RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ಭಾರತ ಬಂದ್: ಮೂಡಲಗಿಯಲ್ಲಿ ಪ್ರತಿಭಟನೆ -ಮನವಿ

ಮೂಡಲಗಿ:ಭಾರತ ಬಂದ್: ಮೂಡಲಗಿಯಲ್ಲಿ ಪ್ರತಿಭಟನೆ -ಮನವಿ 

ಭಾರತ ಬಂದ್: ಮೂಡಲಗಿಯಲ್ಲಿ ಪ್ರತಿಭಟನೆ -ಮನವಿ

ಮೂಡಲಗಿ ಸೆ 10: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಹಾಗೂ ದಿನನಿತ್ಯ ವಸ್ತುಗಳ ದರ ನಿರಂತರ ಏರಿಕೆಯನ್ನು ವಿರೋಧಿಸಿ ಕಾಂಗ್ರೇಸ್ ಪಕ್ಷ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸೋಮವಾರ ಕಾಂಗ್ರೇಸ್ಸ, ಜೆಡಿಎಸ್ ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಟಯರ್‍ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ ತೈಲ ಮತ್ತು ದಿನನಿತ್ಯ ವಸ್ತುಗಳ ಬೆಲೆ ಇಳಿಸುವಂತೆ ಆಗ್ರಹಿಸಿ ಮೂಡಲಗಿ ಗ್ರೇಡ್2 ತಹಶೀಲ್ದಾರ ಎಲ್.ಎಚ್.ಭೋವಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಸಭೆಯಲ್ಲಿ ಜೆಡಿಎಸ್ ಮುಖಂಡ ಭೀಮಪ್ಪ ಗಡಾದ ಮಾತನಾಡಿ, ನೆರೆ ರಾಷ್ಟ್ರಗಳಿಗೆ ನಮ್ಮ ದೇಶದಿಂದಲೇ ಸಂಸ್ಕರಣೆ ಮಾಡಿದ ತೈಲ ಕಡಿಮೆ ದರದಲ್ಲಿ ರಪ್ತು ಆಗುತ್ತಿದ್ದು, ಆದರೆ ನಮ್ಮ ದೇಶದಲ್ಲಿ ದರ ಹೆಚ್ಚಳವಾಗುತ್ತಿರುವುದು ಏಕೆ ಎಂಬ ಪ್ರಶ್ನೇಗೆ ಕೇಂದ್ರ ಸರ್ಕಾರ ಉತ್ತರಿಸಬೇಕಾಗಿದೆ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪ್ರಕಾಶ ಸೋನಾವಲ್ಕರ ಮಾತನಾಡಿ, ಕೇಂದ್ರದ ಮೋದಿ ಸರ್ಕಾರವೂ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದೇ ಜನರಿಗೆ ಮೋಸ ಮಾಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕಶಾಸ್ತಿ ನೀಡಬೇಕು ಎಂದು ಹೇಳಿದರು.
ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ ಮಾತನಾಡಿ, ಅಚ್ಚೆ ದಿನ್ ಆಯೇಗಾ ಎಂದು ಹೇಳುವ ಮೋದಿಯೂ ದೇಶದ ಜನತೆಗೆ ಕಷ್ಟದ ಮೇಲೆ ಕಷ್ಟವನ್ನೆ ನೀಡುತ್ತಿದ್ದಾರೆ ವಿನಃ ಅಚ್ಚೆ ದಿನ್ ಬರ್ತಾನೆ ಇಲ್ಲ ಎಂದರು.
ಕಾಂಗ್ರೇಸ್ ಹಿರಿಯ ಮುಖಂಡ ಎಸ್.ಆರ್ ಸೋನವಾಲ್ಕರ ಮಾತನಾಡಿ, ದಿನನಿತ್ಯ ಬೇಕಾಗುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುವುದರಿಂದ ಜನಸಾಮಾನ್ಯರು ಪರದಾಡುವ ಸ್ಥಿತಿ ಉಂಟಾಗಿದೆ. ಕೇಂದ್ರ ಸರ್ಕಾರವೂ ಅದಷ್ಟು ಬೇಗ ಅಗತ್ಯವಸ್ತುಗಳ ಬೆಲೆಯನ್ನು ಇಳಿಸಬೇಕಾಗಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಈರಣ್ಣ ಕೊಣ್ಣುರ, ಮಲ್ಲಪ್ಪ ಮದುಗುಣಕಿ, ಬಿ.ವಾಯ್. ಶಿವಾಪೂರ, ಗಿರೀಶ ಕರಡಿ, ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಶಿವರೆಡ್ಡಿ ಹುಚರೆಡ್ಡಿ ಮಾತನಾಡಿದರು.
ಭಾರತ್ ಬಂದ್‍ನಿಂದಾಗಿ ಪಟ್ಟಣದಲ್ಲಿಯ ಎಲ್ಲ ಶಾಲಾ-ಕಾಲೇಜ್ ರಜೆ ಘೋಷಿಸಿದ್ದವು. ಬಂದ್‍ಗೆ ಸರ್ಕಾರಿ ಸಾರಿಗೆ ಸೇರಿದಂತೆ ಖಾಸಗಿ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು.

Related posts: