RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ದಿವಂಗತ ಸುರೇಶ ಅಂಗಡಿ ಹಾಗೂ ಜಗದೀಶ ಶೆಟ್ಟರ ಒಂದೇ ನಾಣ್ಯದ ಎರಡು ಮುಖಗಳು : ಶಾಸಕ ರಮೇಶ ಅಭಿಮತ

ಗೋಕಾಕ:ದಿವಂಗತ ಸುರೇಶ ಅಂಗಡಿ ಹಾಗೂ ಜಗದೀಶ ಶೆಟ್ಟರ ಒಂದೇ ನಾಣ್ಯದ ಎರಡು ಮುಖಗಳು : ಶಾಸಕ ರಮೇಶ ಅಭಿಮತ 

ದಿವಂಗತ ಸುರೇಶ ಅಂಗಡಿ ಹಾಗೂ ಜಗದೀಶ ಶೆಟ್ಟರ ಒಂದೇ ನಾಣ್ಯದ ಎರಡು ಮುಖಗಳು : ಶಾಸಕ ರಮೇಶ ಅಭಿಮತ
ಗೋಕಾಕ ಏ 7 : ದಿವಂಗತ ಸುರೇಶ ಅಂಗಡಿ ಹಾಗೂ ಜಗದೀಶ ಶೆಟ್ಟರ ಒಂದೇ ನಾಣ್ಯದ ಎರಡು ಮುಖಗಳಂತಿದ್ದು ಬೆಳಗಾವಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ರವಿವಾರದಂದು ನಗರದಲ್ಲಿ ಆಯೋಜಿಸಿದ್ಧ ಗೋಕಾಕ ಮತಕ್ಷೇತ್ರದ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಸುರೇಶ ಅಂಗಡಿ ಹಾಗೂ ಜಗದೀಶ ಶೆಟ್ಟರ ತಮ್ಮ ಅಧಿಕಾರವಧಿಯಲ್ಲಿ ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಜಿಲ್ಲೆಗೆ ವಿಶೇಷ ಕೊಡುಗೆ ನೀಡಿದ್ದಾರೆ. ಕೆಲವರು ಬ್ಯಾಂಕ ಹಾಗೂ ಸೋಸೈಟಿಗಳ ದುರ್ಬಳಕೆಯಿಂದ ಹಣಬಲ ತೋರಿಸುತ್ತಿದ್ದು ಮುಂದಿನ ದಿನಗಳಲ್ಲಿ ಸಿಬಿಐ ತನಿಖೆಯ ಮೂಲಕ ವಾಸ್ತವಿಕತೆಯನ್ನು ಜನರ ಮುಂದಿಡಲು ಒತ್ತಾಯಿಸುವದಾಗಿ ತಿಳಿಸಿದರು.
ಭಾರತೀಯ ಜನತಾ ಪಕ್ಷ ನನಗೆ ಎಲ್ಲ ಸ್ಥಾನಮಾನ ನೀಡಿ ಗೋಕಾಕ ಮತಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲು ಸಹಕಾರ ನೀಡಿದೆ. ಕೇಂದ್ರದ ನಾಯಕರ ನನ್ನ ಮೇಲೆ ಹೆಚ್ಚಿನ ವಿಶ್ವಾಸವಿಟ್ಟಿದ್ದು ಅದನ್ನು ಉಳಿಸಲು ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಅತ್ಯಧಿಕ ಅಂತರದಲ್ಲಿ ಆರಿಸಬೇಕು. ಅವರ ಜಯದಿಂದ ನನಗೆ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರಿಗೂ ಹೆಚ್ಚಿನ ಶಕ್ತಿ ದೊರೆತು ಕ್ಷೇತ್ರದ ಮತ್ತು ಜಿಲ್ಲೆಯ ಅಭಿವೃದ್ಧಿ ಕಾರ್ಯ ಮಾಡಲು ಸಹಕಾರಿಯಾಗುತ್ತದೆ. ನಾನು ಜಾತಿ ರಾಜಕಾರಣ ಮಾಡದೆ ಬಸವತತ್ವದಲ್ಲಿ ವಿಶ್ವಾಸವಿಟ್ಟು ಜನರ ಸೇವೆ ಮಾಡುತ್ತಿದ್ದೇನೆ. ಜನಪ್ರತಿನಿಧಿಗಳಾಗಲು ಎಲ್ಲ ಸಮುದಾಯಗಳ ಆಶೀರ್ವಾಧ ಅತಿಅವಶ್ಯ. ಜಾತಿ ರಾಜಕಾರಣಕ್ಕೆ ಮಹತ್ವ ನೀಡದೆ ಬಲಿಷ್ಠ ಭಾರತ ನಿರ್ಮಾಣಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಜಗದೀಶ ಶೆಟ್ಟರ ಅವರಿಗೆ ತಮ್ಮ ಮತ ನೀಡುವಂತೆ ಕೋರಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಮಾತನಾಡುತ್ತ ಕಾಂಗ್ರೇಸ್‍ನವರು ನಾಟಕೀಯ ಹಿಂದುತ್ವ ತೋರಿಸದೇ ಬಿಜೆಪಿ ಸರಕಾರ ಜಾರಿಗೆ ತಂದ ಮತಾಂತರ ಕಾಯ್ದೆ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತೋರಿಸುವ ಮೂಲಕ ಪ್ರಾಮಾಣಿಕ ಹಿಂದುತ್ವತೋರಿಸುವಂತೆ ಸವಾಲು ಹಾಕಿದರು. ಮೋದಿಯವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿ ಮಾಡುವ 141ಕೋಟಿ ಜನರ ಕನಸು ನನಸು ಮಾಡುವ ಚುನಾವಣೆ ಇದಾಗಿದ್ದು, ಅದನ್ನು ನನಸಾಗಿಸಲು ಅವರ ಪ್ರತಿನಿಧಿಯಾಗಿ ಈ ಚುನಾವಣೆಯಲ್ಲಿ ಸ್ಫರ್ಧಿಸಿದ್ದೇನೆ. ಸುಮಾರು 30ವರ್ಷಗಳಿಂದ ಈ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗಾಗಿ ಕಾರ್ಯನಿರ್ವಹಿಸಿದ್ದೇನೆ. ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ, ಎರಡು ಬಾರಿ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ಸುವರ್ಣಸೌಧ ನಿರ್ಮಾಣ ಕಾರ್ಯದಲ್ಲಿ ಎಲ್ಲ ಶಾಸಕರ ವಿಶ್ವಾಸದೊಂದಿಗೆ ಸ್ಥಳ ನಿಗದಿಯೊಂದಿಗೆ ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ತ್ವರಿತವಾಗಿ ನಿರ್ಮಾಣವಾಗಲು ಶ್ರಮಿಸಿದ್ದೇನೆ. ಪ್ರವಾಹ, ಕೋವಿಡ್ ಸಂದರ್ಭದಲ್ಲೂ ವಿಶೇಷ ಸೇವೆ ಸಲ್ಲಿಸಿದ್ದೇನೆ. ಆಕ್ಸಿಜನ್ ಕೊರತೆಯಾಗದಂತೆ ಜಿಲ್ಲೆಯಲ್ಲಿ ಸರಣಿ ಸಭೆ ನಡೆಸಿ ಮಹಾಮಾರಿಯನ್ನು ಎದುರಿಸಿದ್ದೇನೆ. ವಿರೋಧಿಗಳ ಮಹತ್ವ ನೀಡಬೇಡಿ. ಸುರೇಶ ಅಂಗಡಿಯವರ ಯೋಜನೆಗಳನ್ನು ತಾವುಗಳು ನನಗೆ ಆಶೀರ್ವಧಿಸಿ ಅವುಗಳನ್ನು ಕಾರ್ಯಗತಮಾಡಲು ಅವಕಾಶ ನೀಡುವಂತೆ ವಿನಂತಿಸಿದರು.
ನರೇಂದ್ರ ಮೋದಿಯಂತಹ ಧಿಮಂತ ನಾಯಕನ ಅವಶ್ಯಕತೆ ದೇಶಕ್ಕೆ ಇದೆ. ಜಮ್ಮು ಕಾಶ್ಮೀರದಲ್ಲಿ 370ಕಲಂ ತೆಗೆದು ಹಾಕಿ, ರಾಮ ಮಂದಿರ ನಿರ್ಮಾಣ ಮಾಡಿ ದೇಶದಲ್ಲಿ ಶಾಂತತೆಯನ್ನು ನೆಲೆಸುವಂತೆ ಮಾಡಿದ್ದಾರೆ. ಬರುವ ದಿನಗಳಲ್ಲಿ ಒಂದು ದೇಶ ಒಂದು ಚುನಾವಣೆ ಹಾಗೂ ಎಲ್ಲರಿಗೂ ಒಂದೆ ಕಾನೂನು ಜಾರಿಗೊಳಿಸಿ ಪಿಓಕೆಯನ್ನು ವಶಪಡಿಸಿಕೊಳ್ಳಲು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಿ ಅಖಂಡ ಭಾರತ ನಿರ್ಮಿಸಲು ನಾವೆಲ್ಲ ಕಾರ್ಯಪ್ರವೃತ್ತರಾಗೋಣ ಎಂದರು.
