ಗೋಕಾಕ:ನಗರಸಭೆಯಿಂದ ಮರುಬಳಕೆ ವಸ್ತುಗಳ ವಿಂಗಡಣೆ ಕುರಿತು ಚಿಂದಿ ಆಯುವವರಿಗೆ ತರಬೇತಿ
ನಗರಸಭೆಯಿಂದ ಮರುಬಳಕೆ ವಸ್ತುಗಳ ವಿಂಗಡಣೆ ಕುರಿತು ಚಿಂದಿ ಆಯುವವರಿಗೆ ತರಬೇತಿ
ಗೋಕಾಕ ಜೂ 5 : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದಲ್ಲಿ ಮರು ಬಳಕೆ ವಸ್ತುಗಳನ್ನು ಆಯ್ದು ಮಾರಾಟ ಮಾಡಿ ತಮ್ಮ ಜೀವನೋಪಾಯ ಮಾಡಿಕೊಂಡಿರುವ ಚಿಂದಿ ಆಯುವವರಿಗೆ ಮಂಗಳವಾರದಂದು ನಗರಸಭೆ ಸಭಾಭವನದಲ್ಲಿ ಮರುಬಳಕೆ ವಸ್ತುಗಳ ವಿಂಗಡಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಪೌರಾಯುಕ್ತ ವಾಸಣ್ಣ ಆರ್. ಅವರು ಮಾತನಾಡಿ, ಚಿಂದಿ ಆಯುವವರು ಅಸಂಘಟಿತರಾಗಿದ್ದು ಇವರು ಪ್ರತಿನಿತ್ಯ ನಗರದಲ್ಲಿ ಮರುಬಳಕೆ ವಸ್ತುಗಳನ್ನು ಆರಿಸಿ ಅವುಗಳನ್ನು ಮಾರಾಟ ಮಾಡಿ ಜೀವನೋಪಾಯ ಮಾಡಿಕೊಂಡಿದ್ದು ಪರೋಕ್ಷವಾಗಿ ಪರಿಸರ ಸಂರಕ್ಷಣೆಗೆ ಜೊತೆಗೆ ನಗರದ ಸ್ವಚ್ಛತೆಗೂ ಕಾರಣರಾಗಿದ್ದಾರೆ ಮತ್ತು ದೇಶದ ಆರ್ಥಿಕತೆಯಲ್ಲಿ ಭಾಗಿದಾರರಾಗಿರುತ್ತಾರೆ. ಮನುಷ್ಯ ತನ್ನ ಐಶಾರಾಮಿ ಜೀವನಕ್ಕಾಗಿ ನೀರು, ಭೂಮಿ, ಗಾಳಿಯನ್ನು ಮಾಲಿನ್ಯ ಮಾಡಿ ಪರಿಸರ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದು, ಇದು ನೇರವಾಗಿ ಮನುಷ್ಯ ಹಾಗೂ ಪ್ರಾಣಿ ಸಂಕುಲನದ ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಪರಿಸರ ಸಂರಕ್ಷಣೆ ಮಾಡದಿದ್ದರೆ ಮನುಕುಲವೆ ನಾಶವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಆದ್ಯತೆಯನ್ನು ನೀಡಬೇಕೆಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ವಿಜಯಲಕ್ಷಿ ಜತ್ತಿ, ಸದಸ್ಯರಾದ ಪರಶುರಾಮ ಭಗತ, ರಾಮಸಿದ್ದ ಹುಚ್ಚರಾಯಪ್ಪಗೋಳ, ರೋಟರಿ ಸಂಸ್ಥೆಯ ಸೋಮಶೇಖರ ಮಗದುಮ್ಮ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವ್ಹಿ.ಎಸ್.ತಡಸಲೂರ, ಪರಿಸರ ಅಭಿಯಂತರರಾದ ಎಂ.ಎಚ್.ಗಜಾಕೋಶ, ಮುಖಂಡರಾದ ಅಬ್ಬಾಸ ದೇಸಾಯಿ ಶಿವಾನಂದ ಹತ್ತಿ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕರಾದ ಜೆ.ಸಿ.ತಾಂಬೋಳಿ, ಆರ್,ಎಸ್,ರಂಗಸುಭೆ, ಕೆ.ಎಸ್.ಕೋಳಿ ಇದ್ದರು.