ಗೋಕಾಕ:ಪಠ್ಯಪುಸ್ತಕದಲ್ಲಿ ಸೈನಿಕ ನಿಂದನೆ ಖಂಡಿಸಿ ಮಾಜಿ ಸೈನಿಕರ ಪ್ರತಿಭಟನೆ
ಪಠ್ಯಪುಸ್ತಕದಲ್ಲಿ ಸೈನಿಕ ನಿಂದನೆ ಖಂಡಿಸಿ ಮಾಜಿ ಸೈನಿಕರ ಪ್ರತಿಭಟನೆ
ಗೋಕಾಕ ಅ 14: ಮಂಗಳೂರು ವಿಶ್ವವಿದ್ಯಾಲಯದ ಬಿಸಿಎ ಪ್ರಥಮ ವರ್ಷದ ಪಠ್ಯಪುಸ್ತಕದಲ್ಲಿ ಸೈನಿಕ ನಿಂದನೆ ಕುರಿತು ಪಠ್ಯ ಅಳವಡಿಸಿರುವುದನ್ನು ಖಂಡಿಸಿ ಇಲ್ಲಿಯ ಮಾಜಿ ಸೈನಿಕರ ಗ್ರಾಮೀಣ ಅಭಿವೃದ್ದಿ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಪಠ್ಯವನ್ನು ರದ್ದು ಪಡಿಸಿ, ಲೇಖಕರಿಗೆ ನೀಡಿದ ಪ್ರಶಸ್ತಿ, ಪುರಸ್ಕಾರ, ಹಿಂಪಡೆಯುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಡಿವಾಯ್ಎಸ್ಪಿ ಹಾಗೂ ತಹಶೀಲದಾರರಿಗೆ ಪತ್ಯೇಕವಾಗಿ ಸೋಮವಾರದಂದು ಮನವಿ ಸಲ್ಲಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಬಿಸಿಎ ಪ್ರಥಮ ವರ್ಷದ ಪಠ್ಯಪುಸ್ತಕದಲ್ಲಿ ಲೇಖಕ ಬರಗೂರ ರಾಮಚಂದ್ರಪ್ಪ ಅವರು ಯುದ್ಧ ಒಂದು ಉದ್ಯಮ ಎಂಬ ಹೆಸರಿನ ಅಧ್ಯಾಯದಲ್ಲಿ ಸೈನಿಕ ಸಮುದಾಯವನ್ನು ತುಚ್ಛವಾಗಿ ಪ್ರತಿಬಿಂಬಿಸಲಾಗಿದೆ. ದೇಶದ ಗಡಿ ಗ್ರಾಮಗಳಲ್ಲಿ ಪರಸ್ಪರ ಮುತ್ತಿಗೆ ನಡೆದಾಗ ಅತ್ಯಾಚಾರವು ನಡೆಯುತ್ತವೆ, ಇದರಲ್ಲಿ 2 ರಾಷ್ಟ್ರಗಳ
ಸೈನಿಕರು ಭಾಗಿಗಳೆಂದು ಪಠ್ಯದಲ್ಲಿ ವಿವರಿಸಲಾಗಿದೆ.
ಇದು ಸೈನಿಕ ಸಮುದಾಯದ ಭಾವನೆಗಳಿಗೆ ದಕ್ಕೆಯನ್ನುಂಟು ಮಾಡಿ, ಅವರ ಮನೋಬಲವನ್ನು ಕುಗ್ಗಿಸಿದೆ. ಇಂಥಹ ಲೇಖನ ಬರೆದ ಸಾಹಿತಿ ಬರಗೂರ ರಾಮಚಂದ್ರಪ್ಪ ಅವರಿಗೆ ನೀಡಿರುವ ಪ್ರಶಸ್ತಿ, ಪುರಸ್ಕಾರ, ಹುದ್ದೆಗಳನ್ನು ಹಿಂಪಡೆದು ಇಂತಹ ಘಟನೆ ಮರುಕಳಿಸದಂತೆ ನೀಗಾ ವಹಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪಿ.ಎಮ್.ಕಂಬಳಿ, ಉಪಾಧ್ಯಕ್ಷ ಎಫ್.ಎಸ್.ಗೌಡರ, ನಿರ್ದೇಶಕರಾದ ಎಸ್.ಎಲ್.ಮಾನೋಜಿ, ಬಿ.ಎಲ್.ಕರೆನ್ನವರ, ವಾಯ್.ಡಿ.ಬೀರನಗಡ್ಡಿ, ಬಿ.ಮಾಗಿ, ಎಮ್.ಬಿ.ಸಿದ್ದಗೌಡರ, ಆಯ್.ಎಸ್.ಬೆನಕನ್ನವರ, ಜಿ.ಎಲ್.ಕುದರಿಮನಿ, ಡಿ.ಡಿ.ಲೋಕನ್ನವರ ಸೇರಿದಂತೆ ಅನೇಕರು ಇದ್ದರು.