RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಶಿಕ್ಷಕ ಗಣಪತಿ ಉಪ್ಪಾರ ರ ಪರಿಸರ ಪ್ರೇಮಕ್ಕೆ ಹಚ್ಚು ಹಸಿರಾದ ಕಲ್ಲೋಳಿಯ ಬರಡು ಭೂಮಿಯ ಶಾಲೆ

ಗೋಕಾಕ:ಶಿಕ್ಷಕ ಗಣಪತಿ ಉಪ್ಪಾರ ರ ಪರಿಸರ ಪ್ರೇಮಕ್ಕೆ ಹಚ್ಚು ಹಸಿರಾದ ಕಲ್ಲೋಳಿಯ ಬರಡು ಭೂಮಿಯ ಶಾಲೆ 

ಶಿಕ್ಷಕ ಗಣಪತಿ ಉಪ್ಪಾರ ರ ಪರಿಸರ ಪ್ರೇಮಕ್ಕೆ ಹಚ್ಚು ಹಸಿರಾದ ಕಲ್ಲೋಳಿಯ ಬರಡು ಭೂಮಿಯ ಶಾಲೆ

ವಿಶೇಷ ವರದಿ

ಗೋಕಾಕ ಅ 16 : ಗೋಕಾಕ ತಾಲ್ಲೂಕಿನ ಕಲ್ಲೋಳಿಯಿಂದ ಜೋಕಾನಟ್ಟಿಯತ್ತ ಹೋಗುವ ದಾರಿಯಲ್ಲಿ ಸಡ್ಲ್ಯಾರಮಡ್ಡಿ ಶಾಲೆ ಮಡ್ಡಿ (ಬರಡು ಭೂಮಿಯ) ಶಾಲೆ ಎಂದೇ ಖ್ಯಾತಿ. ಆದರೆ ಶಿಕ್ಷಕರೊಬ್ಬರ ಪರಿಸರ ಕಾಳಜಿಯಿಂದಾಗಿ ಅದು ಈಗ ಪರಿಸರ ಶಾಲೆಯಾಗಿ ಮಾರ್ಪಟ್ಟಿದೆ.

ಶಾಲೆಯ ಮುಖ್ಯ ಶಿಕ್ಷಕ ಗಣಪತಿ ಕೆ. ಉಪ್ಪಾರ ಅವರ ಇಚ್ಛಾಶಕ್ತಿಯಿಂದಾಗಿ ತರಹೇವಾರಿ ಗಿಡಗಳು ಬೆಳೆದಿದ್ದು ಈಗ ಶಾಲೆ ಆವರಣ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ.

ಗಣಪತಿ ಉಪ್ಪಾರ ಅವರು 2010ರಲ್ಲಿ ಈ ಶಾಲೆಗೆ ಶಿಕ್ಷಕರಾಗಿ ಬಂದಾಗ ಈ ಶಾಲೆಯ ಆವರಣವು ಗಿಡಗಳು ಇಲ್ಲದೆ ಬರಡಾಗಿತ್ತು.

ಉಪ್ಪಾರ ಅವರು ಕೆಲವು ಸಸಿಗಳನ್ನು ನೆಟ್ಟು ಒಂದೊಂದು ಸಸಿಯನ್ನು ಬೆಳೆಸುವ ಜವಾಬ್ದಾರಿಯನ್ನು ಒಂದೊಂದು ಮಗುವಿಗೆ ವಹಿಸಿಕೊಟ್ಟರು.

ಮಕ್ಕಳು ನಿತ್ಯ ನೀರು ಹಾಕಿ ಸಸಿಗಳನ್ನು ಬೆಳೆಸಿದ್ದು, ಈಗ ಅವು ದೊಡ್ಡದಾಗಿ ಬೆಳೆದು ನೆರಳನ್ನು ನೀಡುತ್ತಿವೆ.

ಇಲ್ಲಿ ಮಾವು, ನುಗ್ಗೆಕಾಯಿ, ಲಿಂಬೆಹಣ್ಣು, ಪೇರಲ, ಬಾದಾಮಿ, ಬೇವು, ಕರಿಬೇವು, ವಿವಿಧ ಹೂವಿನ ಗಿಡಗಳು ಇವೆ. ಮರದಿಂದ ಉದುರಿ ಬೀಳುವ ಎಲೆಗಳನ್ನು ಗುಡಿಸಿ ಆವರಣದಲ್ಲಿಯೇ ಸಾವಯವ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕಿ ಪೋಷಣೆ ಮಾಡುತ್ತಿರುವುದು ಇಲ್ಲಿ ವಿಶೇಷವಾಗಿದೆ.

1ರಿಂದ 5ರ ವರೆಗೆ ತರಗತಿಗಳು ಇರುವ ಶಾಲೆಯಾಗಿದ್ದು, ಒಬ್ಬರು ಅತಿಥಿ ಶಿಕ್ಷಕರು ಇದ್ದಾರೆ. ಈಗ 40ಕ್ಕೂ ಅಧಿಕ ಸಂಖ್ಯೆಯ ಮಕ್ಕಳು ದಾಖಲಾಗಿವೆ. ಪರಿಸರ ಕಾಳಜಿಯ ಜೊತೆಗೆ ಶೈಕ್ಷಣಿಕ ಕಲಿಕಾ ಮಾದರಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದು ಮತ್ತು ರಾಷ್ಟ್ರನಾಯಕರ, ಸಾಧಕರ ಭಾವಚಿತ್ರಗಳನ್ನು ಪ್ರದರ್ಶಿಸಿ ಮಕ್ಕಳಲ್ಲಿ ಉತ್ತಮ ಜ್ಞಾನವನ್ನು ಬಿತ್ತುತ್ತಿದ್ದಾರೆ.

ಈ ಶಾಲೆಗೆ ಭೇಟಿ ನೀಡಿದ್ದ ಮೂಡಲಗಿಯ ಹಿಂದಿನ ಬಿಇಒ ಅಜಿತ್ ಮನ್ನಿಕೇರಿ ಹಾಗೂ ಸದ್ಯದ ಬಿಇಒ ಎ.ಸಿ. ಗಂಗಾಧರ ಅವರು ಮುಖ್ಯ ಶಿಕ್ಷಕರ ಪರಿಸರ ಕಾಳಜಿಯನ್ನು ಪ್ರಶಂಸಿಸಿದ್ದಾರೆ.

ಅರಬಾಂವಿ ಶಾಸಕ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಸಹ ಶಿಕ್ಷಕ ಗಣಪತಿ ಉಪ್ಪಾರ ಅವರ ಪರಿಸರ ಪ್ರೇಮವನ್ನು ಮೆಚ್ಚಿ ಶ್ಲಾಘನೀಸಿದ್ದಾರೆ

Related posts: