RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಅಧ್ಯಕ್ಷನಿಲ್ಲದ ನಗರಸಭೆಯಲ್ಲಿ ಅಧಿಕಾರಿಗಳ ಅಂದಾ ದರ್ಭಾರ

ಗೋಕಾಕ:ಅಧ್ಯಕ್ಷನಿಲ್ಲದ ನಗರಸಭೆಯಲ್ಲಿ ಅಧಿಕಾರಿಗಳ ಅಂದಾ ದರ್ಭಾರ 

ಅಧ್ಯಕ್ಷನಿಲ್ಲದ ನಗರಸಭೆಯಲ್ಲಿ ಅಧಿಕಾರಿಗಳ ಅಂದಾ ದರ್ಭಾರ

ಗೋಕಾಕ ಅ 7 : ಕಳೆದ ಎರೆಡು ತಿಂಗಳನಿಂದ ನಗರಸಭೆಗೆ ಅಧ್ಯಕ್ಷ ಇಲ್ಲದೆ ಅಧಿಕಾರಗಳದ್ದೆ ಪಾರುಪತ್ಯ ನರಗಸಭೆಯಲ್ಲಿ ನಡೆಯುತ್ತಿದೆ. ಮೊದಲ ಅವದಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವದಿ ಮುಗಿದು ತಿಂಗಳುಗಳೆ ಕಳೆದರೂ ಸಹ ಸರಕಾರ ಮುಂದಿನ ಅವಧಿಗೆ ಮಿಸಲಾತಿಯನ್ನು ಪ್ರಕಟಿಸಿದ ಕಾರಣ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ನೆನೆಗುದಿಗೆ ಬಿದ್ದಿದೆ. ನಗರಸಭೆಯಲ್ಲಿ ಹಿರಿಯ ಸದಸ್ಯರು ಇದ್ದರು ಸಹ ಅವರು ನಗರಸಭೆ ಅಧಿಕಾರಿಗಳು ಮೇಲೆ ಕಣ್ಣು ಇಡದೆ ಮುಂದೆ ತಾವು ಅಧ್ಯಕ್ಷ ಆಗುವ ಆಸೆಯಿಂದ ಮೀಸಲಾತಿಯನ್ನು ತರಬೇಕು ಎಂಬ ಕಾರಣಕ್ಕೆ ಶಾಸಕರ ದುಂಬಾಲು ಬಿದಿದ್ದಾರೆ. ಆದರೆ ಬಿಜೆಪಿ ಸರಕಾರ ಅಧಿಕಾರದಲ್ಲಿ ಇಲ್ಲದ ಕಾರಣ ಶಾಸಕ ರಮೇಶ ಜಾರಕಿಹೊಳಿ ಅವರು ನಗರಸಭೆ ಮೀಸಲಾತಿಯ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ ಇದರ ಪರಿಣಾಮ ಈ ಪ್ರಕ್ರೀಯೆ ಮತ್ತಷ್ಟು ವಿಳಂಬವಾಗಿತ್ತಿದೆ ಎಂದು ಬಣ್ಣಿಸಲಾಗುತ್ತಿದೆ. ಇದು ಅಧ್ಯಕ್ಷ, ಉಪಾಧ್ಯಕ್ಷರ ಕಥೆಯಾದರೆ ಇಲ್ಲಿಯ ಅಧಿಕಾರಿಗಳು ಸಹ ಕಥೆ ಬೇರೆ ಹೇಳಬೇಕಾಗಿಲ್ಲ.
ವಿಧಾನಸಭೆ ಚುನಾವಣೆ ಸಂಧರ್ಭದಲ್ಲಿ ಪೌರಾಯುಕ್ತರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ದೂರದ ಊರಿನಿಂದ ಜಹೀರಅಬ್ಬಾಸ ಎಂಬುವವರು ನಗರಸಭೆಗೆ ಪೌರಾಯುಕ್ತರಾಗಿ ವರ್ಗಾವಣೆಗೊಂಡು ಗೋಕಾಕಕ್ಕೆ ಬಂದಿದ್ದಾರೆ. ಅವರು ಬಂದಾಗಿನಿಂದ ಅನ್ನುವಕಿಂತ ಮೊದಲಿನಿಂದಲೂ ಇಲ್ಲಿ ಅಧಿಕಾರಿಗಳು ದರ್ಭಾರ ಜೋರಾಗಿ ನಡೆದಿದೆ. ಇಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಅಧಿಕಾರಿಗೆ ಬದ್ಧತೆ ಇಲ್ಲಾ , ಎಲ್ಲಾ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿರುವ ಪರಿಣಾಮ ಸಾರ್ವಜನಿಕರು ನಗರಸಭೆ ಹಿಡಿಶಾಪ ಹಾಕುತ್ತಿದ್ದಾರೆ.
ಪೌರಾಯುಕ್ತರಾಗಲಿ, ಎಇಇ, ಲೆಕ್ಕಾಧಿಕಾರಿಯಾಗಲಿ, ಅಭಿಯಂತರು ಸೇರಿದಂತೆ ಎಲ್ಲಾ ಸ್ಥರದ ಅಧಿಕಾರಿಗಳು ನಗರಸಭೆಯನ್ನು ತನ್ನ ಮನಸ್ಸಿಗೆ ತಿಳಿದಂತೆ ಅದನ್ನು ಬಳಸಿಕೊಳ್ಳುತ್ತಿದ್ದು ನಮಗೆ ಹೇಳುವವರಿಲ್ಲಾ, ಕೇಳುವವರಿಲ್ಲಾ ಎಂಬಂತೆ ವರ್ತಿಸುತ್ತಿರುವುದು ಸಾರ್ವಜನಿಕರಿಗೆ ತಲೆನೊವಾಗಿ ಪರಿಣಮಿಸಿದೆ.
ಸಚಿವರ ಆದೇಶಕ್ಕೂ ಕಿಮ್ಮತಿಲ್ಲಾ : ಕಳೆದ ತಿಂಗಳು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ನಗರಸಭೆ ಅಧಿಕಾರಿಗಳಿಗೆ ಹಲವು ಸೂಚನೆಯನ್ನು ನೀಡಿ ನಗರವನ್ನು ಅಭಿವೃದ್ಧಿ ಪಡೆಸುವಂತೆ ಆದೇಶಿಸಿದರು. ಇದನ್ನು ಸಹ ಅವರು ಗಂಭೀರವಾಗಿ ತಗೆದುಕೊಳ್ಳದೆ ಸಚಿವರ ಮಾತನ್ನು ಸಹ ಗಾಳಿಗೆ ತೂರಿದ್ದಾರೆ. ಉದಾಹರಣೆಗೆ ನಗರದ ನಿಯಾಜ ಹೋಟೆಲ್ ಮುಂದಿನ ಹಳ್ಳದಲ್ಲಿಯ ಪೀಕಜಾಲಿ ಕಂಟಿಗಳನ್ನು ಮತ್ತು ಬಾಂಬೆಚಾಳ ಎಚ್.ಡಿ ಮುಲ್ಲಾ ಅವರ ಮನೆಯ ಮುಂದಿರುವ ಹಳ್ಳದಲ್ಲಿ ಎದ್ದಿರುವ ಕಂಟಿಗಳನ್ನು ತೆರವುಗೊಳಿಸಿ ನಗರದ ನಾಕಾ ನಂ 1 ರಿಂದ ಡಿವಾಯ್ಎಸ್.ಪಿ ಆಫೀಸ್ ಕೈಗೊಂಡಿರುವ ರಸ್ತೆ ಪಕ್ಷದ ಗಟಾರು ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ ಅದನ್ನು ಸರಿಪಡಿಸುವಂತೆ ಸೂಚಿಸಿ ಸರಿಸುಮಾರು ಒಂದು ತಿಂಗಳು ಗತಿಸಿದರು ಸಹ ನಗರಸಭೆ ಅಧಿಕಾರಿಗಳು ಬಹು ಮುಖ್ಯವಾಗಿ ಪೌರಾಯುಕ್ತರು ಇದರ ಬಗ್ಗೆ ಯಾವುದೇ ತಲೆಕೆಡೆಸಿಕೊಂಡಿಲ್ಲಾ . ಸಚಿವರು ಹೇಳಿದ ಕಾರ್ಯಗಳು ಹಾಗೆ ಉಳಿದಿವೆ. ಕಳೆದ ಎರೆಡುವರ್ಷಗಳ ಹಿಂದೆ ಪ್ರವಾಹ ಸಂದರ್ಭದಲ್ಲಿ ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಗಣಾಚಾರಿ ಇತನು ಪ್ರವಾಹದಲ್ಲಿ ಮನೆ ಬಿದ್ದಿರುವವರ ಹೆಸರಿಗೆ ಬಿಲ್ ಹಾಕದೆ ಬೇರೆಯವರ ಖಾತೆಗೆ ಹಣ ಜಮಾ ಮಾಡಿದ್ದರು ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರಗತಿ ಪರಿಶೀಲನ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಅದನ್ನು ಸರಿಪಡಿಸುವಂತೆ ಸೂಚಿಸಿ ಗಣಾಚಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತಡೆದುಕೊಂಡಿದ್ದರು ಸಹ ಈ ಅಧಿಕಾರಿ ಸುಧಾರಿಸಿಕೊಳ್ಳದೆ ತಮ್ಮ ಬೇಜವಾಬ್ದಾರಿಯನ್ನು ತೋರುತ್ತಿದ್ದಾನೆ. ನಗರದಲ್ಲಿ ನಗರಸಭೆ ವತಿಯಿಂದ ಹೊಸದಾಗಿ ಕಟ್ಟಿರುವ ವಾಣಿಜ್ಯ ಮಳಿಗೆಗಳನ್ನು ಸಾರ್ವಜನಿಕರಿಗೆ ಬಾಡಿಗೆ ನೀಡುವುವಂತೆ ಸಚಿವರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಸಹ ಇನ್ನುವರೆಗೆ ಯಾರೊಬ್ಬರಿಗೂ ಹೊಸ ವಾಣಿಜ್ಯ ಮಳಗಿಗಳು ವ್ಯಾಪಾರಕ್ಕೆ ನೀಡದಿರುವುದು ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಮೊಂಡತನವನ್ನು ಎತ್ತಿ ತೋರಿಸುತ್ತಿದೆ. ವಾಣಿಜ್ಯ ಮಳಗಿಗಳು ಉದ್ಘಾಟನೆಗೊಂಡು 6 ತಿಂಗಳಾದರೂ ಸಹ ಅವು ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಸಾರ್ವಜನಿಕರಿಗೆ ಕೊಡುವುದನ್ನು ಬಿಟ್ಟು ನಗರಸಭೆ ಹಿರಿಯ ಸದಸ್ಯರ ನನಗೆ ಬೇಕು ನಿನ್ನಗೆ ಬೇಕು ಎಂದು ಬಡಿದಾಡುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹೀಗೆ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು ಸಹ ಅವರ ಯಾವ ಮಾತಿಗೆ ಕಿಮ್ಮತ್ತು ಕೊಡದ ಅಧಿಕಾರಿಗಳು ಗೋಕಾಕ ನಗರಸಭೆಯಲ್ಲಿ ಬೀಡು ಬಿಟ್ಟಿದ್ದಾರೆ. ಹಿಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಕಛೇರಿಯ ಮುಂದೆ ಕಾಯಿಪಲ್ಲೆ ಮಾರಟದಿಂದ ಟ್ರಾಫಿಕ್ ಆದರು ಕ್ಯಾರೆ ಎನ್ನದ ಅಧಿಕಾರಿಗಳು : ನಗರಸಭೆ ವತಿಯಿಂದಲೆ ಕಾಯಿಪಲ್ಲೆ ಮಾರಾಈ ಮಾಡಲು ಕೆಲವು ಅಂಗಡಿಗಳನ್ನು ( ಕಟ್ಟೆಗಳನ್ನು) ನಿರ್ಮಿಸಿ, ಕೆಲವು ನಿರ್ದಿಷ್ಟ ಸ್ಥಳಗಳನ್ನು ನಗರಸಭೆಯಿಂದ ಗುರುತಿಸಿದರು ಸಹ ನಗರದಲ್ಲಿ ಮನಸ್ಸಿಗೆ ಬಂದ ಕಡೆ ಕಾಯಿಪಲ್ಲೆ ಮಾರಟ ಜೋರಾಗಿ ನಡೆದಿರುವ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ವಾಹನ ಸವಾರರು ಮತ್ತು ಪಾದಾಚಾರಿಗಳು ಪರದಾಡುವ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ. ಇದನ್ನು ಸರಿಪಡಿಸಬೇಕಾದ ನಗರಸಭೆ ಅಧಿಕಾರಿಗಳು ಇದು ನಮಗೆ ಸಂಬಂಧವಿಲ್ಲ ಎಂಬಂತೆ ವರ್ತಿ‌ಸುತ್ತಿದ್ದಾರೆ. ಬಹುಮುಖ್ಯವಾಗಿ ನಗರಸಭೆ ಕಛೇರಿಯ ಮುಂದೆ ಸಂಗೋಳ್ಳಿ ರಾಯಣ್ಣ ಅವರ ವೃತ್ತದಲ್ಲಿ ರಾಯಣ್ಣ ಅವರ ವೃತವನ್ನು ಕಾಯಿಪಲ್ಲೆ ಮಾರಟ ಮಾಡುವವರು ಮತ್ತು ಮಾಲೆ ಮಾರುವವರು ಸುತ್ತುವರೆದು ‌ವಾಹನ ಸಂಚಾರಕ್ಕೆ ಅಡತಡೆ ಮಾಡಿದರು ಸಹ ನಗರಸಭೆ ಅಧಿಕಾರಿಗಳು ಅದನ್ನು ನೋಡಿಯು ನೋಡದಂತೆ ಇರುವ ಪರಿಣಾಮ ನಗರದಲ್ಲಿ ಎಲ್ಲಿ ಬೇಕೆಂದಲ್ಲಿ ಜನರು ಕಾಯಿಪಲ್ಲೆ ಮಾರಾಟ ಮಾಡಿ ಜನದಟ್ಟನೆ ಮಾಡುತ್ತಿದ್ದಾರೆ. ಮೊದಲೇ ರಾಯಣ್ಣ ಅವರ ವೃತ್ತದಲ್ಲಿ ಕಾರುಗಳನ್ನು ಮನ‌ಸ್ಸಿಗೆ ಬಂದಂತೆ ನಿಲ್ಲಿಸಿ ಟ್ರಾಫಿಕ್ ಮಾಡಿರುತ್ತಾರೆ. ವಾಹನ ಸವಾರರು ಅದನ್ನು ತಪ್ಪಿಸಿ ಬರುವಷ್ಟರಲ್ಲಿ ಈ ಕಾಯಿಪಲ್ಲೆ ಮಾರುವವರು ಕಾಟ ಮತ್ತೆ ವಾಹನ ಸವಾರರಿಗೆ ಕಾದಿರುತ್ತದೆ. ಈ ವಿಷಯವನ್ನು ನಗರಸಭೆ ಅಧಿಕಾರಿಗಳು ಗಂಭೀರವಾಗಿ ತಗೆದುಕೊಂಡು ನಗರದಲ್ಲಿ ಎಲ್ಲಿ ಬೇಕಾದಲ್ಲಿ ಕುಳಿತುಕೊಂಡು ಕಾಯಿಪಲ್ಲೆ ಸೇರಿದಂತೆ ಇತರ ದಿನಸಿ ವಸ್ತುಗಳನ್ನು ಮಾರಾಟ ಮಾಡದಂತೆ ನಿಗಾವಹಿಸಿ ನಗರಸಭೆ ವತಿಯಿಂದ ಸೂಚಿಸಿದ ಸ್ಥಳಗಳಲ್ಲಿ ಮಾತ್ರ ಮಾರಾಟ ಮಾಡುವಂತೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರು ಪಡುತ್ತಿರುವ ಗೋಳಿನಿಂದ ಪಾರು ಮಾಡಬೇಕಾದ ಬಹುದೊಡ್ಡ ಜವಾಬ್ದಾರಿ ನಗರಸಭೆ ಅಧಿಕಾರಿಗಳ ಮೇಲಿದೆ.
