ಗೋಕಾಕ:ವಿವಿಧ ಕ್ಷೇತ್ರದ ಸಾಧಕರಿಗೆ , ದಾನಿಗಳಿಗೆ ಪುರಸ್ಕಾರ ಸತ್ಕಾರ ಸಮಾರಂಭ
ವಿವಿಧ ಕ್ಷೇತ್ರದ ಸಾಧಕರಿಗೆ , ದಾನಿಗಳಿಗೆ ಪುರಸ್ಕಾರ ಸತ್ಕಾರ ಸಮಾರಂಭ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಡಿ 25 :
ಗ್ರಾಮದ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರ ಆಶ್ರಯದಲ್ಲಿ 22 ನೇ ವರ್ಷದ ಓಂ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ, ಅನ್ನಸಂತರ್ಪನೆ, ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ, ವಿವಿಧ ಕ್ಷೇತ್ರದ ಸಾಧಕರಿಗೆ ಪುರಸ್ಕಾರ, ದಾನಿಗಳಿಗೆ ಸತ್ಕಾರ ಸಮಾರಂಭ ಹಾಗೂ ಧರ್ಮಸಭೆ ಶುಕ್ರವಾರ ಡಿ.27ರಂದು ಸ್ಥಳೀಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸನ್ನಿದಾನದಲ್ಲಿ ನಡೆಯಲಿದೆ.
ಅಂದು ಮುಂಜಾನೆ 10 ಗಂಟೆಗೆ ಸುತ್ತಲಿನ ಹಲವು ನಗರ ಪಟ್ಟಣ, ಹಳ್ಳಿಗಳಿಂದ ಆಗಮಿಸಿದ ಅಯ್ಯಪ್ಪ ಸ್ವಾಮಿ ಮಾಲಾಧಾರಿ, ಸಂತ, ಶರಣ, ಗಣ್ಯರನ್ನು ಬರಮಾಡಿಕೊಳ್ಳುವದು, ಸಂಜೆ 4 ಗಂಟೆಗೆ ಆನೆಯ ಮೇಲೆ ಅಯ್ಯಪ್ಪಸ್ವಾಮಿ ಮೂರ್ತಿಯೊಂದಿಗೆ ಭವ್ಯ ಮೆರವಣಿಗೆ, ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಇಲ್ಲಿಯ ಬಸವೇಶ್ವರ ವೃತ್ತದಿಂದ ಅಯ್ಯಪ್ಪಸ್ವಾಮಿ ಸನ್ನಿದಾನದ ತನಕ ಸುಮಂಗಲೆಯರಿಂದ ಆರತಿ, ಕುಂಭ, ಸಕಲ ವಾದ್ಯ ಮೇಳಗಳೊಂದಿಗೆ ಜರುಗಲಿದೆ.
ಸಂಜೆ 6 ಗಂಟೆಗೆ ಅಗ್ನಿಪೂಜೆ, ಮಾಲಾದಾರಿಗಳಿಂದ ಬೆಂಕಿ ಪಾದ ನಡೆಯುವುದು, ಸಂಜೆ 6:30ಗಂಟೆಗೆ ಅಯ್ಯಪ್ಪ ಸ್ವಾಮಿ ಮಹಾಪೂಜೆ, ಮಹಾಭಿಷೇಕ ನಡೆದು, 7 ಗಂಟೆಗೆ ಧರ್ಮಸಭೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ದಾನಿಗಳಿಗೆ ಸತ್ಕಾರ ಸಮಾರಂಭ, 8 ಗಂಟೆಗೆ ಮಹಾಪ್ರಸಾದ ನಡೆಯಲಿದೆ.
ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯ, ಮಮದಾಪೂರದ ಮೌನ ಮಲ್ಲಿಕಾರ್ಜುನ ಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಶಿರಕೂಳ್ಳದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ, ಸಂಗೊಳಿಯ ಗುರುಲಿಂಗ ಶಿವಾಚಾರ್ಯ ಸ್ವಾಮಿಜಿ, ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ, ಚುಳಕಿ ವೀರಸಂಗಯ್ಯಾ ಸ್ವಾಮಿಜಿ, ಹುಬ್ಬಳ್ಳಿ ಅಖಿಲ ಕರ್ನಾಟಕ ಅಯ್ಯಪ್ಪಸ್ವಾಮಿ ಸೇವಾ ಸೈನ್ಯ ಧರ್ಮಾಧಿಕಾರಿ ಮೋಹನ ಗುರುಸ್ವಾಮಿ, ಕಡಕೋಳದ ಸಿದ್ದರಾಯ ಅಜ್ಜನವರು, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಹನುಮಂತ ವಡೇರ, ಮುತ್ತೆಪ್ಪ ವಡೇರ ನೇತೃತ್ವ ವಹಿಸಲಿದ್ದಾರೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಸಮಾರಂಭ ಉದ್ಘಾಟನೆ ನೆರವೇರಿಸಲಿದ್ದಾರೆ. ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಅಧ್ಯಕ್ಷತೆ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ರಾಜೇಂದ್ರ ಸಣ್ಣಕ್ಕಿ, ತಾಪಂ ಸದಸ್ಯ ಲಕ್ಷ್ಮಣ ನೀಲನ್ನವರ, ಗೋಕಾಕ ಎಪಿಎಂಸಿ ನಿರ್ದೇಶಕ ಬಸವರಾಜ ಸಾಯನ್ನವರ ಜ್ಯೊತಿ ಪ್ರಜ್ವಲಿಸಲಿದ್ದಾರೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಜಿಪಂ, ತಾಪಂ, ಗ್ರಾಪಂ ಮಾಜಿ ಮತ್ತು ಹಾಲಿ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘಗಳ ಅಧ್ಯಕ್ಷರು, ಸದಸ್ಯರು, ಗಣ್ಯರು, ಸಂತ ಶರಣರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸ್ಥಳೀಯ ಹಾಗೂ ಸುತ್ತಲಿನ ಹಲವು ನಗರ, ಪಟ್ಟಣ, ಹಳ್ಳಿಗಳ ನೂರಾರು ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಗುರುಸ್ವಾಮಿಗಳ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮಗಳು ನಡೆದ ಬಳಿಕ ಪ್ರಸಕ್ತ ವರ್ಷದ ಕಾರ್ಯಕ್ರಮ ಸಮಾರೂಪಗೊಳ್ಳಲಿದೆ ಎಂದು ಇಲ್ಲಿಯ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.