ಮೂಡಲಗಿ :ಸಾರ್ವಜನಿಕರಲ್ಲಿ ಗೊಂದಲವನ್ನುಂಟು ಮಾಡುವುದೇ ವಿರೋಧಿಗಳ ಕಾಯಕ : ಶಾಸಕ ಬಾಲಚಂದ್ರ ವ್ಯಂಗ್ಯ
ಸಾರ್ವಜನಿಕರಲ್ಲಿ ಗೊಂದಲವನ್ನುಂಟು ಮಾಡುವುದೇ ವಿರೋಧಿಗಳ ಕಾಯಕ : ಶಾಸಕ ಬಾಲಚಂದ್ರ ವ್ಯಂಗ್ಯ
ಮೂಡಲಗಿ ಅ 23: ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕು ಇದೆ ಅಂತಾ ಏನೆಲ್ಲಾ ಮಾತನಾಡಬೇಡಿ. ಏನೆಲ್ಲ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಿದ್ದೇನೆಂದು ಇಡಿ ಕ್ಷೇತ್ರದ ಜನರಿಗೆ ಗೊತ್ತಿದೆ. ಅಭಿವೃದ್ಧಿ ಒಂದೇ ನಮ್ಮ ಮುಂದಿರುವ ಗುರಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಗೆ ಸಮೀಪದ ಹಳ್ಳೂರ ಗ್ರಾಮದಲ್ಲಿ ಸೋಮವಾರದಂದು ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಅರಭಾಂವಿ ವಿಧಾನ ಸಭಾ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಸರಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಅನುಷ್ಠಾನ ಮಾಡಲಾಗಿದೆ. ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೆಲ ವಿರೋಧಿಗಳು ಅಪ ಪ್ರಚಾರ ಮಾಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅಂತಹ ಯಾವುದೇ ವದಂತಿಗಳಿಗೆ ಕಿವಿಗೋಡಬಾರದು. ಸಾರ್ವಜನಿಕರನ್ನು ಗೊಂದಲವನ್ನುಂಟು ಮಾಡುವುದೇ ವಿರೋಧಿಗಳ ಕಾಯಕವಾಗಿದೆ ಎಂದು ವ್ಯಂಗ್ಯವಾಡಿದರು.
ಸೆ.6ರಂದು ಕೈ ಬಿಟ್ಟಿದ್ದ ಮೂಡಲಗಿ ಪಟ್ಟಣವನ್ನು ಮರು ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಸರಕಾರದ ಮಟ್ಟದಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದೆ. ದೇವರ ಹಾಗೂ ಜನರ ಆಶೀರ್ವಾದದಿಂದ ಮೂಡಲಗಿ ಹೊಸ ತಾಲೂಕು ಕೇಂದ್ರವಾಗಿ ಉದಯವಾಯಿತು. ಇನ್ನೂ ಮುಂದೆ ಎಲ್ಲರೂ ಒಂದಾಗಿ ಒಗ್ಗಟಾಗಿ ಮೂಡಲಗಿ ತಾಲೂಕಿನ ಅಭಿವೃದ್ದಿಗೆ ಶ್ರಮೀಸೋಣ. ಶ್ರೀಪಾದಬೋಧ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಮೂಡಲಗಿ ತಾಲೂಕನ್ನು ರಾಜ್ಯದಲ್ಲಿ ಮಾದರಿ ಮಾಡೋಣ. ವಯಕ್ತಿಕ ಭಿನ್ನಾಭಿಪ್ರಾಯ ಮರೆತು ಸರ್ವಾಂಗೀಣ ವಿಕಾಸಕ್ಕೆ ಶ್ರಮೀಸೋಣ ಎಂದರು.
ಹಳ್ಳೂರು ಗ್ರಾಮದ ಪ್ರಗತಿಗೆ ಸಾಕಷ್ಟು ಅನುದಾನ ನೀಡಲಾಗಿದೆ. ಗ್ರಾಮಸ್ಥರ ಬೇಡಿಕೆಗಳನ್ನು ಇಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು. ಮುಂದಿನ ದಿನಗಳಲ್ಲಿ ಸರಕಾರಿ ಪ್ರೌಢ ಶಾಲೆ ಹಾಗೂ ಸರಕಾರಿ ಪದವಿ ಮಹಾವಿದ್ಯಾಲಯವನ್ನು ಮಂಜೂರು ಮಾಡಿಸುವದಾಗಿ ಭರವಸೆ ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪಿ.ಡಬ್ಲೂಡಿ ಇಲಾಖೆಯ ಎಸ್ಸಿಪಿ/ಟಿಎಸ್ಪಿ ಯೋಜನೆಯ ಅಡಿಯಲ್ಲಿ 20 ಲಕ್ಷ ರೂ ವೆಚ್ಚದ ಲಕ್ಷ್ಮೀ ದೇವಸ್ಥಾನದಿಂದ ಬಸ್ ನಿಲ್ದಾಣವರೆಗಿನ ರಸ್ತೆ ಕಾಮಗಾರಿ, 22 ಲಕ್ಷ ರೂ ಮೊತ್ತದ ಹರಿಜನ ಕೇರಿಯಿಂದ ಹನಮಂತ ದೇವರ ಗುಡಿಯತನಕ್ಕ ಸಿಸಿ ರಸ್ತೆ, 6.80 ಲಕ್ಷ ರೂ ಮೋತ್ತದ ಸರಕಾರಿ ಕಾಲೇಜಿನ ಕೊಠಡಿಗಳ ನಿರ್ಮಾಣ, ಪಂಚಾಯತ ಹೊಸ ಕಟ್ಟಡ ಕಾಮಗಾರಿ ಹಾಗೂ ಗ್ರಾಮ ಪಂಚಾಯತದಿಂದ ನಿರ್ಮಿಸಲಿರುವ ವಾಣಿಜ್ಯ ಮಳಿಗೆಗಳಿಗೆ ಗುದಲ್ಲಿ ಪೂಜೆ ನೆರವೇರಿಸಿದರು.
ಹಳ್ಳೂರ ಜಿ.ಪಂ ಸದಸ್ಯೆ ವಾಸಂತಿ ತೇರದಾಳ, ತಾ.ಪಂ ಸದಸ್ಯೆ ಸವಿತಾ ಡಬ್ಬನ್ನವರ, ಗ್ರಾ.ಪಂ ಅಧ್ಯಕ್ಷೆ ಕಲಾವತಿ ಮಿರ್ಜಿ, ದೊಡ್ಡಬಸಪ್ಪ ಸಂತಿ, ಬಿ.ಜಿ.ಸಂತಿ, ಭೀಮಶಿ ಮಗದುಮ್, ಬಸಪ್ಪ ಹಡಪದ, ಕುಮಾರ ಲೋಕನ್ನವರ, ಶಂಕರ ಬೋಳನ್ನವರ, ಶಿವಪ್ಪ ಅಟ್ಟಿಮಟ್ಟಿ, ಅಡಿವೆಪ್ಪ ಪಾಲಬಾಂವಿ, ಮಾರುತಿ ಪೂಜೇರ, ಲಕ್ಷ್ಮಣ ಕತ್ತಿ, ಶಿವಪ್ಪ ಕೌಜಲಗಿ, ಗ್ರಾ.ಪಂ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಮೂಡಲಗಿ ಹೊಸ ತಾಲೂಕಿನ ರೂವಾರಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳು ಸತ್ಕರಿಸಿದರು.