ಮನೆ ಪಾಳೆ ಮತ್ತು ಇತರೆ ಶುಲ್ಕ ಪಾವತಿ ಮಾಡಿದ ರೆಕಾರ್ಡ್ ಇಲ್ಲಾ : ನಗರಸಭೆಯಲ್ಲಿ ಸಾರ್ವಜನಿಕರು ಮನೆ ಪಾಳೆ, ನೀರಿನ ಪಾಳೆ ಮತ್ತು ಖುಲ್ಲಾ ಜಾಗೆಯ ಪಾಳೆಯನ್ನು ಪ್ರತಿವರ್ಷ ತುಂಬಿರುತ್ತಾರೆ. ಹೀಗೆ ನಗರಸಭೆಗೆ ಶುಲ್ಕ ತುಂಬಿದರವರು ಮತ್ತೆ ಮುಂದಿನ ವರ್ಷ ಪಾಳೆ ತುಂಬಲು ಬಂದರೆ ನಗರಸಭೆ ಅಧಿಕಾರಗಳ ಹತ್ತಿರ ಅವರ ರೆಕಾರ್ಡ್ (ದಾಖಲೆ) ಇರುವುದಿಲ್ಲ ಅಧಿಕಾರಿಗಳಿಗೆ ಕೇಳಿದರೆ ನಮ್ಮ ಹತ್ತಿರ ದಾಖಲೆಗಳು ಇಲ್ಲ ಹೊದ ವರ್ಷ ನೀವು ಶುಲ್ಕ ಪಾವತಿಸಿದ ದಾಖಲೆ ತನ್ನಿ ಎಂದು ಕೇಳಿ ತಮ್ಮ ಬೇಜವಾಬ್ದಾರಿಯನ್ನು ತೋರುತ್ತಾರೆ. ಪಾಪ ಶುಲ್ಕ ಪಾವತಿಸಲು ಬಂದ ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಯಲ್ಲಿ ಹುಡುಕಾಡಿ ತಂದು ಶುಲ್ಕ ತುಂಬಿ ಹೋಗುತ್ತಿರುವ ದೃಶ್ಯಗಳು ನಗರಸಭೆಯಲ್ಲಿ ಕಾಣಸಿಗುತ್ತಿವೆ. ಸಾರ್ವಜನಿಕರ ದಾಖಲೆಗಳು ಇಲ್ಲಿ ಅಧಿಕಾರಗಳ ಬಳಿ ಇರದೆ ಎಜೆಂಟರ ಬಳಿ ಸಿಗುತ್ತವೆ ಅಷ್ಟೊಂದು ಪ್ರಮಾಣದಲ್ಲಿ ನಗರಸಭೆಯಲ್ಲಿ ಎಜೆಂಟರ ದರ್ಬಾರ್ ನಡೆದಿದೆ.
ಒಟ್ಟಾರೆಯಾಗಿ ಗೋಕಾಕ ನಗರಸಭೆಗೆ ಅಧ್ಯಕ್ಷ ಉಪಾಧ್ಯಕ್ಷ ಇದ್ದರು ಆಯಿತು ಅವರ ಅಧಿಕಾರ ಅವಧಿ ಮುಗಿದರು ಆಯಿತು ಪೌರಾಯುಕ್ತ ಸೇರಿದಂತೆ ಇತರ ಅಧಿಕಾರಿ ವರ್ಗಗಳ ಅಧಿಕಾರಗಳ ತಂಡ ಬೇಜವಾಬ್ದಾರಿಯುತ್ತ ಧೋರಣೆ ತೋರಿ ನಗರಸಭೆಯನ್ನು ಅವಸಾನಿನ ಅಂಚಿಗೆ ತಂದು ನಿಲ್ಲಿಸುತ್ತಿದ್ದಾರೆ. ನಾಮಕಾವಾಸ್ತೆ ಎಂಬಂತೆ ನಗರಸಭೆ ವತಿಯಿಂದ ಒಂದು ಫೇಸ್ಬುಕ್ ಫೇಜ್ ಮಾಡಿಕೊಂಡು ತಾವು ಸಾಚಾಗಳು ಎಂಬಂತೆ ಕೆಲವೊಂದು ಪೋಸ್ಟ್ ಗಳನ್ನು ಹಾಕಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ. ಇವರ ಮೋಸದಾಟವನ್ನು ತಡೆಯಲು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಿ ಗೋಕಾಕ ನಗರಸಭೆಯನ್ನು ಸುಧಾರಿಸಬೇಕಾಗಿದೆ.

Related posts: