ಗೋಕಾಕ:ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಸೇವೆ ಸಮಾಜಕ್ಕೆ ದಾರಿದೀಪವಾಗಿದೆ : ಜಿ.ಬಿ.ಬಳಗಾರ
ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಸೇವೆ ಸಮಾಜಕ್ಕೆ ದಾರಿದೀಪವಾಗಿದೆ : ಜಿ.ಬಿ.ಬಳಗಾರ
ಗೋಕಾಕ ಅಗಸ್ಟ 19-ಮಾನವ ಸಮಾಜದ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಇಲ್ಲಿಯ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಸೇವೆ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಬಿಸಿಯೂಟ ಶಿಕ್ಷಣಾದಿಕಾರಿ ಜಿ.ಬಿ.ಬಳಗಾರ ಹೇಳಿದರು.
ಅವರು ರವಿವಾರದಂದು ಶೂನ್ಯ ಸಂಪಾದನಾ ಮಠದಲ್ಲಿ ಹಮ್ಮಿಕೊಂಡ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಅಭಿನಂದನಾ ಗ್ರಂಥದ ಮುಖಪುಟ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಕಳೆದ 15 ವರ್ಷಗಳಿಂದ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕøತಿಕ ಕಾರ್ಯಕ್ರಗಳ ಜೊತೆಗೆ ಬಸವಾದಿ ಶರಣರ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆಗಾಗಿ ಶ್ರಮಿಸುತ್ತಿದ್ದಾರೆ. ಅವರ ಈ ಕಾರ್ಯಗಳನ್ನು ಒಂದೆಡೆ ತಂದು ಜನರಿಗೆ ತಳಿಸಲು ‘ನಮ್ಮ ಬೆಳಗಾವಿ’ ತಂಡ ಸಾಧಿಕ ಹಲ್ಯಾಳ ಅವರ ನೇತೃತ್ವದಲ್ಲಿ ‘ಮಾತೃ ಹೃದಯಿ’ ಎಂಬ ಅಭಿನಂದನಾ ಗ್ರಂಥ ಹೊರ ತರುವ ಪ್ರಯತ್ನ ಶ್ಲಾಘನೀಯ ಎಂದರಲ್ಲದೆ ಈ ಕೃತಿ ಸಮಾಜಕ್ಕೆ ಮಾದರಿಯಾಗಲಿ ಎಂದು ಹಾರೈಸಿದರು.
ಅಭಿನಂದನಾ ಗ್ರಂಥದ ಸಂಪಾದಕ ಬಳಗದ ಸಾಹಿತಿ ಜಯಾನಂದ ಮಾದರ ಮಾತನಾಡಿ ಪತ್ರಕರ್ತ ಸಾಧಿಕ ಹಲ್ಯಾಳ ಅವರ ಸಂಪಾದಕತ್ವದಲ್ಲಿ ಹೊರ ಬರಲಿರುವ ‘ಮಾತೃಹೃದಯಿ’ ಅಭಿನಂದನಾ ಗ್ರಂಥಕ್ಕೆ ನಾಡಿನ ಸಾಹಿತಿಗಳು, ಅಭಿಮಾನಿಗಳು, ಸದ್ಭಕ್ತರು, ನಿಕಟವರ್ತಿಗಳು ಶ್ರೀಗಳ ಕಾಯಕ ಸೇವೆ, ಧಾರ್ಮಿಕ ಕಾರ್ಯಗಳ ಬಗ್ಗೆ ಸದಭಿಪ್ರಾಯದ ಲೇಖನಗಳನ್ನು ಕೊಡಬೇಕೆಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಡಾ. ಸುರೇಶ ಹನಗಂಡಿ, ಕೃಷಿ ಅಧಿಕಾರಿ ಜನ್ಮಟ್ಟಿ, ಕೊಣ್ಣೂರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಹಿರೇಮಠ, ಮುಖ್ಯಾಧ್ಯಾಪಕ ಗೋಪಾಲ ಮಾಳಗಿ, ಹಿರಿಯ ಜಾನಪದ ಕಲಾವಿದ ಈಶ್ವರಚಂದ್ರ ಬೆಟಗೇರಿ, ಚಂದ್ರಶೇಖರ ಚಳ್ಳಿಗೇರಿ, ಶಕೀಲ ಜಕಾತಿ, ಕೃಷ್ಣಾ ಖಾನಪ್ಪನವರ, ಮುಗುಟ ಪೈಲವಾನ, ಮಂಜು ಪ್ರಭುನಟ್ಟಿ, ದತ್ತು ಕೋಲಕಾರ, ಮಹಾಂತೇಶ ಸೊಲಬನ್ನವರ ಸೇರಿದಂತೆ ಅನೇಕರು ಇದ್ದರು.
ಗ್ರಂಥದ ಸಂಪಾದಕ ಸಾಧಿಕ ಹಲ್ಯಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಸ್.ಕೆ.ಮಠದ ನಿರೂಪಿಸಿ, ವಂದಿಸಿದರು.