ಗೋಕಾಕ:ರೈತರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಗೋಕಾಕದಲ್ಲಿ ರೈತ ಸಂಘಟನೆಗಳ ಪ್ರತಿಭಟನೆ
ರೈತರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಗೋಕಾಕದಲ್ಲಿ ರೈತ ಸಂಘಟನೆಗಳ ಪ್ರತಿಭಟನೆ
ಗೋಕಾಕ ಅ 3 : ರೈತರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲು ಆಗಮಿಸಿದಾಗ ಅವರನ್ನು ಹೊಸದಿಲ್ಲಿಗೆ ಪ್ರವೇಶ ನೀಡದೆ ಅವರ ಮೇಲೆ ಲಾಠೀಚಾರ್ಜ ಹಾಗೂ ಜಲ ಫಿರಂಗಿ ಉಪಯೋಗಿಸಿ ದೌರ್ಜನ್ಯವೆಸಗಿದ್ದನ್ನು ವಿರೋಧಿಸಿ ರಾಜ್ಯ ರೈತ ಸಂಘದ ಎರಡು ಗುಂಪುಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಘಟನೆ ನಗರದಲ್ಲಿ ಬುಧವಾರದಂದು ಜರುಗಿದೆ.
ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ ನೇತೃತ್ವದಲ್ಲಿ ಒಂದು ಗುಂಪು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿ ಅಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಹಾಗೂ ಉತ್ತರ ಪ್ರದೇಶ ಸರಕಾರದ ವಿರುದ್ಧ ಘೋಷಣೆ ಕೂಗಿ ರೈತರ ಮೇಲೆ ನಡೆದ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದರು.
ನಂತರ ಗೋಕಾಕ ತಹಶೀಲದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹಸಿರು ಸೇನೆ ಜಿಲ್ಲಾಧ್ಯಕ್ಷ ಗಣಪತಿ ಇಳಿಗೇರ, ತಾಲೂಕಾ ಅಧ್ಯಕ್ಷ ಮುತ್ತೆಪ್ಪ ಬಾಗನ್ನವರ, ಸಂಚಾಲಕರಾದ ಮುತ್ತೆಪ್ಪ ಕುರಬರ, ದೇವೇಂದ್ರ ಮಕ್ಸಾರ, ಮಹಾದೇವ ಗುಡೇರ, ನಾಗಪ್ಪ ಕಪರಟ್ಟಿ, ಕುಮಾರ ತಿಗಡಿ, ಭೀಮಶಿ ಹುಲಕುಂದ, ಯಲ್ಲಪ್ಪ ಇಳಿಗೇರ, ಮಲ್ಲಿಕಾರ್ಜುನ ಇಳಿಗೇರ, ಮಂಜುನಾಥ ಜಲ್ಲಿ, ಶಿವಾನಂದ ಇಳಿಗೇರ, ಈರಪ್ಪ ಖನಗಾರ, ಗುರುಪುತ್ರ ಪರವಣ್ಣಿ, ವೀರಭದ್ರ ಶಿರಗಾಂವಿ, ಪ್ರಕಾಶ ಸನದಿ, ಶಿವಲಿಂಗಪ್ಪ ಶೀಗಿಹೊಳಿ, ಲಿಂಗರಾಜ ಗೌಡರ, ಶಂಕರ ಮದಿಹಳ್ಳಿ ಸೇರಿದಂತೆ ಅನೇಕರು ಇದ್ದರು.
ಅದೇರೀತಿ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಸತ್ತೆಪ್ಪ ಮಲ್ಲಾಪೂರ (ಚೂನಪ್ಪ ಪೂಜೇರಿ ಗುಂಪು) ಅವರ ನೇತೃತ್ವದಲ್ಲಿ ಒಂದು ಗುಂಪು ಮಿನಿ ವಿಧಾನಸೌಧಕ್ಕೆ ಆಗಮಿಸಿ ಕೇಂದ್ರ ಸರಕಾರ ಹಾಗೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ವ್ಯಕ್ತಪಡಿಸಿದರು.
ಗೋಕಾಕ ತಹಶೀಲದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಕಾರ್ಯದರ್ಶಿ ಭರಮಣ್ಣ ಖೆಮಲಾಪೂರೆ, ತಾಲೂಕಾಧ್ಯಕ್ಷ ರಾಜು ಹೂಲಿಕಟ್ಟಿ, ಮಂಜು ಗದಾಡಿ, ಈರಣ್ಣ ಸಸಾಲಟ್ಟಿ, ರಾಮಪ್ಪ ಡಬಾಜ, ಯಲ್ಲಪ್ಪ ಕೊಳವಿ, ಪ್ರದೀಪ ಪೂಜೇರಿ ಶಿದ್ರಾಮ ಪೂಜೇರಿ, ಬಸು ನಾಯ್ಕ, ಸಿದ್ದಲಿಂಗ ಪೂಜೇರಿ, ಅಡಿವೆಪ್ಪ ಅಲಿಪ್ಪನ್ನವರ, ಯಲ್ಲಪ್ಪ ತಿಗಡಿ, ರಾಮಣ್ಣ ಡಬಾಜ ಸೇರಿದಂತೆ ಅನೇಕರು ಇದ್ದರು.
ಗೋಕಾಕ ತಾಲೂಕಿನಲ್ಲಿ ರಾಜ್ಯ ರೈತ ಸಂಘ ಎರಡು ಗುಂಪುಗಳಾಗಿ ಹೋಳಾಗಿದ್ದು ಇದರಿಂದ ರೈತ ಚಳುವಳಿಗೆ ಹಿನ್ನೆಡೆ ಎಂದು ಸಾರ್ವಜನಿಕರು ಮಾತಾಡಿಕೊಳ್ಳುವದು ಕಂಡು ಬಂದಿತು.