ಗೋಕಾಕ:ಅಯೋಧ್ಯೆ ರಾಮ ಜನ್ಮಭೂಮಿಯ ತೀರ್ಪು : ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ವಾಗತ
ಅಯೋಧ್ಯೆ ರಾಮ ಜನ್ಮಭೂಮಿಯ ತೀರ್ಪು : ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ವಾಗತ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 9 :
ಶತಮಾನಕ್ಕೂ ಹೆಚ್ಚು ವರ್ಷ ಹಳೆಯದಾದ ಹಾಗೂ ಇಡೀ ಪ್ರಪಂಚದ ಗಮನ ಸೆಳೆದಿದ್ದ ಅಯೋಧ್ಯೆಯ ರಾಮ ಜನ್ಮಭೂಮಿಯ ವಿವಾದಕ್ಕೆ ಸಂಬಂಧಪಟ್ಟಂತೆ ಸಿಜೆಐ ರಂಜನ್ ಗೊಗೋಯಿ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಂವಿಧಾನಿಕ ಪೀಠವು ಶನಿವಾರದಂದು ಮಹತ್ವದ ತೀರ್ಪು ನೀಡಿರುವುದನ್ನು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ವಾಗತಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿವಾದಿತ ಜಾಗೆಯನ್ನು ಹಿಂದೂಗಳಿಗೆ ನೀಡಲು ಆದೇಶ ನೀಡಿರುವುದು ಹಾಗೂ ಸುನ್ನಿ ವಕ್ಫ್ ಕಮೀಟಿಗೆ 5 ಎಕರೆ ಜಾಗೆ ನೀಡುವಂತೆ ತೀರ್ಪು ಹೊರಡಿಸಿರುವುದು ಐತಿಹಾಸಿಕವಾಗಿದೆ. ಸುಪ್ರೀಂ ಕೋರ್ಟ ನೀಡಿರುವ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕಾಗಿದೆ. ಸುಪ್ರೀಂ ಕೋರ್ಟ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿ 134 ವರ್ಷಗಳ ಹಳೆಯದಾದ ಅಯೋಧ್ಯೆ ಭೂ ವಿವಾದ ಪ್ರಕರಣಕ್ಕೆ ಅಂತ್ಯ ಹಾಡಿರುವುದು ಸ್ವಾಗತಾರ್ಹ ನಿಲುವು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.