ಗೋಕಾಕ:ಕೇಂದ್ರ ನೆರೆ ಅಧ್ಯಯನ ತಂಡದಿಂದ ಕಾಟಾಚಾರದ ಭೇಟಿ : ಪ್ರವಾಹದಿಂದ ಬಿದ್ದ ಮನೆಗಳ ಮತ್ತು ಹಾನಿಗೊಳಗಾದ ಲೋಳಸೂರ ಸೇತುವೆ ವೀಕ್ಷಣೆ
ಕೇಂದ್ರ ನೆರೆ ಅಧ್ಯಯನ ತಂಡದಿಂದ ಕಾಟಾಚಾರದ ಭೇಟಿ : ಪ್ರವಾಹದಿಂದ ಬಿದ್ದ ಮನೆಗಳ ಮತ್ತು ಹಾನಿಗೊಳಗಾದ ಲೋಳಸೂರ ಸೇತುವೆ ವೀಕ್ಷಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 5 :
ನಗರದಲ್ಲಿ ಆದ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೆ ಒಳಗಾಗಿರುವ ಗೋಕಾಕ ತಾಲೂಕಿನ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡವು ರವಿವಾರದಂದು ನಗರದ ಸಿಂದಗಾರ ಓಣಿಯಲ್ಲಿ ಪ್ರವಾಹದಿಂದ ಬಿದ್ದ ಮನೆಗಳ ಮತ್ತು ಹಾನಿಗೊಳಗಾದ ಲೋಳಸೂರ ಸೇತುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸುಶೀಲ್ ಪಾಲ್ ನೇತೃತ್ವದ 7 ಜನರಿರುವ ಕೇಂದ್ರ ನೆರೆ ಅಧ್ಯಯನ ತಂಡ ನಗರಕ್ಕೆ ಆಗಮಿಸಿದ್ದ ವೇಳೆ ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮತ್ತಿತರ ಅಧಿಕಾರಿಗಳು ಸೇತುವೆ ಹಾನಿಯಿಂದ ಸ್ಥಳೀಯರು ಹಾಗೂ ವಾಹನ ಸವಾರರು ಅನುಭವಿಸುತ್ತಿರುವ ಎದುರಿಸುತ್ತಿರುವ ಸಂಕಷ್ಟಗಳನ್ನು ಹಾಗೂ ನಗರದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ಮಾಹಿತಿಯನ್ನು ಕೇಂದ್ರದ ಅಧಿಕಾರಿಗಳಿಗೆ ವಿವರಿಸಿದರು.
ಕೇಂದ್ರ ನೆರೆ ಅಧ್ಯಯನ ತಂಡದಿಂದ ಕಾಟಾಚಾರದ ಭೇಟಿ : ನಗರಕ್ಕೆ ಆಗಮಿಸಿದ್ದ ಕೇಂದ್ರ ಅಧ್ಯಯನ ತಂಡ ಪ್ರವಾಹದಿಂದ ಹಾನಿಗೊಳಗಾದ ಲೋಳಸೂರ ಸೇತುವೆಗೆ ತರಾತುರಿಯಲ್ಲಿ ಭೇಟಿ ನೀಡಿ ಹೊರಟಿತು. ಈ ವೇಳೆ ನೆರೆ ಸಂತ್ರಸ್ತರನ್ನು ಭೇಟಿ ಮಾಡದೇ ಅಧಿಕಾರಿಗಳು ಹೇಳಿದ್ದನ್ನಷ್ಟೇ ಕೇಳಿ ಅಧ್ಯಯನವನ್ನ ಮುಗಿಸಲಾಗಿದೆ ಎಂಬ ಆರೋಪ ಕೇಳಿ ಬಂದವು. ಸಂತ್ರಸ್ತರ ಸಂಕಷ್ಟ ಆಲಿಸದೇ, ಮಾಧ್ಯಮಗಳಿಗೂ ಯಾವುದೇ ಪ್ರತಿಕ್ರಿಯೆ ನೀಡದೆ ವಾಪಸ್ ಆಗಿರುವುದು ನೆರೆ ತಂಡದ ಕಾರ್ಯವೈಖರಿಯು ಜನರ ಆಕ್ರೋಶಕ್ಕೆ ಕಾರಣವಾಯಿತು.
ಈ ಸಂದರ್ಭದಲ್ಲಿ ಪೌರಾಯುಕ್ತ ಶಿವಾನಂದ ಹಿರೇಮಠ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ನಗರಸಭೆ ಸದಸ್ಯ ಬಾಬು ಮುಳಗುಂದ , ಸಿಪಿಐಗಳಾದ ಗೋಪಾಲ ರಾಠೋಡ, ಶ್ರೀಶೈಲ ಬ್ಯಾಕೂಡ , ಪಿಎಸ್ಐಗಳಾದ ನಾಗರಾಜ ಖಿಲಾರೆ, ಹಾಲಪ್ಪ ಬಾಲದಂಡಿ ,ಅಮ್ಮಣಗಿ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು