ಖಾನಾಪುರ:ಕೆಸರು ಗದ್ದೆ ದಾಟಿ ಶಾಲೆ ಸೇರಬೇಕು:ಕಕ್ಕೇರಿ ವಿದ್ಯಾರ್ಥಿಗಳ ದೈನಂದಿನ ಅಳಲು ಪರಿಹರಿಸುವವರಿಲ್ಲ
ಕೆಸರು ಗದ್ದೆ ದಾಟಿ ಶಾಲೆ ಸೇರಬೇಕು:ಕಕ್ಕೇರಿ ವಿದ್ಯಾರ್ಥಿಗಳ ದೈನಂದಿನ ಅಳಲು ಪರಿಹರಿಸುವವರಿಲ್ಲ
ಖಾನಪುರ ಜೂ 15: ಮಳೆ ಆಯಿತು ಎಂದರೆ ಶಿಕ್ಷಕರು ಪ್ಯಾಂಟ್ ಏರಿಸಿಕೊಂಡು ಮತ್ತು ವಿದ್ಯಾರ್ಥೀಗಳು ಸರ್ಕಸ್ ಮಾಡುತ್ತ ಈ ರಸ್ತೆಯಲ್ಲಿ ಸಾಗಬೇಕು.ಬಿದ್ದು ಅವಮಾನಗೊಳ್ಳಬಹುದು ಅಥವಾ ಪೆಟ್ಟು ಬೀಳಬಹುದೆಂಬ ಆತಂಕದಲ್ಲಿ ಕೈಯಲ್ಲಿ ಜೀವ ಹಿಡಿದುಕೊಂಡು ಹೆಜ್ಜೆ ಇಡುತ್ತಿದ್ದಾರೆ.ಶಾಲೆ ಸೇರುವ ಮುಂಚೆ ಚಪ್ಪಲಿ,ಕಾಲು ತೊಳೆದುಕೊಂಡು ತರಗತಿಗಳಿಗೆ ಹಾಜರಾಗಲು ನಿತ್ಯ ಹರಸಾಹಸ ಪಡಬೇಕಾದ ಪರಿಸ್ಥಿತಿ ಕಕ್ಕೇರಿ ಎಸ್.ಬಿ.ಪ್ರೌಢಶಾಲೆಯ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ದೈನಂದಿನ ಅಳಲು ಪರಿಹರಿಸುವವರಿಲ್ಲ. ಈ ಪರಿಸ್ಥಿತಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಲು ಕಾರಣವಾಗುತ್ತಿದೆ.
ಬಸ್ ನಿಲ್ದಾಣ ದಾಟಿ ಮೂಕಮ್ಮನ ಮೆಳೆ ಮುಂದಿನ ಸಿ.ಸಿ.ರಸ್ತೆ ಕಿತ್ತು ಹಾಳಾಗಿದ್ದು,ಪೂರ್ವಕ್ಕೆ ಸ್ವಲ್ಪ ಮುಂದೆ ಸಾಗಿದರೆ ಸಿಮೆಂಟ್ ಇಲ್ಲದ ಮಣ್ಣಿನ ರಸ್ತೆ ಸಂಪೂರ್ಣ ಹಾಳಾಗಿ ಕೆಸರು ತುಂಬಿ ಕೆಸರು ಗದ್ದೆ ಆಗಿದೆ. ನಿತ್ಯ ಅದೇ ಮಾರ್ಗವಾಗಿ ಟ್ಯ್ರಾಕ್ಟರ್ಗಳು,ಎತ್ತಿನ ಗಾಡಿ ಓಡಾಡುವುದರಿಂದ ಮತ್ತಷ್ಟು ರಸ್ತೆ ಹದಗೆಟ್ಟಿದೆ.ಈ ಕುರಿತು ಅನೇಕ ಸಲ ಗ್ರಾ.ಪಂ.ಯ ಜನಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ.
ಎಲ್ಲ ವರ್ಗದ ಮಕ್ಕಳು ಇಲ್ಲಿ ವಿದ್ಯೆ ಕಲಿಯಲು ಶಾಲೆಗೆ ಬರುತ್ತಿದ್ದು,ಯಾವ ಪಾಲಕರೂ ಈ ರಸ್ತೆ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ.
ಜನಪ್ರತಿನಿಧಿಗಳು,ಸಂಬಂಧಿಸಿದ ಅಧಿಕಾರಿಗಳು,ಶಾಸಕರು ಇತ್ತ ಗಮನಹರಿಸಿ ರಸ್ತೆಗೆ ತಕ್ಷಣ ಖಡಿ ಮತ್ತು ಮೋರಂ ಹಾಕಿಸಿ ಗಟ್ಟಿಗೊಳಿಸಿದರೆ ವಿದ್ಯಾರ್ಥಿಗಳಿಗೆ,ಶಿಕ್ಷಕರಿಗೆ, ಹೊಸ ಓಣಿಯ ಜನರಿಗೆ ಓಡಾಡಲು ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