RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ದುಡುಕಿನ ನಿರ್ಧಾರ ಕೈಗೊಳ್ಳಬೇಡಿ: ಶ್ರೀ ರಂಭಾಪುರಿ ಜಗದ್ಗುರುಗಳು

ಗೋಕಾಕ:ದುಡುಕಿನ ನಿರ್ಧಾರ ಕೈಗೊಳ್ಳಬೇಡಿ: ಶ್ರೀ ರಂಭಾಪುರಿ ಜಗದ್ಗುರುಗಳು 

ದುಡುಕಿನ ನಿರ್ಧಾರ ಕೈಗೊಳ್ಳಬೇಡಿ: ಶ್ರೀ ರಂಭಾಪುರಿ ಜಗದ್ಗುರುಗಳು
ಗೋಕಾಕ ಜೂ 21 : ಭಾರತೀಯ ಸಂಸ್ಕøತಿಯಲ್ಲಿ ಗೋಮಾತೆಗೆ ಪೂಜ್ಯ ಸ್ಥಾನವಿದೆ. ಗೋಮಾತೆಯ ಶರೀರದಲ್ಲಿ ಸಕಲ ದೇವಾನು ದೇವತೆಗಳು ನೆಲೆಸಿರುವರೆಂಬ ನಂಬಿಕೆಯಿದೆ. ಬಹು ಸಂಖ್ಯಾತ ಹಿಂದೂಗಳ ಮನೋಭಾವನೆಗೆ ಧಕ್ಕೆ ತರುವ ಗೋ ಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾನೂನು ರದ್ದುಪಡಿಸುವ ದುಡುಕಿನ ನಿರ್ಧಾರವನ್ನು ಆಡಳಿತಾರೂಢ ಕಾಂಗ್ರೆಸ್ ಸರಕಾರ ಕೈಗೊಳ್ಳಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ನಗರದ ಶ್ರೀ ಮುಪ್ಪಯ್ಯಸ್ವಾಮಿ ಹಿರೇಮಠದಲ್ಲಿ ನಿರ್ಮಾಣಗೊಂಡ ಶ್ರೀ ಜಗದ್ಗುರು ರೇಣುಕ ಭವನ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ವಿವಿಧತೆಯಲ್ಲಿ ಏಕತೆ ಕಾಣುವ ಸಂಸ್ಕøತಿ ನಮ್ಮದು. ಸಂವಿಧಾನದಲ್ಲಿ ಅವರವರು ತಮ್ಮ ತಮ್ಮ ಧರ್ಮಾಚರಣೆ ಮಾಡಲು ಅವಕಾಶವಿದೆ. ಸ್ವಧರ್ಮದಲ್ಲಿ ನಿಷ್ಠೆ ಶ್ರದ್ಧೆಯಿರಲಿ. ಪರಧರ್ಮದ ಬಗೆಗೆ ಸಹಿಷ್ಣುತಾ ಮನೋಭಾವ ಹೊಂದಿರಬೇಕು. ಜಾತಿ ಧರ್ಮದ ಹೆಸರಿನಲ್ಲಿ ಸಂಘರ್ಷಗಳು ನಡೆಯಬಾರದು. ಹಿಂದಿನ ಬಿ.ಜೆ.ಪಿ. ಸರಕಾರ ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾನೂನು ತಂದಿದ್ದನ್ನು ರದ್ದುಪಡಿಸಬೇಕೆಂಬ ಹಠ ಬೇಡ. ಇದನ್ನು ರದ್ದು ಪಡಿಸುವ ದುಡುಕಿನ ನಿರ್ಧಾರ ಕೈಗೊಂಡಲ್ಲಿ ಬರಲಿರುವ ಲೋಕಸಭಾ ಚುನಾವಣೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಬಹಳಷ್ಟಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯದ ನಾಯಕರು ಬಹು ಸಂಖ್ಯಾತ ಹಿಂದೂಗಳ ಮನಸ್ಸಿಗೆ ನೋವು ಉಂಟು ಮಾಡುವ ನಿರ್ಧಾರ ಕೈಗೊಳ್ಳಬಾರದು. ಬಿ.