RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ :ಮನ್ನಿಕೇರಿ : 50 ಲಕ್ಷ ರೂ. ವೆಚ್ಚದ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ :ಮನ್ನಿಕೇರಿ : 50 ಲಕ್ಷ ರೂ. ವೆಚ್ಚದ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ 

ಮನ್ನಿಕೇರಿ : 50 ಲಕ್ಷ ರೂ. ವೆಚ್ಚದ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಕರ್ನಾಟಕ ನೀರಾವರಿ ನಿಗಮದಿಂದ ಸಮುದಾಯ ಭವನಕ್ಕೆ ಅನುದಾನ ಬಿಡುಗಡೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಈ ಭಾಗದಲ್ಲಿ ಮನ್ನಿಕೇರಿ ಮಹಾಂತಲಿಂಗೇಶ್ವರ ದೇವಸ್ಥಾನವು ಇತಿಹಾಸದಿಂದ ಕೂಡಿದ್ದು, ಅಪಾರ ಭಕ್ತ ಸಮೂಹವನ್ನು ಆಕರ್ಷಿಸುತ್ತಿರುವ ಮಠವಾಗಿದೆ. ಸಮುದಾಯ ಭವನ ನಿರ್ಮಾಣದಿಂದಾಗಿ ಮದುವೆ, ಮುಂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಮನ್ನಿಕೇರಿ ಗ್ರಾಮದ ಹೊರವಲಯದಲ್ಲಿರುವ ಮಹಾಂತಲಿಂಗೇಶ್ವರ ದೇವಸ್ಥಾನದ ಬಳಿ ಬುಧವಾರ ದಂದು ಕರ್ನಾಟಕ ನೀರಾವರಿ ನಿಗಮದ 50 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಿರುವ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಮುದಾಯ ಭವನ ನಿರ್ಮಾಣದಿಂದ ಮನ್ನಿಕೇರಿ ಮತ್ತು ಸುತ್ತಲಿನ ಗ್ರಾಮಗಳ ಸದ್ಬಕ್ತರಿಗೆ ವಿಧಾಯಕ ಕಾರ್ಯಕ್ರಮಗಳಿಗಾಗಿ ಅನುಕೂಲವಾಗಲಿದೆ ಎಂದು ಹೇಳಿದರು.
ಮನ್ನಿಕೇರಿ ಗ್ರಾಮದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯಗಳು ಇಷ್ಟರಲ್ಲಿಯೇ ದೊರೆಯಲಿವೆ. ಕಲ್ಮಡ್ಡಿ ಏತ ನೀರಾವರಿ ಅನುಷ್ಠಾನದಿಂದಾಗಿ ಈ ಭಾಗದಲ್ಲಿ ನೀರಾವರಿ ಸೌಲಭ್ಯ ದೊರಕಲಿದ್ದು, ಈಗಾಗಲೇ ರಾಮೇಶ್ವರ ಏತ ನೀರಾವರಿ ಯೋಜನೆಯ ಅನುಷ್ಠಾನದಿಂದಾಗಿ ಮನ್ನಿಕೇರಿಯ ಹಲವು ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರಕಿದೆ. ಜೊತೆಗೆ ಇಲ್ಲಿಯ ಕೆರೆಗಳನ್ನು ಭರ್ತಿ ಮಾಡಿಸುವ ಇರಾದೆ ವ್ಯಕ್ತಪಡಿಸಿದರು.
ಹದಗೆಟ್ಟಿರುವ ರಸ್ತೆಗಳ ದುರಸ್ತಿಗಾಗಿ ಆದ್ಯತೆ ನೀಡಲಾಗುತ್ತಿದ್ದು, ಈಗಾಗಲೇ ಹಲವು ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಮನ್ನಿಕೇರಿಯಿಂದ ಸವದತ್ತಿ ತಾಲೂಕಿನ ಹದ್ದಿನವರೆಗೆ ಹದಗೆಟ್ಟಿರುವ ರಸ್ತೆಯನ್ನು ಸುಧಾರಣೆ ಮಾಡಲಾಗುವುದು. ಮನ್ನಿಕೇರಿಯಿಂದ ಹುಲಕುಂದವರೆಗಿನ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ವಹಿಸಿದ್ದು, ಕಾಮಗಾರಿ ಇಷ್ಟರಲ್ಲಿಯೇ ಆರಂಭವಾಗಲಿದೆ. ಇದಕ್ಕಾಗಿ 70 ಲಕ್ಷ ರೂ.ಗಳನ್ನು ಮಂಜೂರಾತಿ ಪಡೆಯಲಾಗಿದೆ. ಮನ್ನಿಕೇರಿಯಿಂದ ದಾಸನಾಳವರೆಗಿನ ರಸ್ತೆ ಕಾಮಗಾರಿಗೆ ಕರ್ನಾಟಕ ನೀರಾವರಿ ನಿಗಮದಿಂದ 70 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಈ ಕಾಮಗಾರಿಯೂ ಸಹ ಇಷ್ಟರಲ್ಲಿಯೇ ಪ್ರಾರಂಭಿಸಲಾಗುವುದು. ರೈತರ ಜಮೀನುಗಳಿಗೆ ನೀರು ಹರಿಸುವ ಮೂಲಕ ಈ ಭಾಗವನ್ನು ಸಂಪೂರ್ಣ ಹಸಿರುಮಯವನ್ನಾಗಿಸುವ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.
ಸಾನಿಧ್ಯ ವಹಿಸಿದ್ದ ಸ್ಥಳೀಯ ವಿಜಯ ಸಿದ್ಧೇಶ್ವರ ಸ್ವಾಮಿಗಳು ಮಾತನಾಡಿ, ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿಸಿ ಸದ್ಬಕ್ತರ ಬಯಕೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈಡೇರಿಸಿದ್ದಾರೆ. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕಷ್ಟದಲ್ಲಿದ್ದವರಿಗೆ ಆಪದ್ಭಾಂದವರಾಗಿದ್ದಾರೆ. ಎಲ್ಲ ಸಮಾಜಗಳನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಮಠಮಾನ್ಯಗಳ ಜೀರ್ಣೋದ್ಧಾರ ಕಲ್ಪಿಸಿಕೊಡುತ್ತಿದ್ದಾರೆ. ಇಂತಹ ಶಾಸಕರು ಬೇರೆಲ್ಲೂ ಯಾರಿಗೂ ಸಿಗುವುದಿಲ್ಲ. ಇಂತಹ ಕರುಣಾಮಯಿ ಹಾಗೂ ಬಂಗಾರದ ವ್ಯಕ್ತಿಯನ್ನು ಪಡೆದಿರುವುದು ಅರಭಾವಿ ಕ್ಷೇತ್ರದ ನಾಗರೀಕರ ಪುಣ್ಯವೆಂದು ಬಾಲಚಂದ್ರ ಜಾರಕಿಹೊಳಿ ಅವರ ಸೇವಾ ಕಾರ್ಯಗಳನ್ನು ಸ್ವಾಮಿಗಳು ಶ್ಲಾಘಿಸಿದರು.
ಹನಮಂತ ಗುರು, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಪ್ರಭಾಶುಗರ ನಿರ್ದೇಶಕ ಎಂ.ಆರ್. ಭೋವಿ, ರವಿ ಪರುಶೆಟ್ಟಿ, ತಾಪಂ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಕಳ್ಳಿಗುದ್ದಿ ಗ್ರಾಪಂ ಮಾಜಿ ಅಧ್ಯಕ್ಷರಾದ ಮುದಕಪ್ಪ ಗೋಡಿ, ಬಾಳಪ್ಪ ಗೌಡರ, ಮುಖಂಡರಾದ ಅಡಿವೆಪ್ಪ ಅಳಗೋಡಿ, ಸುಭಾಸ ಕೌಜಲಗಿ, ಅಡಿವೆಪ್ಪ ದಳವಾಯಿ, ಸತ್ತೆಪ್ಪ ಗಡಾದ, ಬಸಪ್ಪ ನಾಯ್ಕರ, ಪುಂಡಲೀಕ ದಳವಾಯಿ, ಲಕ್ಷ್ಮಣ ಗಡಾದ, ಮಹಾಂತಯ್ಯಾ ಹಿರೇಮಠ, ಮಹಾಂತೇಶ ಮೆಟ್ಟಿನ, ಮಾರುತಿ ಮುರಗಜ್ಜಗೋಳ, ಜಿಆರ್‍ಬಿಸಿ ಕೌಜಲಗಿ ವಿಭಾಗದ ಇಇ ಬಿ.ಎಸ್. ಪಾಟೀಲ, ಮನ್ನಿಕೇರಿ ಹಾಗೂ ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts: