ಕೌಜಲಗಿ:ಆಂಧ್ರ ಮೂಲದ ಕೂಲಿಕರ್ಮಿಗಳಿಗೆ ಪೋಲಿಸ್ ಪಿಎಸ್ಐ ಹನುಮಂತ ನೇರಳೆ ಅವರಿಂದ ನೆರವು
ಆಂಧ್ರ ಮೂಲದ ಕೂಲಿಕರ್ಮಿಗಳಿಗೆ ಪೋಲಿಸ್ ಪಿಎಸ್ಐ ಹನುಮಂತ ನೇರಳೆ ಅವರಿಂದ ನೆರವು
ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಎ 2 :
ಸಮೀಪದ ಕುಲಗೋಡ ಪೋಲಿಸ್ ಠಾಣೆಯ ಪಿ.ಎಸ್.ಐ. ಹನಮಂತ ಕೆ. ನೇರಳೆ ಅವರು ತಮ್ಮ ಸಿಬ್ಬಂದಿಯೊಂದಿಗೆ ಕೂಲಿಕರ್ಮಿಗಳಿಗೆ ನಿತ್ಯದ ದಿನಸಿ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದ ಹತ್ತಿರದ ಹೊಲವೊಂದರಲ್ಲಿ ಕಟ್ಟಿಗೆ ಸುಟ್ಟು ಇದ್ದಿಲು ಮಾಡಿ ಮಾರಿ ಉಪಜೀವನ ಸಾಗಿಸುತ್ತಿದ್ದ ಆಂಧ್ರ ಮೂಲದ ಸುಮಾರು 25 ಕುಟುಂಬಗಳಿವೆ. ಜಗತ್ತಿನಾದ್ಯಂತ ಕೊರೊನಾ ಸೊಂಕು ಹರಡುವಿಕೆಯಿಂದಾಗಿ ಇಡೀ ಭಾರತವೇ ಬಂದ್ ಆದ ಪರಿಸ್ಥಿತಿಯಲ್ಲಿ ಇಲ್ಲಿಯ ಕೂಲಿಕರ್ಮಿಗಳು ಕೆಲಸವಿಲ್ಲದೆ, ವಾಸಿಸಲು ಸೂರು ಇಲ್ಲದೆ ನಿತ್ಯದ ಊಟಕ್ಕಾಗಿ ಹಾತೊರೆಯುವ ದುಃಸ್ಥಿತಿಯಲ್ಲಿದ್ದ ಕುಟುಂಬಗಳಿಗೆ ಪೋಲಿಸ್ ಅಧಿಕಾರಿ ಎಚ್.ಕೆ.ನೇರಳೆ ಅವರು ತಮ್ಮ ಪೋಲಿಸ್ ಸಿಬ್ಬಂದಿಯೊಂದಿಗೆ ಸಕ್ಕರೆ, ಚಹಾಪುಡಿ, ಸಾಬೂನು, ಸಾಬೂನುಪುಡಿ, ಅಕ್ಕಿ, ಅವಲಕ್ಕಿ, ತೊಗರಿಬೇಳೆ, ಹಸಿರುಬೇಳೆ, ಬೆಲ್ಲ, ಶೇಂಗಾ, ಅರಿಶಿನ, ಉಪ್ಪು ಮುಂತಾದ ವಸ್ತುಗಳನ್ನು ಉಚಿತವಾಗಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿಎಸ್ಐ ಎಚ್.ಕೆ.ನೇರಳೆ ಅವರು, ಜಾಗತಿಕ ಮಹಾ ಮಾರಿಯಾದ ಕೊರೊನಾ ಸೊಂಕು ಹರಡುವಿಕೆಯಿಂದಾಗಿ ಕೂಲಿಕರ್ಮಿಗಳು ಕೆಲಸವಿಲ್ಲದೆ ಒಂದೊತ್ತು ತುತ್ತು ಅನ್ನಕ್ಕೂ ಗತಿಯಿಲ್ಲದೆ ಕೈಚಲ್ಲಿ ಕುಳಿತಿರುವಾಗ ಅಂತಹ ಕುಟುಂಬಗಳನ್ನು ನೋಡಿ ಕರಳು ಚುರುಕ ಎಂದಿತು. ಅವರಿಗೆ ನಮ್ಮಿಂದಾದ ಅಲ್ಪಸ್ವಲ್ಪ ಸಹಾಯ ಮಾಡಿದ್ದೇವೆ. ಉಳ್ಳವರು ಇಂಥ ಕೂಲಿಕರ್ಮಿಗಳಿಗೆ ಸಹಾಯ ಮಾಡುವಂತಾಗಲಿ ಎಂದು ಹೇಳಿದರು. ಕುಲಗೋಡ ಪೋಲಿಸ್ ಠಾಣೆಯ ಸಿಬ್ಬಂದಿ ಹಾಜರಿದ್ದರು. ದಿನಸಿ ವಸ್ತುಗಳನ್ನು ಕೂಲಿಕರ್ಮಿಗಳಿಗೆ ವಿತರಿಸಲು ಎಚ್.ಕೆ.ನೇರಳೆಯವರು ಸಾಮಾನ್ಯ ವ್ಯಕ್ತಿಯಾಗಿ ಬಂದು ವಸ್ತುಗಳನ್ನು ವಿತರಿಸಿದ್ದು ವಿಶೇಷವಾಗಿತ್ತು.