ಜೆ.ಪಿ.ನಾಯಕರ ಸ್ವಯಂಕೃತ ಅಪರಾಧ ಮತ್ತು ವೀರಶೈವ ಸಮುದಾಯದ ಮುಖಂಡರನ್ನು ನಿರ್ಲಕ್ಷ್ಯ ಮಾಡಿದ ಕಾರಣ ಕಾಂಗ್ರೆಸ್ಸಿಗೆ ವೀರಶೈವ ಲಿಂಗಾಯತ ಸಮುದಾಯದ ಜನತೆ ಹೆಚ್ಚು ಬೆಂಬಲಿಸಿ ಪಕ್ಷಕ್ಕೆ ಜಯ ತಂದು ಕೊಟ್ಟಿದ್ದಾರೆಂಬುದನ್ನು ಮರೆಯಬಾರದು. ರಾಜ್ಯದಲ್ಲಿ ಮಾಡಬೇಕಾದ ಬೇಕಾದಷ್ಟು ಕೆಲಸಗಳಿರುವಾಗ ಅದನ್ನು ಬಿಟ್ಟು ಧರ್ಮ ಸಂಸ್ಕøತಿ ಆಚರಣೆಗೆ ವ್ಯತಿರಿಕ್ತವಾದ ಕಾನೂನು ತಂದು ಗೊಂದಲ ಮಾಡಿಕೊಳ್ಳಬೇಡಿರಿ. ಮತಾಂತರ ನಿಷೇಧ ಕಾನೂನು ರದ್ದುಪಡಿಸುವುದರಿಂದ ಹಲವಾರು ಸಮಸ್ಯೆಗಳು ತಲೆದೋರುತ್ತವೆ. ಯಾರನ್ನೋ ಮೆಚ್ಚಿಸಲು ತುಷ್ಟೀಕರಿಸುವುದರಿಂದ ಪಕ್ಷಕ್ಕೆ ಧಕ್ಕೆಯಾಗುತ್ತದೆ ವಿನಾ ಅದರಿಂದ ಒಳ್ಳೆಯದಾಗದು. ಹಲವಾರು ಆಶೆ ಆಮಿಷವೊಡ್ಡಿ ಮತಾಂತರ ಮಾಡುವ ಕೆಲಸ ಯಾವ ಭಯ ಭೀತಿಯಿಲ್ಲದೇ ನಡೆಯುವದೆಂಬ ಆತಂಕ ಎಲ್ಲರಿಗೂ ಇದೆ. ಸಂಘರ್ಷ ಉಂಟು ಮಾಡುವ ಕಾರ್ಯ ಕೈಗೊಳ್ಳದೇ ಜನಪರವಾದ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನಡೆಸಲು ಮುಂದಾಗಬೇಕೆಂದು ಸರಕಾರಕ್ಕೆ ಕಳಕಳಿಯ ಕರೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ನೀಡಿದರು.
ಸಮಾರಂಭದಲ್ಲಿ ಕಟಕೋಳ-ಎಂ.ಚಂದರಗಿ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಶ್ರೀ ಗುರು ಮುಪ್ಪಯ್ಯನವರ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.    ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು, ಆಲಮೇಲ ಹಿರೇಮಠದ ಸಂಗನಬಸವ ಶಿವಾಚಾರ್ಯರು ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ಶ್ರೀ ಬನಶಂಕರಿ ದೇವಸ್ಥಾನದಿಂದ ಶ್ರೀ ಮಠದವರೆಗೆ ಪೂರ್ಣಕುಂಭ ವಾದ್ಯಮೇಳದೊಂದಿಗೆ ಶ್ರೀ ರಂಭಾಪುರಿ ಜಗದ್ಗುರುಗಳವರ ಸಾರೋಟೋತ್ಸವ ಜರುಗಿತು.

Related posts: