ಬೆಳಗಾವಿ:ಪ್ಯಾಕೇಜ್ ಟೆಂಡರ್ನ್ನು ಕೂಡಲೇ ರದ್ದುಪಡಿಸಬೇಕು : ಸಂಸದ ಸುರೇಶ ಅಂಗಡಿ
ಪ್ಯಾಕೇಜ್ ಟೆಂಡರ್ನ್ನು ಕೂಡಲೇ ರದ್ದುಪಡಿಸಬೇಕು : ಸಂಸದ ಸುರೇಶ ಅಂಗಡಿ
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಫೆ 20 :
ಘಟಪ್ರಭಾ ಎಡದಂಡೆ ಕಾಲುವೆಯ ಆಧುನೀಕರಣಕ್ಕಾಗಿ ಕರೆದಿರುವ ಕಾಮಗಾರಿ ಪ್ಯಾಕೇಜ್ ಟೆಂಡರ್ನ್ನು ಕೂಡಲೇ ರದ್ದುಪಡಿಸಬೇಕು ಇಲ್ಲದೇ ಹೋದಲ್ಲಿ ಗುತ್ತಿಗೆದಾರರೊಂದಿಗೆ ಸೇರಿ ತಾವು ಕೂಡ ಧರಣಿಯಲ್ಲಿ ಪಾಲ್ಗೊಳ್ಳುವುದಾಗಿ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ಕರ್ನಾಟಕ ನೀರಾವರಿ ನಿಗಮದ ಕಛೇರಿ ಆವರಣದಲ್ಲಿ ಗುತ್ತಿಗೆದಾರರು ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಬೆಳಗಾವಿ ಜಿಲ್ಲೆಯ ಗುತ್ತಿಗೆದಾರರಿಗೆ ಅನ್ಯಾಯವಾಗಲು ಬಿಡುವುದಿಲ್ಲವೆಂದು ತಿಳಿಸಿದರು.
ಜಿಎಲ್ಬಿಸಿ ಮುಖ್ಯ ಕಾಲುವೆ ಆಧುನೀಕರಣಕ್ಕಾಗಿ ಕರೆದಿರುವ ಪ್ಯಾಕೇಜ್ ಟೆಂಡರ್ ರಾಜ್ಯದ ಪ್ರಭಾವಿ ಸಚಿವರೊಬ್ಬರ ಆಪ್ತನಿಗೆ ನೀಡುವ ಸಂಬಂಧ ಅಧಿಕಾರಿಗಳು ತುರ್ತಾಗಿ ಟೆಂಡರ್ ಆಹ್ವಾನಿಸಿದ್ದಾರೆ. ಅಲ್ಲದೇ ಕಾಮಗಾರಿಗೆ ಟೆಂಡರನ್ನು ಸಲ್ಲಿಸುವ ಕೊನೆಯ ದಿನಾಂಕ(ಫೆ.20) ಇಂದೇ ಆಗಿದೆ. ಅಧಿಸೂಚನೆಯಲ್ಲಿ ಹಾಕಲಾಗಿರುವ ಕರಾರುಗಳು ಸರ್ಕಾರದ ಆದೇಶ ಹಾಗೂ ಸುತ್ತೋಲೆಗಳಿಗೆ ಅನುಗುಣವಾಗಿಲ್ಲ. 829.07 ಕೋಟಿ ರೂ.ಗಳ ಕಾಮಗಾರಿಯನ್ನು ಒಂದೇ ಪ್ಯಾಕೇಜ್ ಟೆಂಡರನ್ನು ಉದ್ಧೇಶಪೂರ್ವಕವಾಗಿಯೇ ಅಹ್ವಾನಿಸಿದ್ದಾರೆ. ಇದರಿಂದ ನಮ್ಮ ನಿರುದ್ಯೋಗಿ ಗುತ್ತಿಗೆದಾರರಿಗೆ ಅನ್ಯಾಯವಾದಂತಾಗಿದೆ ಎಂದು ಅಂಗಡಿ ಆರೋಪಿಸಿದರು.
ಗುತ್ತಿಗೆದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು 829.07 ಕೋಟಿ ರೂ.ಗಳ ಕಾಮಗಾರಿಯ ಟೆಂಡರನ್ನು ಕೂಡಲೇ ರದ್ದುಪಡಿಸಬೇಕು. ಒಂದೇ ಪ್ಯಾಕೇಜ್ ಟೆಂಡರ್ನ್ನು ವಿಂಗಡಣೆ ಮಾಡಿ ಕಿ.ಮೀ.ವಾರು ಟೆಂಡರಗಳನ್ನು ಕರೆದು ಗುತ್ತಿಗೆದಾರರ ಹಿತ ಕಾಪಾಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಸಂಸದ ಸುರೇಶ ಅಂಗಡಿ ಅವರಿಗೆ ಜಿಲ್ಲಾ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ ಅರ್ಪಿಸಲಾಯಿತು.
ಬುಧವಾರದಂದು ಸತತ 4ನೇ ದಿನಕ್ಕೆ ಕಾಲಿಟ್ಟಿರುವ ಗುತ್ತಿಗೆದಾರರ ಧರಣಿ ಸತ್ಯಾಗ್ರಹದಲ್ಲಿ ಜಿಲ್ಲಾಧ್ಯಕ್ಷ ಡಿ.ಎಲ್. ಕುಲಕರ್ಣಿ, ಉಪಾಧ್ಯಕ್ಷ ಎನ್.ಎಸ್. ಚೌಗಲಾ, ಹೆಚ್.ಡಿ. ಮುಲ್ಲಾ, ರಾಜು ಸುಬೇದಾರ, ಬಸವರಾಜ ಮಟಗಾರ, ಹೆಚ್.ಡಿ. ಹಮ್ಮಣಿ, ಐ.ಎಂ. ಶಿವಾಪೂರ, ಮೈಲಾರ ಬಸಿಡೋಣಿ, ಬಿ.ಪಿ. ನಾಯಕ, ಅಶೋಕ ಹಸರಂಗಿ, ಸೇರಿದಂತೆ ಜಿಲ್ಲೆಯ ಸುಮಾರು 400ಕ್ಕೂ ಅಧಿಕ ಗುತ್ತಿಗೆದಾರರು ಪಾಲ್ಗೊಂಡಿದ್ದರು.