RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಶಾಸಕ ರಮೇಶ ಜಾರಕಿಹೊಳಿ ಅವರು ಕೊಳಗೇರಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ : ಪೌರಾಯುಕ್ತ ಶಿವಾನಂದ ಹಿರೇಮಠ

ಗೋಕಾಕ:ಶಾಸಕ ರಮೇಶ ಜಾರಕಿಹೊಳಿ ಅವರು ಕೊಳಗೇರಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ : ಪೌರಾಯುಕ್ತ ಶಿವಾನಂದ ಹಿರೇಮಠ 

ಶಾಸಕ ರಮೇಶ ಜಾರಕಿಹೊಳಿ ಅವರು ಕೊಳಗೇರಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ : ಪೌರಾಯುಕ್ತ ಶಿವಾನಂದ ಹಿರೇಮಠ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 21:
ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಸತತ ಪ್ರಯತ್ನದಿಂದ ಕೊಳಗೇರಿ ಅಭಿವೃದ್ಧಿ ಮಂಡಳಿ 600 ಮನೆಗಳನ್ನು ಮಂಜುರು ಮಾಡಿದ್ದು, ಗೋಕಾಕ ನಗರ ವ್ಯಾಪ್ತಿಯಲ್ಲಿ 380 ಮನೆಗಳನ್ನು ನಿರ್ಮಿಸಿಕೊಳ್ಳಲು ಫಲಾನುಭವಿಗಳಿಗೆ ಸರಕಾರದಿಂದ ಅನುದಾನ ತಂದು ಕೊಳಗೇರಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ಹೇಳಿದರು.
ಅವರು, ಸೋಮವಾರದಂದು ಇಲ್ಲಿನ ಆದಿಜಾಂಬವ ನಗರದಲ್ಲಿ ರಾಜ್ಯ ವಸತಿ ಇಲಾಖೆ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಕಟ್ಟಡ ನಿರ್ಮಿಸಿಕೊಂಡಿರುವ 200 ಜನ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ 25ವರ್ಷಗಳ ನಂತರ ಮೊದಲ ಬಾರಿಗೆ ಗೋಕಾಕ ಮತಕ್ಷೇತ್ರದ ಘೋಷಿತ ಸರಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಕೊಳಗೇರಿ ನಿವಾಸಿಗಳಿಗೆÉ ಹಕ್ಕು ಪತ್ರ ವಿತರಿಸಲಾಗುತ್ತಿದೆ. ಇನ್ನುಳಿದ 240 ಮನೆಗಳು ಮಂಜೂರಾಗಿದ್ದು, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಗಳ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗುವದು ಹಾಗೂ ಇನ್ನುಳಿದ ಎಲ್ಲ ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿ ಮಾಲದಿನ್ನಿ ಕ್ರಾಸ್ ಹತ್ತಿರ ಮನೆ ನಿರ್ಮಿಸಿಕೊಡಲು ಶಾಸಕರು ಪ್ರಯತ್ನಿಸುತ್ತಿದ್ದಾರೆ ಎಂದರು.
ಶಾಸಕ ರಮೇಶ ಜಾರಕಿಹೊಳಿ ಅವರು ಘೋಷಿತ ಸರಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ 5ಕೋಟಿ ರೂಗಳ ಕಾಮಗಾರಿಗಳ ಪ್ರಸ್ತಾವನೆಯನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಿದ್ದು, ಸದ್ಯ 1.50ಕೋಟಿ ರೂ ಹಣ ಬಿಡುಗಡೆಗೊಂಡಿದ್ದು, ಇನ್ನುಳಿದ ಹಣ ಬಿಡುಗಡೆಗೆ ಶ್ರಮಿಸುತ್ತಿದ್ದಾರೆ. ಶಾಸಕರು ಕೊಳಗೇರಿ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದಾರೆ ಎಂದರು.
ಶಾಸಕ ರಮೇಶ ಜಾರಕಿಹೊಳಿ ಕೊಳಗೇರಿ ನಿವಾಸಿ 200ಜನ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ, ಸರಕಾರದ ಸೌಲಭ್ಯ ಸದುಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ವೇದಿಕೆಯ ಮೇಲೆ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ ಸಿದ್ದಪ್ಪ ಹುಚ್ಚರಾಯಪ್ಪಗೋಳ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಅಭಿಯಂತರ ಮಾರುತಿ ಲಮಾಣಿ, ಸಹಾಯಕ ಅಭಿಯಂತರ ಫಣಿರಾಜ ಎಸ್, ನಗರಸಭೆ ಹಿರಿಯ ಸದಸ್ಯ ಅಬ್ಬಾಸ ದೇಸಾಯಿ ಇತರರು ಇದ್ದರು.
ಶಿಕ್ಷಕ ಎಮ್ ಜಿ ಕೋಳಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Related posts: