ಗೋಕಾಕ:170 ಕೋಟಿ ರೂ. ವೆಚ್ಚದ ಕಲ್ಮಡ್ಡಿ ಯಾತ ನೀರಾವರಿ ಯೋಜನೆಗೆ ನಾಳಿನ ಬಜೆಟ್ನಲ್ಲಿ ಅನುಮೋದನೆ : ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ.
170 ಕೋಟಿ ರೂ. ವೆಚ್ಚದ ಕಲ್ಮಡ್ಡಿ ಯಾತ ನೀರಾವರಿ ಯೋಜನೆಗೆ ನಾಳಿನ ಬಜೆಟ್ನಲ್ಲಿ ಅನುಮೋದನೆ : ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ.
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 7 :
ಕೌಜಲಗಿ ಮತ್ತು ಸುತ್ತಲಿನ ಗ್ರಾಮಗಳ ರೈತರ ಬಹುನಿರೀಕ್ಷಿತ ಬೇಡಿಕೆಯಾಗಿದ್ದ ಕಲ್ಮಡ್ಡಿ ಯಾತ ನೀರಾವರಿ ಯೋಜನೆಗೆ ನಾಳೆ ನಡೆಯಲಿರುವ ಬಜೆಟ್ನಲ್ಲಿ ಸರ್ಕಾರ ಅನುಮೋದನೆ ನೀಡುವ ವಿಶ್ವಾಸವನ್ನು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಕಲ್ಮಡ್ಡಿ ಯಾತ ನೀರಾವರಿ ಯೋಜನೆಯನ್ನು ಅನುಷ್ಠಾನ ಮಾಡುವ ಸಂಬಂಧ ರೈತರಿಗೆ ಭರವಸೆ ನೀಡಿದಂತೆ 170 ಕೋಟಿ ರೂ.ಗಳ ಮೊತ್ತದ ಈ ಕಾಮಗಾರಿಗೆ ನಾಳೆ(ಫೆ.8) ನಡೆಯುವ ಮುಂಗಡ ಪತ್ರದಲ್ಲಿ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೇನೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳು ಈ ಕಾಮಗಾರಿಯನ್ನು ಬಜೆಟ್ನಲ್ಲಿ ಸೇರಿಸಿ ಅನುದಾನ ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ.
ಕೌಜಲಗಿ, ಬಿಲಕುಂದಿ, ಗೋಸಬಾಳ, ಬಗರನಾಳ, ಮನ್ನಿಕೇರಿ ಹಾಗೂ ದಾಸನಾಳ ಗ್ರಾಮಗಳನ್ನೊಳಗೊಂಡ ಸುಮಾರು 10 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರಕಲಿದೆ. ಘಟಪ್ರಭಾ ನದಿಯಿಂದ ತಳಕಟ್ನಾಳ ಗ್ರಾಮದ ಹತ್ತಿರ ಜಾಕವೆಲ್ ನಿರ್ಮಿಸಿ ಯಾತ ನೀರಾವರಿ ಮೂಲಕ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಈ ಕಾಮಗಾರಿ ಅನುಷ್ಠಾನದಿಂದಾಗಿ 0.57 ಟಿಎಂಸಿ ನೀರನ್ನು ರೈತರ ಜಮೀನುಗಳಿಗೆ ಹರಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.