RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಯಾರು ಹೆದರುವ ಅವಶ್ಯಕತೆ ಇಲ್ಲ, ಜಿಲ್ಲಾಡಳಿತ ತಮ್ಮ ಜೊತೆ ಇದೆ : ನಿರಾಶ್ರಿತರಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

ಗೋಕಾಕ:ಯಾರು ಹೆದರುವ ಅವಶ್ಯಕತೆ ಇಲ್ಲ, ಜಿಲ್ಲಾಡಳಿತ ತಮ್ಮ ಜೊತೆ ಇದೆ : ನಿರಾಶ್ರಿತರಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ 

ಯಾರು ಹೆದರುವ ಅವಶ್ಯಕತೆ ಇಲ್ಲ, ಜಿಲ್ಲಾಡಳಿತ ತಮ್ಮ ಜೊತೆ ಇದೆ : ನಿರಾಶ್ರಿತರಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

ಗೋಕಾಕ ಜು 28 : ಯಾರು ಹೆದರುವ ಅವಶ್ಯಕತೆ ಇಲ್ಲ, ಜಿಲ್ಲಾಡಳಿತ ತಮ್ಮ ಜೊತೆ ಇದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರವಾಹ ಪೀಡಿತ ಜನರಿಗೆ ಧೈರ್ಯ ತುಂಬಿದರು.

ರವಿವಾರದಂದು ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ತಾಲೂಕು ಆಡಳಿತ ವತಿಯಿಂದ ತೆರೆಯಲಾದ ನಿರಾಶ್ರಿತರ ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿ ಅಲ್ಲಿ ಆಶ್ರಯ ಪಡೆದ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೃಷ್ಣಾ ನದಿ, ಘಟಪ್ರಭಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಇನ್ನೆರಡು ದಿನ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದ್ದು, ಮುಂದೆ ಹಂತ ಹಂತವಾಗಿ ಪ್ರವಾಹ ಕಡಿಮೆಯಾಗಲಿದೆ. ನಿರಾಶ್ರಿತರು ಕಾಳಜಿ ಕೇಂದ್ರದಲ್ಲಿದೆ ಇದು ತಾಲೂಕು ಆಡಳಿತಕ್ಕೆ ಸಹಕಾರ ನೀಡಬೇಕು. ತಹಶೀಲ್ದಾರಿಗೆ , ಪೊಲೀಸ ಇಲಾಖೆಯ ಅಧಿಕಾರಿಗಳಿಗೆ, ನಗರಸಭೆ ಅಧಿಕಾರಿಗಳಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಎಲ್ಲರಿಗೂ ಗುಣಮಟ್ಟದ ಆಹಾರ, ಹೊದಿಕೆ, ದಿನಬಳಕೆಯ ವಸ್ತುಗಳನ್ನು ವಿತರಿಸಲು ಸೂಚಿಸಲಾಗಿದೆ. ಇಲ್ಲಿ ಹೆಸರು ನೋಂದಾಯಿಸಿದವರು ಪ್ರವಾಹ ಕಡಿಮೆ ಆಗುವವರೆಗೆ ಇಲ್ಲಿಯೇ ಇರಬೇಕು. ಯಾವುದೇ ಕಾರಣಕ್ಕೂ ಕಾಳಜಿ ಕೇಂದ್ರ ಬಿಟ್ಟು ಹೋಗಬಾರದು ಎಂದು ಹೇಳಿದರು.

ಪ್ರವಾಹ ಪೀಡಿತರಿಗೆ ಹಂತ ಹಂತವಾಗಿ ಪರಿಹಾರ ವಿತರಣೆ : ಪ್ರವಾಹ ಪೀಡಿತರಿಗೆ ಹಂತ,ಹಂತವಾಗಿ ಸರಕಾರದಿಂದ ಸೌಲಭ್ಯಗಳನ್ನು ಕಲ್ಪಿ‌ಸಲಾಗುವುದು. ಜಿಲ್ಲಾಡಳಿತದ ಹತ್ತಿರ ಪ್ರವಾಹ ಪರಿಸ್ಥಿತಿ ನಿರ್ವಹಿಸಲು ಹಣದ ಕೊರತೆ ಇಲ್ಲಾ. ಆದರೆ ಆದ್ಯತೆ ಮೇರೆಗೆ ನಾವು ಕ್ರಮ ಕೇಗೊಳ್ಳುತ್ತೇವೆ ಎಂದ ಡಿಸಿ ಮೊಹಮ್ಮದ್ ರೋಷನ್ ಪ್ರವಾಹ ಪೀಡಿತ ಜನರ ಮತ್ತು ಜಾನುವಾರುಗಳ ಜೀವ ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಅದನ್ನು ತಾಲೂಕು ಆಡಳಿತ ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತಿದೆ. ಅವರಿಗೆ ಅರಿವೆ, ಹೊದಿಕೆ ಮತ್ತು ದಿನಬಳಕೆಯ ವಸ್ತಗಳನ್ನು ನೀಡಲು ಈಗಾಗಲೇ ಪ್ರತಿಯೊಬ್ಬರಿಗೆ ತಲಾ 5 ಸಾವಿರ ರೂಪಾಯಿ ಬಿಡುಗಡೆಯಾಗಿದ್ದು, ಶಾಸಕರು ಅದಕ್ಕೆ ಚಾಲನೆಯನ್ನು ನೀಡಿದ್ದಾರೆ. ಪ್ರವಾಹ ಕಡಿಮೆ ಆದಮೇಲೆ ಕಚ್ಚಾ ಮತ್ತು ಪಕ್ಕಾ ಮನೆಗಳ ಸರ್ವೆಮಾಡಿ ಅವುಗಳಿಗೆ ಪರಿಹಾರ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಪ್ರವಾಹ ಪೀಡಿತ ಜನರ ಶಾಶ್ವತ ಪುನರ್ವಸತಿಗೆ ಕ್ರಮ : ಗೋಕಾಕ ನಗರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಸರಕಾರದಿಂದ ಸೂಕ್ತ ಕ್ರಮಕೈಗೊಳ್ಳಲಾಗುವುದು. ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜೊತೆ, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ದೊರಕಿಸಲಾಗುವುದು ಎಂದ ಅವರು ಈಗಷ್ಟೇ ಬೆಳಗಾವಿ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದೇನೆ ಮುಂದೆ ಹಂತ,ಹಂತವಾಗಿ ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಮೋಹನ ಭಸ್ಮೆ, ಜಿಪಂ ಅಧಿಕಾರಿ ಬಸವರಾಜ ಹೆಗ್ಗನಾಯಿಕ, ಪೌರಾಯುಕ್ತ ರಮೇಶ ಜಾಧವ ಇದ್ದರು.

 

Related posts: