ಗೋಕಾಕ:ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಸಂಸ್ಥೆಯ ಕಾರ್ಯ ಮಾದರಿಯಾಗಿದೆ : ಡಿ.ದೇವರಾಜ
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಸಂಸ್ಥೆಯ ಕಾರ್ಯ ಮಾದರಿಯಾಗಿದೆ : ಡಿ.ದೇವರಾಜ
ಗೋಕಾಕ ಜು 16 : ಗ್ರಾಮೀಣ ಅಭಿವೃದ್ದಿಯಿಂದ ದೇಶದ ಅಭಿವೃದ್ದಿ ಸಾಧ್ಯವೆಂಬ ಗಾಂಧಿಜೀ ಕನಸನ್ನು ನನಸು ಮಾಡಲು ಶ್ರಮಿಸುತ್ತಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಸಂಸ್ಥೆಯ ಕಾರ್ಯ ಮಾದರಿಯಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ದೇವರಾಜ ಹೇಳಿದರು.
ಅವರು ಸೋಮವಾರದಂದು ನಗರದ ಬಸವೇಶ್ವರ ವೃತ್ತದ ಸಮೀಪವಿರುವ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಾರುಕಟ್ಟೆ ಮಳಿಗೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಡಾ: ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮೀಣ ಭಾಗದ ಮಹಿಳೆಯರನ್ನು ಸಂಘಟಿಸಿ ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿ ಅವರ ಆರ್ಥಿಕ ಹಾಗೂ ಸ್ವ ಉದ್ಯೋಗ ಕೈಗೊಂಡು ಅಭಿವೃದ್ದಿಗೆ ಶ್ರಮಿಸುತ್ತಿರುವುದು ಮಹತ್ತರ ಕಾರ್ಯವಾಗಿದೆ. ಸಂಘದ ಸದಸ್ಯರು ತಯ್ಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಿದ್ದು ಅದರ ಸದುಪಯೋಗದಿಂದ ಆರ್ಥಿಕ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.
ಸಂಸ್ಥೆಯ ಜಿಲ್ಲಾ ಯೋಜನಾಧಿಕಾರಿ ಸುರೇಶ ಮೊಯ್ಲಿ ಮಾತನಾಡುತ್ತಾ ಈ ಮಾರುಕಟ್ಟೆ ಮಳಿಗೆಯಲ್ಲಿ ಆಯುರ್ವೇಧ ಔಷಧಗಳು, ಸಿರಿಧಾನ್ಯಗಳು, ವಸ್ತ್ರಗಳು ಸೇರಿದಂತೆ ಹಲವಾರು ವಸ್ತುಗಳು ಲಬ್ಯವಿದ್ದು, ಜನತೆ ಸಹಕಾರ ನೀಡಿ ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾರುಕಟ್ಟೆ ಅಧಿಕಾರಿ ಸುಧಾಕರ, ಯೋಜನಾಧಿಕಾರಿ ಸುರೇಂದ್ರಕುಮಾರ, ಗಣ್ಯರಾದ ಮೋಹನಶೆಟ್ಟಿ, ಪ್ರೇಮಾ ಶೆಟ್ಟಿ, ಸಂತೋಷ ಶೆಟ್ಟಿ, ಶೇಖರ ಶೆಟ್ಟಿ, ರಮೇಶ ಶೆಟ್ಟಿ, ಇನ್ನರ್ ವ್ಹಿಲ್ ಹಾಗೂ ಜೆಸಿಐ ಸಂಸ್ಥೆಗಳ ಸದಸ್ಯರಾದ ವೀಣಾ ಹಾಗೂ ಸ್ವಪ್ನಾ ಮೆಳವಂಕಿ ಸೇರಿದಂತೆ ಇತರರು ಇದ್ದರು.