ್ಕಾರದ ಪರಿಹಾರ ಧನವನ್ನು ಈಗಾಗಲೇ ವಿತರಿಸಲಾಗಿದೆ. ಅವರಿಗೆ ಶಾಶ್ವತ ಸೂರು ಒದಗಿಸಲು ನಮ್ಮ ಸರ್ಕಾರ ಬದ್ಧವಿದೆ ಎಂದು ಅವರು ಹೇಳಿದರು.
ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ, ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಭಾರತ ದೇಶದ ಎಲ್ಲರಲ್ಲಿಯೂ ದೈವೈತ್ವವನ್ನು ಕಾಣುಬಹುದು. ಉತ್ತಮ ಸಂಸ್ಕಾರ, ಸುಸಂಸ್ಕøತಿಯನ್ನು ಜಗತ್ತಿಗೆ ಭಾರತ ದೇಶ ನೀಡಿದೆ. ಭಗವಂತ ನಮಗೆ ಕೊಡುವಾಗ ಒಂದಿಷ್ಟು ಧಾರ್ಮಿಕ ಕಾರ್ಯಗಳಿಗೆ ದಾನ-ಧರ್ಮ ಮಾಡಿದರೆ ಪರಮಾತ್ಮನ ಕೃಪೆಗೆ ಪಾತ್ರರಾಗುತ್ತಿರಿ ಎಂದರು.
ತವಗದ ಸಿದ್ದಲಿಂಗಯ್ಯ ಸ್ವಾಮಿಜಿ, ಹುಣಶ್ಯಾಳ ಪಿ.ಜಿ ನಿಜಗುಣದೇವರು, ಕೆ.ಚಂದರಗಿ ಷಣ್ಮುಖಯ್ಯ ಸ್ವಾಮಿಜಿ, ಕಡಕೋಳ ಸಿದ್ಧರಾಯಜ್ಜನವರು, ಕೃಷ್ಣಾನಂದ ಸ್ವಾಮಿಜಿ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು. ನಾಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಿಂಗಯ್ಯ ಮಠದ ಅಧ್ಯಕ್ಷತೆ ವಹಿಸಿದ್ದರು.
ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ತಾಪಂ ಮಾಜಿ ಸದಸ್ಯ ಬಸವಂತ ಕೋಣಿ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಸುಭಾಷ ಜಂಬಗಿ, ಶಿವನಪ್ಪ ಮಾಳೇದ, ಎಂ.ಐ.ನೀಲಣ್ಣವರ, ಎಚ್.ಬಿ.ಪಾಟೀಲ, ಚನಬಸಪ್ಪ ಮಾಳೇದ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರಾಜಕೀಯ ಮುಖಂಡರು, ಗಣ್ಯರು, ವಿವಿಧ ಸಂಘ, ಸಂಸ್ಥೆಗಳ, ಗ್ರಾಪಂ, ಅಧ್ಯಕ್ಷರು, ಸದಸ್ಯರು ಇಲ್ಲಿಯ ನಾಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸದಸ್ಯರು, ಇತರರು ಇದ್ದರು.
ವಿಜೃಂಭನೆಯಿಂದ ಜರುಗಿದ ವಿವಿಧ ಕಾರ್ಯಕ್ರಮಗಳು: ಮಂಗಳವಾರ ಅ.29ರಂದು ಸಾಯಂಕಾಲ ಪುರದೇವರ ಪಲ್ಲಕ್ಕಿಗಳ ಆಗಮನ, ರಾತ್ರಿ 8 ಗಂಟೆಗೆ ಮಹಾಲಿಂಗಪುರದ ಪದ್ಮಶ್ರೀ ಪ್ರಶಸ್ತಿ ವಿಜೇತ ಇಬ್ರಾಹಿಂ ಸುತಾರ ಅವರಿಂದ ಭಾವೈಕ್ಯತೆ ಕಾರ್ಯಕ್ರಮ, ಪರಸ್ಥಳದ ಭಜನಾ ತಂಡದವರಿಂದ ಶಿವಭಜನೆ ನಡೆಯಿತು. ಬುಧವಾರ ಅ.30ರಂದು ಬ್ರಾಹ್ಮೀ ಮುಹೂರ್ತದಲ್ಲಿ ನಾಗೇಶ್ವರ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆದ ಬಳಿಕ ಗ್ರಾಮದ ವೀರಭದ್ರಶ್ವರ ದೇವರ ದೇವಸ್ಥಾನದಿಂದ ಸ್ಥಳೀಯ ನಾಗೇಶ್ವರ ನಗರದಲ್ಲಿ ನೂತನವಾಗಿ ನಿರ್ಮಿಸಿದ ನಾಗೇಶ್ವರ ದೇವಸ್ಥಾನದವರೆಗೆ ಕುಂಭಮೇಳ, ಆರತಿ, ಆನೆ ಸಕಲ ವಾದ್ಯಮೇಳಗಳೊಂದಿಗೆ ದೇವಸ್ಥಾನ ಕಳಸದ ಭವ್ಯ ಮೆರವಣಿಗೆ, ಮಹಾದ್ವಾರದ ಅಡಿಗಲ್ಲು ಸಮಾರಂಭ ಜರುಗಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಸತ್ಕರಿಸಿದರು.

Related posts: