ಗೋಕಾಕ:ಕಟ್ಟೀಮನಿ ಅವರು.ಕುಂದರನಾಡಿನ ಅತ್ಯಮೂಲ್ಯ ರತ್ನ :ಡಾ. ಸಿದ್ಧರಾಮ ಮಹಾಸ್ವಾಮೀಜಿ
ಕಟ್ಟೀಮನಿ ಅವರು.ಕುಂದರನಾಡಿನ ಅತ್ಯಮೂಲ್ಯ ರತ್ನ :ಡಾ. ಸಿದ್ಧರಾಮ ಮಹಾಸ್ವಾಮೀಜಿ
ಗೋಕಾಕ ನ 4 : ಒಳ್ಳೆಯದನ್ನು ಪ್ರೀತಿಸಿ, ಪ್ರೋತ್ಸಾಹಿಸಿ ಗೌರವಿಸುವುದು ಬಸವರಾಜ ಕಟ್ಟೀಮನಿ ಅವರ ತತ್ವ ಹಾಗೂ ಕಾರ್ಯ ಶೈಲಿಯಾಗಿತ್ತು ಎಂದು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠ ಹಾಗೂ ಡಂಬಳ-ಗದಗ ಶ್ರೀ ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ಸಿದ್ಧರಾಮ ಮಹಾಸ್ವಾಮೀಜಿ ಹೇಳಿದರು.
ಭಾನುವಾರ ಇಲ್ಲಿಯ ರೋಟರಿ ರಕ್ತಭಂಡಾರದ ಸಭಾ ಭವನದಲ್ಲಿ ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಹಾಗೂ ಸ್ಥಳೀಯ ಭಾವಸಂಗಮದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವರಾಜ ಕಟ್ಟೀಮನಿ ಕಾದಂಬರಿ, ಕಥೆ ಮತ್ತು ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯುವ ಸಾಹಿತ್ಯ ಪುರಸ್ಕಾರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರವನ್ನು ಸದಾ ಪ್ರೋತ್ಸಾಹಿಸುತ್ತಲೇ ಬಂದಿದ್ದ ಕಟ್ಟೀಮನಿ ಅವರು ಒಬ್ಬ ಕುಂದರನಾಡಿನ ಅತ್ಯಮೂಲ್ಯ ರತ್ನ ಎಂದು ಬಣ್ಣಿಸಿದರು.
ಬಸವರಾಜ ಕಟ್ಟೀಮನಿ ಅವರು ಉತ್ತರ ಕರ್ನಾಟಕ ಕಂಡ ಬಹುದೊಡ್ಡ ಪ್ರಗತಿಶೀಲ ಸಾಹಿತಿ, ಕಾದಂಬರಿಕಾರ, ಪತ್ರಿಕೋದ್ಯಮಿ ಎಂದೂ ವಿಶ್ಲೇಷಿಸಿದರು.
ಕೇಂದ್ರ ಸಾಹಿತ್ಯ ಅಕ್ಯಾಡೆಮಿಯ ಅಧ್ಯಕ್ಷರೂ ಆಗಿರುವ ಮತ್ತು ಜ್ಞಾನಪೀಠ ಪುರಸ್ಕøತ ಖ್ಯಾತ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಅವರು ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ನೀಡಿದ “ಕಾದಂಬರಿ” ಪ್ರಶಸ್ತಿ ಮತ್ತು ನಗದು ರೂ. 50 ಸಾವಿರ ಮೊತ್ತ ಸ್ವೀಕರಿಸಿ, ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಿ ಮಾತನಾಡುತ್ತ, ಈ ನಾಡಿನ ಹೆಸರಾಂತ ಸಾಹಿತಿ ಕೃಷ್ಣಮೂರ್ತಿ ಪುರಾಣಿಕರು ಹಾಗೂ ಬಸವರಾಜ ಕಟ್ಟೀಮನಿ ಅವರ ಕೃಪೆಯೇ ನನ್ನ ಸಾಧನೆಗಳಿಗೆ ಕಾರಣವಾಗಿವೆ ಎಂದು ಅತ್ಯಂತ ಹೆಮ್ಮೆಯಿಂದ ಹೇಳಿಕೊಂಡರು.
ಅಂದಿನ ದಿನಗಳಲ್ಲಿ ವಿದ್ಯಾರ್ಥಿ ಜೀವನಕ್ಕೆ ನೆರವಾದ ನಾಗನೂರ ಸ್ವಾಮೀಜಿಯವರ ಬೋರ್ಡಿಂಗ್ ಇಲ್ಲದಿದ್ದರೂ ನಾವಿಂದು ಈ ಹಂತ ತಲುಪಲು ಆಗುತ್ತಲೇ ಇರಲಿಲ್ಲ ಎಂದು ವೇದಿಕೆಯಲ್ಲಿದ್ದ ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿಯವರತ್ತ ಗಮನ ಹರಿಸಿ ಇಂಥ ಶ್ರೀಮಠಗಳ ಆಶೀರ್ವಾದದಿಂದ ಅನೇಕ ಸಾಹಿತಿಗಳು ಸೃಷ್ಠಿಗೊಳ್ಳಲು ನೆರವಾಗಿದೆ ಎಂದು ತಿಳಿಸಿದರು.
ಅದೇ ರೀತಿ ಪ್ರತಿಷ್ಠಾನ ಪರ ಕೊಡಮಾಡಿದ “ಕಥಾ” ಪ್ರಶಸ್ತಿ ಸ್ವೀಕರಿಸಿದ ಚಂದ್ರಕಾಂತ ಕುಸನೂರು ಮತ್ತು “ಪತ್ರಿಕೋದ್ಯಮಿ” ಪ್ರಶಸ್ತಿ ಸ್ವೀಕರಿಸಿದ ಡಾ. ಜಗದೀಶ ಕೊಪ್ಪ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಕೊಡಮಾಡಿದ ಯುವ ಸಾಹಿತ್ಯ ಪುರಸ್ಕಾರವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರು “ಆ ಬದಿಯ ಹೂವು ಕಥಾ ಸಂಕಲನಕ್ಕೆ 2015ನೇ ಸಾಲಿನ ಪ್ರಶಸ್ತಿ ದೀಪ್ತಿ ಭದ್ರಾವತಿ ಅವರಿಗೆ, “ರೊಟ್ಟಿ ಮುಟಗಿ” ಕಾದಂಬರಿ 2016ನೇ ಸಾಲಿನ ಪ್ರಶಸ್ತಿ ಟಿ.ಎಸ್.ಗೊರವರ ಅವರಿಗೆ, “ದೇವರು ಕಚ್ಚಿದ ಸೇಬು” ಕಥಾಸಂಕಲನ 2017ನೇ ಸಾಲಿನ ಪ್ರಶಸ್ತಿ ದಯಾನಂದ ಅವರಿಗೆ, “ಬೇರು” ಕಾದಂಬರಿ 2017ನೇ ಸಾಲಿನ ಪ್ರಶಸ್ತಿ ಫಕೀರ (ಶ್ರೀಧರ ಬನವಾಸಿ) ಹಾಗೂ ಸಮಾರಂಭದಲ್ಲಿ ಗೈರು ಹಾಜರ ಉಳಿದಿದ್ದ ಶಾಂತಿ ಅಪ್ಪಣ್ಣ ಅವರ “ಮನಸು ಅಭಿಸಾರಿಕೆ” ಕಥಾ ಸಂಕಲನ 2016ನೇ ಸಾಲಿನ ಪ್ರಶಸಿಗ್ತೆ ಭಾಜನವಾಯಿತು. ಪುರಸ್ಕಂತರ ಕೃತಿಗಳ ಕುರಿತು ಪ್ರೊ. ದುಷ್ಯಂತ ನಾಡಗೌಡ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಅವರು ಮಾತನಾಡಿ, ಯುವ ಪ್ರತಿಭೆಗಳ ಕೊರತೆ ನಮ್ಮಲ್ಲಿದೆ ಎಂಬ ಭಾವನೆ ನಮಗೆ ಬೇಡವೇ ಬೇಡ ಎಂದರು. ಸನ್ 2019ನ್ನು ಕಟ್ಟೀಮನಿ ಶತಮಾನೋತ್ಸವ ಎಂದು ಆಚರಿಸಲು ಪ್ರತಿಷ್ಠಾನ ತೀರ್ಮಾನಿಸಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ, ಪ್ರತಿಷ್ಠಾನದ ಸದಸ್ಯ ಶಿವಕುಮಾರ ಕಟ್ಟೀಮನಿ, ಭಾವಸಂಗಮ ಅಧ್ಯಕ್ಷ ಮಹಾಂತೇಶ ತಾಂವಶಿ ಮೊದಲಾದವರು ಇದ್ದರು.
ಪ್ರತಿಷ್ಠಾನದ ಸದಸ್ಯರಾದ ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರೆ, ಇನ್ನೋರ್ವ ಸದಸ್ಯ ಪ್ರೊ. ಚಂದ್ರಶೇಖರ ಅಕ್ಕಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿರೀಷ ಜೋಶಿ ಮತ್ತು ಶೈಲಾ ಕೊಕ್ಕರಿ ನಿರೂಪಿಸಿದರು. ಪ್ರೊ. ಗಂಗಾಧರ ಮಳಗಿ ವಂದಿಸಿದರು.