ಗೋಕಾಕ:ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲು ಉಪ್ಪಾರ ಸಮಾಜದ ಒತ್ತಾಯ
ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲು ಉಪ್ಪಾರ ಸಮಾಜದ ಒತ್ತಾಯ
ಗೋಕಾಕ ಮೇ 21 : ಕಾಂಗ್ರೇಸ್-ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಚಾಮರಾಜನಗರ ವಿಧಾನ ಸಭಾ ಮತಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಸತತವಾಗಿ 3ನೇ ಬಾರಿ ಆಯ್ಕೆಯಾಗಿರುವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನವನ್ನು ನೀಡಬೇಕೆಂದು ಗೋಕಾಕ ತಾಲೂಕಾ ಉಪ್ಪಾರ ಸಮಾಜದ ಅಧ್ಯಕ್ಷ ರಾಮಣ್ಣಾ ತೋಳಿ ಹಾಗೂ ಕರ್ನಾಟಕ ರಾಜ್ಯ ಉಪ್ಪಾರ ಯುವಕ ಸಂಘದ ರಾಜ್ಯಾಧ್ಯಕ್ಷ ಭರಮಣ್ಣಾ ಉಪ್ಪಾರ ಅವರು ಒತ್ತಾಯಿಸಿದ್ದಾರೆ.
ಸೋಮವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸುಮಾರು 35 ರಿಂದ 40 ಲಕ್ಷದ ವರೆಗೆ ಉಪ್ಪಾರ ಸಮಾಜದ ಜನಸಂಖ್ಯೆಯನ್ನು ಹೊಂದಿದ್ದು, ತಮಿಳುನಾಡು ಗಡಿಭಾಗದ ಜಿಲ್ಲೆಯಾದ ಚಾಮರಾಜನಗರದಿಂದ ಆಯ್ಕೆಯಾದ ಸಿ. ಪುಟ್ಟರಂಗಶೆಟ್ಟಿ ಅವರು ನಮ್ಮ ಸಮಾಜದ ಏಕೈಕ ಶಾಸಕರಾಗಿದ್ದಾರೆ ಅವರನ್ನು ಸಂಪುಟ ದರ್ಜೆ ಸಚಿವರನ್ನಾಗಿಸುವ ಮೂಲಕ ಉಪ್ಪಾರ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ವಿನಂತಿಸಿದರು.
ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಉಪ್ಪಾರ ಸಮಾಜದ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಸಿ. ಪುಟ್ಟರಂಗಶೆಟ್ಟಿ ಅವರು ಹಿರಿಯ ನಾಯಕರು ಹಾಗೂ ಕರ್ನಾಟಕ ರಾಜ್ಯ ಉಪ್ಪಾರ ಸಮಾಜದ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರನ್ನು ಸಚಿವ ಸ್ಥಾನವನ್ನು ನೀಡಿ ಉಪ್ಪಾರ ಸಮಾಜಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಿಗೊಡಬೇಕೆಂದು ತಿಳಿಸಿದರು.
ಗೋಕಾಕ ತಾಲೂಕಿನಲ್ಲಿ ಸಾಮಾಜಿಕ ನ್ಯಾಯದಡಿಯಲ್ಲಿ ಉಪ್ಪಾರ ಸಮಾಜದ ಜೊತೆಗೆ ಎಲ್ಲ ಸಮಾಜಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಜಾರಕಿಹೊಳಿ ಸಹೋದರರಿಗೆ ಕೂಡಾ ಸಚಿವ ಸಂಪುಟದಲ್ಲಿ ಉನ್ನತವಾದ ಸ್ಥಾನವನ್ನು ಕಲ್ಪಿಸಿಕೊಡುವ ಮೂಲಕ ಈ ಭಾಗದ ಜನತೆಯ ಆಶೋತ್ತರಗಳನ್ನು ಈಡೇರಿಸಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಎಸ್.ಎಮ್.ಹತ್ತಿಕಟಗಿ, ಎಲ್.ಎನ್.ಬೂದಿಗೊಪ್ಪ, ಅಡಿವೆಪ್ಪ ಕಿತ್ತೂರ, ಪರಸಪ್ಪ ಚೂನನ್ನವರ, ಕುಶಾಲ ಗುಡೆನ್ನವರ, ಜಿ.ಆರ್.ಪೂಜೇರ, ಯಲ್ಲಪ್ಪ ಸುಳ್ಳನ್ನವರ, ಶಂಕರ ಧರೆನ್ನವರ, ಲಕ್ಕಪ್ಪ ಭೂಮನ್ನವರ ಇದ್ದರು.