ಘಟಪ್ರಭಾ:ಗುರುವಿನಲ್ಲಿ ಶೃದ್ಧೆ,ಭಕ್ತಿಯಿಂದ ನಡೆದುಕೊಂಡರೇ ಜೀವನ ಪಾವನವಾಗುತ್ತದೆ :ಡಾ| ಮುರುಘರಾಜೇಂದ್ರ ಮಹಾಸ್ವಾಮಿಜಿ
ಗುರುವಿನಲ್ಲಿ ಶೃದ್ಧೆ,ಭಕ್ತಿಯಿಂದ ನಡೆದುಕೊಂಡರೇ ಜೀವನ ಪಾವನವಾಗುತ್ತದೆ :ಡಾ| ಮುರುಘರಾಜೇಂದ್ರ ಮಹಾಸ್ವಾಮಿಜಿ
ಘಟಪ್ರಭಾ ಮಾ 28 : ಗುರುವಿನಲ್ಲಿ ಶೃದ್ಧೆ,ಭಕ್ತಿಯಿಂದ ನಡೆದುಕೊಂಡರೇ ಜೀವನ ಪಾವನವಾಗುತ್ತದೆ ಎಂದು ಮುಗಳಖೋಡದ ಶ್ರೀ ಯಲ್ಲಾಲಿಂದ ಮಠದ ಷಡಕ್ಷರಿ ಡಾ| ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ಅವರು ಸಮೀಪದ ಸುಕ್ಷೇತ್ರ ಝಾಂಗಟಿಹಾಳ-ಗುಡಸ ಗ್ರಾಮದ ಮಧ್ಯೆ ಭಾಗದಲ್ಲಿರುವ ಶ್ರೀ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ ಹಾಗೂ ಮರಡಿಸಿದ್ದೇಶ್ವರರ 27ನೇ ಯಾತ್ರಾ ಮಹೋತ್ಸವ ಧಾರ್ಮಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಗುರು ಸೇವೆ ಅತೀ ಅಮೂಲ್ಯವಾದದ್ದು ಗುರುವಿನ ಅನುಗ್ರಹದಿಂದ ಜೀವನದಲ್ಲಿ ಮುಕ್ತಿ ಸಿಗುತ್ತದೆ. ಗುರುವಿನ ಅಪಾರವಾದ ಶಕ್ತಿಯಿಂದ ಸಮಾಜವು ಅಭಿವೃದ್ದಿ ಹೊಂದುತ್ತದೆ. ಗುರುವಿನ ಪಾದಸ್ಪರ್ಶದಿಂದ ಈ ನೆಲ ಪಾವನವಾಗುತ್ತದೆ. ಮಹಾತ್ಮರ ಪ್ರವಚನ ಆಲಿಸುವ ಮೂಲಕ ಮನಸ್ಸು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಮನುಷ್ಯ ತಾವು ದುಡಿಮೆ ಮಾಡಿದ ಒಂದಿಷ್ಟು ಹಣದಲ್ಲಿ ಧಾರ್ಮಿಕ,ಸತ್ಸಂಗ ಕಾರ್ಯಗಳಿಗೆ ನೀಡಬೇಕು. ಒಂದಿಷ್ಟ ಸಮಯವನ್ನು ಮಹಾತ್ಮರ ಸೇವೆಗೆ ಇಡಬೇಕು. ದಿನನಿತ್ಯದ ದುಡಿಮೆಯಿಂದ ನೆಮ್ಮದಿ ಸಿಗಲು ಸಾಧ್ಯವಿಲ್ಲ. ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯುವುದಿಲ್ಲ. ಈ ನಿಟ್ಟಿನಲ್ಲಿ ಭಕ್ತರು ತಮ್ಮ ತನುಮನ ಧನ ದಿಂದ ಶ್ರೀಮಠಕ್ಕೆ ಸಹಾಯ ಸಹಕಾರ ನೀಡಿದ್ದಲ್ಲಿ ಸುಂದರ ಬಾಳನ್ನು ಕಟ್ಟಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮಠದ ಚಂದ್ರಶೇಖರ ಮಹಾಸ್ವಾಮಿಜಿ ವಹಿಸಿದ್ದರು. ವೇದಿಕೆ ಮೇಲೆ ಕೊಟಬಾಗಿಯ ಪ್ರಭುದೇವರು, ರಾಯಪ್ಪ ಶರಣರು, ಶಿರಢಾಣದ ಕಲ್ಯಾಣಿ ಮಹಾರಾಜರು, ಮೃತ್ಯುಂಜಯ ಸ್ವಾಮಿಜಿ, ಮಲ್ಲಪ್ಪ ಶರಣರು, ಕೃಪಾನಂದ ಸ್ವಾಮಿಜಿ, ಚಿದಾನಂದ ಸ್ವಾಮಿಜಿ, ಸತ್ಯಪ್ಪ ಶರಣರು ಇದ್ದರು ಕಾರ್ಯಕ್ರಮವನ್ನು ಲಕ್ಷ್ಮಣ ಆಲೋಶಿ ಶರಣರು ಸ್ವಾಗತಿಸಿ ನಿರೂಪಿಸಿದರು.