ಗೋಕಾಕ:ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ವತಿಯಿಂದ ಸಚಿವ ಜಾರಕಿಹೊಳಿಗೆ ಮನವಿ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ವತಿಯಿಂದ ಸಚಿವ ಜಾರಕಿಹೊಳಿಗೆ ಮನವಿ
ಗೋಕಾಕ ಸೆ 6: ಗೋಕಾಕ ತಾಲೂಕಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ವತಿಯಿಂದ ಸಮುದಾಯಕ್ಕೆ ಸಿಗಬೇಕಾದ ಟೆಂಡರ್ ನೀಡುವಂತೆ ಆಗ್ರಹಿಸಿ ಬುಧವಾರದಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಸಚಿವರ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿದರು.
ಸನ್ 2017ರ ಕರ್ನಾಟಕ ಅಧಿನಿಯಮ ಸಂಖ್ಯೆ 31 ನೇದ್ದರ ಪ್ರಕಾರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ(ತಿದ್ದುಪಡಿ) ಅಧಿನಿಯಮ 2016ನ್ನು 1999ರ ಅಧಿನಿಯಮದ ಪ್ರಕರಣ 6ಕ್ಕೆ ತಿದ್ದುಪಡಿ ತಂದಿದ್ದು ಟೆಂಡರ್ ಆಹ್ವಾನಿಸುವಾಗ ನಿರ್ಮಾಣ ಕಾಮಗಾರಿಗಳ ಮೊತ್ತ ರೂ.50ಲಕ್ಷ ಗಳಿಗೆ ಮೀರದ ಕಾಮಗಾರಿಗಳಲ್ಲಿ ಟೆಂಡರ್ ಆಹ್ವಾನಿಸುವ ಪ್ರಾಧಿಕಾರವು ಅಧಿಸೂಚಿತ ಇಲಾಖೆಗಳಲ್ಲಿ 17.15% ಅನುಸೂಚಿತ ಜಾತಿಗಳ ವರ್ಗಕ್ಕೆ ಹಾಗೂ 6.95% ಅನುಸೂಚಿತ ಪಂಗಡಗಳ ವರ್ಗಕ್ಕೆ ಸೇರಿದ ಸಮುದಾಯದವರಿಗೆ ಟೆಂಡರ್ ನೀಡಲು ಅಧಿಸೂಚನೆ ಇರುತ್ತದೆ. ಈ ಸಮುದಾಯದ ಗುತ್ತಿಗೆದಾರರಿಗೆ ಟೆಂಡರ್ ತಪ್ಪಿಸುವ ಸಲುವಾಗಿ ಅಧಿಸೂಚಿತ ಇಲಾಖೆಗಳಲ್ಲಿ ನಿರ್ಮಾಣ ಕಾಮಗಾರಿಗಳ ಮೊತ್ತವನ್ನು ಕೆಲವೊಂದು ಸಣ್ಣ ಸಣ್ಣ ಕಾಮಗಾರಿಗಳನ್ನು ಕೂಡಿಸಿ ಪ್ಯಾಕೇಜ್ ತೆರನಾಗಿ ವಿಂಗಡಿಸಿ ಅವುಗಳ ನಿರ್ಮಾಣ ಕಾಮಗಾರಿಯ ಮೊತ್ತ 50 ಲಕ್ಷ ಕಿಂತಲೂ ಹೆಚ್ಚಿಗೆ ಮಾಡುತ್ತಿರುವದು ಕಂಡು ಬರುತ್ತಿದೆ
ಸಮುದಾಯದ ಗುತ್ತಿಗೆದಾರರಿಗೆ ಟೆಂಡರ್ ದೊರೆಯದಂತೆ ಮಾಡುತ್ತಿದ್ದು ಅದನ್ನು ತಡೆಯುವಂತೆ ಸಂಬಂಧಿಸಿದ ಅನುಸೂಚಿತ ಇಲಾಖೆಗಳಿಗೆ ಸೂಚಿಸಿ ಈ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆದು ಸಿಗಬೇಕಾದ ಟೆಂಡರ್ ನೀಡುವಂತೆ ಸೂಚಿಸುವುದಾಗಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಗೋಕಾಕ ತಾಲೂಕಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಣಮಂತ ಪುರಂದರೆ, ಉಪಾಧ್ಯಕ್ಷ ತಿಮ್ಮಣ್ಣಾ ಪವಾರ, ಕಾರ್ಯದರ್ಶಿ ಎಲ್.ಜಿ.ಗಾಡಿವಡ್ಡರ, ಖಜಾಂಚಿ ಯಲ್ಲಪ್ಪ ಗಾಡಿವಡ್ಡರ, ಗೌರವಾಧ್ಯಕ್ಷ ಮಹಾಲಿಂಗಪ್ಪ ಸಾಯನ್ನವರ, ಸದಸ್ಯರುಗಳಾದ ಶ್ರೀಶೈಲ ನಾಯಿಕ, ಅಶೋಖ ಹೂಲಿಕಟ್ಟಿ,ಮಹೇಶ ಗಾಡಿವಡ್ಡರ, ಶಿವಾನಂದ ಸಾಗರ, ಸಾವಂತ ಮನ್ನೋಡ್ಡರ,ಭೀಮಪ್ಪ ಪಾತ್ರೋಟ, ನಾಗಪ್ಪ ವಡ್ಡರ, ಅಶೋಕ ವಾಳದ, ಪದ್ಮಾವತಿ ಹರಿಜನ ಇದ್ದರು.