ಮಾಜಿ ಶಾಸಕ, ಚುನಾವಣಾ ಸಂಚಾಲಕ ಸಂಜಯ ಪಾಟೀಲ ಮಾತನಾಡಿ, ಶಾಸಕ ರಮೇಶ ಜಾರಕಿಹೊಳಿ ಮಾತನಾಡುವದನ್ನೇ ಮಾಡಿ ತೋರಿಸುತ್ತಾರೆ. ಈ ಬಾರಿ ಬೆಳಗಾವಿ ಲೋಕಸಭಾ ಅಭ್ಯರ್ಥಿಯನ್ನು 2ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿಕೊಂಡು ಬರುವ ಶಫತ ಮಾಡಿದ್ದಾರೆ. ವಿರೋಧ ಪಕ್ಷದವರು ಚುನಾವಣೆಯನ್ನು ಹಣದಿಂದ ಮಾಡುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ 18 ಗಂಟೆಗಳ ಕಾಲ ಕಾರ್ಯನಿರ್ವಹಿಸಿ ಪ್ರೀತಿಯ ರಾಜಕಾರವನ್ನು ಮಾಡುತ್ತಿದ್ದಾರೆ. ನಮ್ಮ ವಿರೋಧ ಅಭ್ಯರ್ಥಿ ಬೆಂಗಳೂರಿನಿಂದ ಹಣ ತರುತ್ತಾರೆ. ಬೆಂಗಳೂರಿನಲ್ಲಿ ದೊಡ್ಡ ನಾಯಕರಿದ್ದಾರೆ ಇವರ ಮೇಲಿನ ಪ್ರೀತಿಗೆ ಅವರು ಹಣವನ್ನು ನೀಡುತ್ತಿದ್ದು ಇವರು ಚುನಾವಣೆಯಲ್ಲಿ ಹಣ ಹಂಚುತ್ತಾರೆ ಇದು ಅವರ ಸಂಸ್ಕøತಿ. ದೇಶದ ಅಭಿವೃದ್ಧಿ ಬಿಜೆಪಿ ಸಂಸ್ಕøತಿ. ಬಿಜೆಪಿ ಅಭ್ಯರ್ಥಿಗೆ ತಮ್ಮ ಮತವನ್ನು ನೀಡುವ ಮೂಲಕ ಮೂರನೇ ಬಾರಿಗೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡೋಣ ಎಂದರು.
ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಮಾತನಾಡಿ, ನರೇಂದ್ರ ಮೋದಿಯವರ ದಕ್ಷ ಆಡಳಿತದಿಂದ ಜಗತ್ತಿನ ರಾಜಕಾರಣ ನಿರ್ಧರಿಸುವ ಶಕ್ತಿ ದೊರೆತು ಮೋದಿಯವರು ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ. ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿ ಬಾಂಬ್ ಸಂಸ್ಕøತಿ ಮರೆಯಾಗಿ ಜನತೆ ನೆಮ್ಮದಿಯಾಗಿ ಬದುಕುತ್ತಿದ್ದಾರೆ. ನಿಮ್ಮ ಒಂದು ಮತ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಿ ಇನ್ನೂ ದೇಶವನ್ನು ಬಲಿಷ್ಠಗೊಳಿಸಿ ವಿಶ್ವಗುರುವನ್ನಾಗಿಸುತ್ತದೆ. ತಮ್ಮ ಮತವನ್ನು ಬಿಜೆಪಿ ಅಭ್ಯರ್ಥಿಗೆ ನೀಡುವಂತೆ ಕೋರಿದರು.
ವೇದಿಕೆಯ ಮೇಲೆ ಸಂಸದೆ ಮಂಗಲಾ ಅಂಗಡಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನೀಲ ಬೆನಕೆ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಮಾಜಿ ಶಾಸಕ ಎಮ್ ಎಲ್ ಮುತ್ತೆನ್ನವರ, ಗೋಕಾಕ ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಬಿಜೆಪಿ ಮುಖಂಡರುಗಳಾದ ಎಮ್ ಬಿ ಜಿರಲಿ, ತುಬಾಕಿ, ಲಕ್ಷ್ಮಣ ತಪಸಿ, ಕೆ ವಿ ಪಾಟೀಲ, ಶಾಮಾನಂದ ಪೂಜೇರಿ, ಮುತ್ತೆಪ್ಪ ಮನ್ನಾಪೂರ, ಶಕೀಲ ಧಾರವಾಡಕರ, ಯುವರಾಜ ಜಾಧವ, ಶಿವಾನಂದ ಪಾಟೀಲ, ಪುಂಡಲೀಕ ವಣ್ಣೂರ ಇದ್ದರು.
ಶ್ರೀಮತಿ ರಾಜೇಶ್ವರಿ ಒಡೆಯರ ಒಡೆಯರ ಸ್ವಾಗತಿಸಿದರು. ಬಾಳೇಶ ಗಿಡ್ಡನವರ ವಂದಿಸಿದರು.

Related posts: